ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬ್ಯಾಂಕ್ಗಳಲ್ಲಿ ಸಾಲ ಮಂಜೂರಾತಿಗಾಗಿ ಬಾಕಿ ಇರುವ ಎಲ್ಲ ಅರ್ಜಿಗಳನ್ನು ಇತ್ಯರ್ಥಪಡಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ ಬ್ಯಾಂಕ್ ಅಧಿಕಾರಿಗಳಿಗೆ 15 ದಿನಗಳ ಗುಡುವು ನೀಡಿದರು.ನಗರದ ಜಿಪಂ ಸಭಾಭವನದಲ್ಲಿ ಬುಧವಾರ ಜಿಲ್ಲಾ ಅಗ್ರಣಿ ಬ್ಯಾಂಕ್ನಿಂದ ಜರುಗಿದ ಬ್ಯಾಂಕರ್ಸ್ಗಳ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರದ ಯೋಜನೆಗಳಿಗೆ ಬ್ಯಾಂಕ್ಗಳು ಸಾಲ ಕೊಡದೇ ಇದ್ದರೆ ಹೇಗೆ? ಹೀಗಾದರೆ ಯೋಜನೆಗಳು ಹೇಗೆ ಅನುಷ್ಠಾನಗೊಳ್ಳಬೇಕು ಎಂದು ಪ್ರಶ್ನಿಸಿದರು. ಕಾಟಾಚಾರಕ್ಕೆ ಸಭೆಗೆ ಬರಬೇಡಿ, ಕೇವಲ ಸಭೆ ನಡೆಸುವುದು, ನಿರ್ದೇಶನ ನೀಡುವುದೇ ಆಗುತ್ತಿದೆ. ಯಾವುದೇ ರೀತಿಯ ಕೆಲಸವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದಿನ ವರ್ಷಗಳ ಅರ್ಜಿಗಳು ಶೇ.50 ರಷ್ಟು ಬಾಕಿ ಉಳಿದಿವೆ. ಎಸ್ಬಿಐನಲ್ಲಿ ಹೆಚ್ಚಿನ ಅರ್ಜಿ ಬಾಕಿ ಇದ್ದು, ಕೂಡಲೇ ವಿಲೇಯಾಗಬೇಕು. 6 ತಿಂಗಳುಗಟ್ಟಲೇ ಅರ್ಜಿಗಳನ್ನು ಇಟ್ಟುಕೊಂಡರೆ ಹೇಗೆ? ಅರ್ಹತೆ ಇದ್ದವರಿಗೆ ಸಾಲ ವಿತರಿಸಬೇಕು. ದಾಖಲಾತಿ ಸರಿಯಾಗಿ ಇರದಿದ್ದರೆ ರಿಜೆಕ್ಟ್ ಮಾಡುವಂತೆ ಹೇಳಿದರು. ಸಂಬಂಧಿಸಿದ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿಕೊಂಡು 15 ದಿನಗಳ ಒಳಗಾಗಿ ಎಲ್ಲ ಅರ್ಜಿಗಳನ್ನು ವಿಲೇ ಮಾಡಬೇಕು. ಬಾಕಿ ಉಳಿದಲ್ಲಿ ಸಂಬಂಧಿಸಿದ ಬ್ಯಾಂಕ್ ಮೇಲಾಧಿಕಾರಿಗಳಿಗೆ ಶಿಸ್ತುಕ್ರಮಕ್ಕಾಗಿ ಪತ್ರ ಬರೆಯಲಾಗುವುದೆಂದು ಎಚ್ಚರಿಕೆ ನೀಡಿದರು.ಜಿಲ್ಲಾ ಅಗ್ರಣಿಯ ಬ್ಯಾಂಕ್ನ ವ್ಯವಸ್ಥಾಪಕ ರಾಜಕುಮಾರ ಹೂಗಾರ ಅವರು ಮಾರ್ಚ್ 24ಕ್ಕೆ ಕೊನೆಗೊಂಡ ತ್ರೈಮಾಸಿಕ ಡಿಎಲ್ಆರ್ಸಿ ಸಭೆಯ ಕಾರ್ಯಸೂಚಿಯ ಬಗ್ಗೆ ಸಭೆಗೆ ತಿಳಿಸಿದರು. ಆದ್ಯತಾ ವಲಯದಲ್ಲಿ ಕೃಷಿಗೆ ಸಂಬಂಧಿಸಿದಂತೆ ಶೇ.100.56 ರಷ್ಟು ಸಾಧನೆ ಮಾಡಲಾಗಿದೆ. ಬೆಳೆ ಸಾಲದಲ್ಲಿ ಶೇ.98.27 ರಷ್ಟು, ಇತರೆ ಕೃಷಿ ಸಾಲದಲ್ಲಿ ಶೇ.107.67 ರಷ್ಟು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಶೇ.91.24 ರಷ್ಟು ಇತರೆ ಆದ್ಯತಾ ವಲಯಕ್ಕೆ ಶೇ.64.16 ರಷ್ಟು ಸಾಲ ವಿತರಣೆ ಮಾಡಲಾಗಿದೆ ಎಂದು ಸಭೆಯಲ್ಲಿ ವಿವರಿಸಿದರು.
ಭಾರತೀಯ ರಿಸರ್ವ್ ಬ್ಯಾಂಕ್ ಅಗ್ರಣಿಯ ಜಿಲ್ಲಾ ಅಧಿಕಾರಿ ಜಯಶ್ರೀ ಮಾತನಾಡಿ, ಆರ್ಥಿಕ ಸಾಕ್ಷರತೆಯನ್ನು ಉತ್ತೇಜಿಸುವ ಉದ್ದೇಶದಿಂದ 2024ರ ಆರ್ಥಿಕ ಸಪ್ತಾಹವನ್ನು ಜೂನ್- 26 ರಿಂದ ಮಾರ್ಚ್ 1, 2024ವರೆಗೆ ಪ್ರಾರಂಭಿಸಿ- ಆರ್ಥಿಕವಾಗಿ ಸ್ಮಾರ್ಟ್ ಆಗಿರಿ ಎಂಬ ವಿಷಯದ ಮೇಲೆ ಆಚರಿಸಲಾಗುತ್ತಿದೆ. ಈ ವರ್ಷ ಯುವ ವಯಸ್ಕರನ್ನು ಮುಖ್ಯವಾಗಿ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಳ್ಳಲಾಗಿದೆ. ಚಿಕ್ಕ ವಯಸ್ಸಿನಿಂದಲೇ ಆರ್ಥಿಕ ಶಿಸ್ತನ್ನು ರೂಢಿಸಿಕೊಳ್ಳುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು..ಈ ಸಂದರ್ಭದಲ್ಲಿ ಜಿಲ್ಲಾ ಸಾಲ ಯೋಜನೆಯ ಮಾರ್ಗದರ್ಶಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ನಬಾರ್ಡ್ನ ಡಿಡಿಎಂ ಮಂಜುನಾಥ ರೆಡ್ಡಿ, ಕೆನರಾ ಬ್ಯಾಂಕ್ ರಿಜನಲ್ ಮ್ಯಾನೇಜರ್ ಶೈಲಜಾ ಕೆ.ಎಂ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ನ ರಿಜಿನಲ್ ಮ್ಯಾನೇಜರ್ ರಾಜಶೇಖರ, ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಬ್ಯಾಂಕ್ಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
-------------(ಪೋಟೊ 26 ಬಿಕೆಟಿ8, ಜಿಲ್ಲಾ ಅಗ್ರಣಿ ಬ್ಯಾಂಕ್ ವತಿಯಿಂದ ಜರುಗಿದ ಬ್ಯಾಂಕರ್ಸ್ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿ.ಪಂ ಸಿಇಓ ಶಶಿಧರ ಕುರೇರ.
-------------------------------------ಕೋಟ್....
ಹಿಂದಿನ ವರ್ಷ ಸಲ್ಲಿಸಿದ ಶೇ.50 ರಷ್ಟು ಅರ್ಜಿಗಳು ಬಾಕಿ ಉಳಿದವೆ. ಎಸ್ಬಿಐ ಬ್ಯಾಂಕ್ನಲ್ಲಿ ಹೆಚ್ಚಿನ ಅರ್ಜಿ ಬಾಕಿಯಿದ್ದು, ಕೂಡಲೇ ವಿಲೇಯಾಗಬೇಕು. ಆರೇಳು ತಿಂಗಳು ಅರ್ಜಿ ಇಟ್ಟುಕೊಂಡರೆ ಹೇಗೆ?. ಅರ್ಹತೆ ಇದ್ದವರಿಗೆ ಸಾಲ ವಿತರಿಸಬೇಕು. ದಾಖಲಾತಿ ಸರಿಯಾಗಿಲ್ಲದಿದ್ದರೆ ರಿಜೆಕ್ಟ್ ಮಾಡಬೇಕು. ಸಂಬಂಧಿಸಿದ ಇಲಾಖೆ ಜೊತೆಗೆ ಸಮನ್ವಯ ಸಾಧಿಸಿ 15 ದಿನಗಳಲ್ಲಿ ಎಲ್ಲ ಅರ್ಜಿಗಳನ್ನು ವಿಲೇ ಮಾಡಬೇಕು. ಬಾಕಿ ಉಳಿದರೆ ಬ್ಯಾಂಕ್ ಮೇಲಾಧಿಕಾರಿಗಳಿಗೆ ಶಿಸ್ತುಕ್ರಮಕ್ಕೆ ಪತ್ರ ಬರೆಯಲಾಗುವುದು.- ಶಶಿಧರ್ ಕುರೇರ, ಜಿಪಂ ಸಿಇಒ