ಈವರೆಗೆ 15 ಮಂದಿ ನಕ್ಸಲೀಯರು ಎನ್‌ಕೌಂಟರ್‌ಗೆ ಬಲಿ

| Published : Nov 20 2024, 12:32 AM IST

ಸಾರಾಂಶ

ಮಲೆನಾಡಿನಲ್ಲಿ ನಕ್ಸಲೀಯರ ಹೋರಾಟ ಆರಂಭವಾಗಿ 25 ವರ್ಷಗಳಾಗಿವೆ. ಈ ಅವಧಿಯಲ್ಲಿ ಈವರೆಗೆ 15 ಮಂದಿ ಸಹಚರರನ್ನು ನಕ್ಸಲೀಯರು ಕಳೆದುಕೊಂಡಿದ್ದಾರೆ.

ಆರ್‌. ತಾರಾನಾಥ್‌ಕನ್ನಡಪ್ರಭ ಚಿಕ್ಕಮಗಳೂರು/ ಕಾರ್ಕಳಮಲೆನಾಡಿನಲ್ಲಿ ನಕ್ಸಲೀಯರ ಹೋರಾಟ ಆರಂಭವಾಗಿ 25 ವರ್ಷಗಳಾಗಿವೆ. ಈ ಅವಧಿಯಲ್ಲಿ ಈವರೆಗೆ 15 ಮಂದಿ ಸಹಚರರನ್ನು ನಕ್ಸಲೀಯರು ಕಳೆದುಕೊಂಡಿದ್ದಾರೆ.ಮಲೆನಾಡಿನಲ್ಲಿ ನಕ್ಸಲೀಯರು ಬೇರು ಬಿಡಲು ಪ್ರಮುಖ ಕಾರಣ ಇಲ್ಲಿನ ಜನರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವುದು ಮತ್ತು ಮೀಸಲು ಅರಣ್ಯದ ಹೆಸರಿನಲ್ಲಿ ಕಿರುಕುಳ ನೀಡಲಾಗುತ್ತಿರುವುದಾಗಿದೆ. ಇದರ ವಿರುದ್ಧ ಹೋರಾಡಲು 2000ರಲ್ಲಿ ಮಲೆನಾಡಿನ ಯುವಕ, ಯುವತಿಯರು ಸಂಘಟಿತರಾದರು.

ಶಾಂತಿಯುತ ಹೋರಾಟದಿಂದ ಪ್ರಯೋಜನವಿಲ್ಲ ಎಂದು ಕೈಯಲ್ಲಿ ಬಂದೂಕು ಹಿಡಿದು ರಕ್ತಕ್ರಾಂತಿಯ ಹೋರಾಟಕ್ಕೆ ವೇದಿಕೆ ಸಿದ್ಧಪಡಿಸುತ್ತಿದ್ದರು. ಅದಕ್ಕಾಗಿ ಬಂದೂಕು ಬಳಕೆಯ ತರಬೇತಿಯನ್ನು ಕಾಡಿನ ಮಧ್ಯದಲ್ಲಿ ಪಡೆದುಕೊಂಡರು. ಕೊಪ್ಪ ತಾಲೂಕಿನ ಮೆಣಸಿನ ಹಾಡ್ಯ ಗ್ರಾಮದಲ್ಲಿ ಬಂದೂಕು ತರಬೇತಿ ಪಡೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ನಕ್ಸಲೀಯರ ಬಂದೂಕಿನಿಂದ ಗಾಳಿಯಲ್ಲಿ ಹಾರಿ ಬಂದ ಗುಂಡು ಶೇಷಮ್ಮ ಅವರ ಕಾಲಿಗೆ ತಗಲಿ ಪೆಟ್ಟಾಯಿತು. ಇದನ್ನು ಪೊಲೀಸರು ನಿರಾಕರಿಸಿದರು.

ನಂತರ ಕೆಲವೇ ದಿನಗಳೊಳಗೆ ಕೊಪ್ಪ ತಾಲೂಕಿನ ಸಿಂಗಸಾರು ಗ್ರಾಮದ ಬಳಿ ಮೊದಲ ಬಾರಿಗೆ ನಕ್ಸಲೀಯರು ಹಾಗೂ ಪೊಲೀಸರು ಮುಖಾಮುಖಿಯಾಗಿದ್ದರು. ಆದರೆ, ಆಗ ಯಾವುದೇ ಅವಘಡಗಳು ಸಂಭವಿಸಲಿಲ್ಲ.

ಈ ಘಟನೆಯ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಈದು ಗ್ರಾಮದ ಬಳಿ ಮನೆಯೊಂದಕ್ಕೆ 2003ರ ನವೆಂಬರ್‌ 17 ರಂದು ನಕ್ಸಲೀಯರು ಭೇಟಿ ನೀಡಿರುವ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆಯಲ್ಲಿ ಎನ್‌ಕೌಂಟರ್‌ನಲ್ಲಿ ಫಾತಿಮಾ ಹಾಗೂ ಪಾರ್ವತಿ ಹತ್ಯೆಯಾದರು. ಇದು, ನಕ್ಸಲೀಯರ ಪ್ರಥಮ ಹತ್ಯೆ.

ನಂತರ 2005 ರಿಂದ 2008 ರವರೆಗೆ ಪ್ರತಿ ವರ್ಷ ಎನ್‌ಕೌಂಟರ್‌ ನಡೆದು 12 ಮಂದಿ ಸಹಚರರನ್ನು ನಕ್ಸಲರು ಕಳೆದುಕೊಂಡರು. ನಂತರ ನಕ್ಸಲೀಯರು ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಲೇ ಬಂದರು. ಕೆಲವರಿಗೆ ಆರೋಗ್ಯ ಸಮಸ್ಯೆ ಎದುರಾಯಿತು. ಕೆಲವರು ಮುಖ್ಯವಾಹಿನಿಗೆ ಬಂದರು. 12 ಮಂದಿ ಸಹಚರರು ಮೃತಪಟ್ಟಿದ್ದರಿಂದ ಸಂಖ್ಯೆ ಗಣನೀಯವಾಗಿ ಕಡಿಮೆಯಾಯಿತು. ಮಲೆನಾಡಿನ ಸ್ಥಳೀಯರ ಅಸಹಕಾರದಿಂದ ಮಲೆನಾಡಿನ ನಕ್ಸಲೀಯರು ಕೇರಳದತ್ತ ಮುಖ ಮಾಡಿದರು. ಅಲ್ಲೂ ಕೂಡ ಸಕ್ರೀಯವಾಗಿದ್ದರಿಂದ ಬಿ.ಜಿ. ಕೃಷ್ಣಮೂರ್ತಿ, ವಿಕ್ರಂಗೌಡ, ಮುಂಡಗಾರು ಲತಾ ಸೇರಿ ಮಲೆನಾಡಿನ ನಕ್ಸಲೀಯರ ವಿರುದ್ಧ ಪ್ರಕರಣಗಳು ದಾಖಲಾಗಿವೆ.

ಮುಂದಿನ ನಾಯಕತ್ವ:

ಮಲೆನಾಡಿನಲ್ಲಿ ನಕ್ಸಲೀಯರು ನೆಲೆವೂರುವಾಗ ಸಾಕೇತ್‌ ರಾಜ್‌ ಇಲ್ಲಿನ ನಾಯಕತ್ವನ್ನು ವಹಿಸಿಕೊಂಡು, ತಂಡಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದ. ಆತ 2005ರ ಫೆಬ್ರವರಿ 6 ರಂದು ಅರಣ್ಯದಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ನಂತರ ಬಿ.ಜಿ.ಕೃಷ್ಣಮೂರ್ತಿ ನಾಯಕತ್ವ ವಹಿಸಿಕೊಂಡಿದ್ದ. ಆತ ಕೇರಳದಲ್ಲಿ ಸಕ್ರಿಯರಾಗಿದ್ದ ಸಂದರ್ಭದಲ್ಲಿ ಕೇರಳ ಸರ್ಕಾರದ ಮುಂದೆ ಶರಣಾಗತಿಯಾದ.

ಹಾಗಾಗಿ ವಿಕ್ರಂ ಗೌಡ ನಾಯಕತ್ವ ವಹಿಸಿಕೊಂಡು ತಂಡವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದ. ಇನ್ನು ಮುಂದೆ, ಸುಮಾರು ಎರಡು ದಶಕಗಳಿಂದ ನಕ್ಸಲ್‌ ಸಂಘಟನೆಯಲ್ಲಿರುವ ಮುಂಡಗಾರು ಲತಾ ನಾಯಕತ್ವ ವಹಿಸುವ ಸಾಧ್ಯತೆ ಇದೆ. ಹಾಗಾಗಿ ಪೊಲೀಸರ ಮತ್ತು ನಕ್ಸಲ್‌ ನಿಗ್ರಹ ಪಡೆಯ ಮುಂದಿನ ಟಾರ್ಗೆಟ್‌ ಮುಂಡಗಾರು ಲತಾ ಎನ್ನಲಾಗುತ್ತಿದೆ.