ಸಾರಾಂಶ
- ಡಿಎಚ್ಒ ನೇತೃತ್ವದಲ್ಲಿ 15 ತಂಡಗಳು ಏಕಕಾಲಕ್ಕೆ ದಾಳಿ, ಎಫ್ಐಆರ್
- ಡಿಸಿ ಕಚೇರಿ ಸಭಾಂಗಣದ ಸಭೆಯಲ್ಲಿ ಡಿಸಿ ಗಂಗಾಧರ ಸ್ವಾಮಿ ಮಾಹಿತಿ- - -
ಕನ್ನಡಪ್ರಭ ವಾರ್ತೆ ದಾವಣಗೆರೆಜಿಲ್ಲಾ ಕೇಂದ್ರದಲ್ಲಿದ್ದ ಅನಧಿಕೃತ ಚರ್ಮರೋಗ ಚಿಕಿತ್ಸಾ ಕೇಂದ್ರಗಳನ್ನು ಮುಚ್ಚಿಸಿ, ₹1 ಲಕ್ಷ ದಂಡ ವಿಧಿಸಲಾಗಿದೆ. ಇಂಥ ಅನಧಿಕೃತ ಕೇಂದ್ರಗಳನ್ನು ಆರಂಭಿಸಿದರೆ ಕ್ಲಿನಿಕ್ ವಿರುದ್ಧ ಎಫ್ಐಆರ್ ದಾಖಸಲಿಸಿ, ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಎಚ್ಚರಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಮಟ್ಟದ ಕೆಪಿಎಂಇ ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಒಟ್ಟು 15 ಚರ್ಮರೋಗ ಚಿಕಿತ್ಸಾ ಕೇಂದ್ರಗಳೆಂದು ಚಿಕಿತ್ಸೆ ನೀಡುತ್ತಿದ್ದ ಸ್ಥಳಗಳ ಮೇಲೆ ಡಿಎಚ್ಒ ನೇತೃತ್ವದಲ್ಲಿ 15 ತಂಡಗಳು ಏಕಕಾಲಕ್ಕೆ ದಾಳಿ ಮಾಡಿದ್ದವು ಎಂದು ತಿಳಿಸಿದರು.ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ ಮಾತನಾಡಿ, ಹರಳೆಣ್ಣೆ ಕೊಟ್ರ ಬಸಪ್ಪ ವೃತ್ತದ ಬಳಿ ವಿ-ಕೇರ್ ಹೇರ್ ಸ್ಕಿನ್ ಕ್ಲಿನಿಕ್, ಶಾಬನೂರು ರಸ್ತೆಯ ಹೇರ್ ಓ ಕ್ರಾಫ್ಟ್, ಯಲ್ಲಮ್ಮ ನಗರದ ಕಾಸ್ಮೋ ಅಸ್ತೇಟಿಕ್ ಸ್ಕಿನ್ ಹೇರ್ ಕ್ಲಿನಿಕ್ಗಳು ಕೆಪಿಎಂಇ ಕಾಯ್ದೆಯಂತೆ ಅನುಮತಿ ಪಡೆಯದೇ ಚಿಕಿತ್ಸೆ ನೀಡುತ್ತಿದ್ದವು. ಅವುಗಳನ್ನು ತಕ್ಷಣದಿಂದಲೇ ಅನ್ವಯ ಆಗುವಂತೆ ಬಂದ್ ಮಾಡಿಸಲಾಗಿದೆ. ಅಲ್ಲದೇ ಅವುಗಳನ್ನು ನಡೆಸುತ್ತಿದ್ದವರ ಮೇಲೆ ಎಫ್ಐಆರ್ ದಾಖಲು ಮಾಡಿ, ಕೆಪಿಎಂಇ ರಿಡ್ರಸೇಲೇ ಸಮಿತಿಗೆ ಸಲ್ಲಿಸಲಾಗಿದೆ.
ಈ ಅನಧಿಕೃತ ಕ್ಲಿನಿಕ್ಗಳು ಕೆಪಿಎಂಇ ಕಾಯ್ದೆಯಡಿ ದಂಡ ವಿಧಿಸಲು ಅರ್ಹವಾಗಿವೆ. ಹರಳೆಣ್ಣೆ ಕೊಟ್ರಬಸಪ್ಪ ವೃತ್ತದ ಕಾಸ್ಮೋಡರ್ಮ ಹೇರ್ ಅಂಡ್ ವೆಲ್ನೆಸ್ ಸೆಂಟರ್ ಬ್ಯೂಟಿ ಪಾರ್ಲರ್ ಆಗಿ ಕಾರ್ಯನಿರ್ವಹಿಸುತ್ತಿದೆ. ಅಲ್ಲಿ ಕೂದಲು ಕಸಿಗೆ ಸಂಬಂಧಿಸಿದಂತೆ ಚಿಕಿತ್ಸೆ ನೀಡುವುದಾಗಿ ನಾಮಫಲಕ ಇದ್ದರೂ, ಚಿಕಿತ್ಸೆ ನೀಡಿರುವುದು ಕಂಡುಬಂದಿಲ್ಲ. ನಾಮಫಲಕ ತೆರವು ಮಾಡಿಸಿ, ಚರ್ಮ ಚಿಕಿತ್ಸೆ ಉಪಕರಣವನ್ನು ಡಿ ಕಮಿಷನ್ ಮಾಡಿಡಲಾಯಿತು ಎಂದು ತಿಳಿಸಿದರು.ಆಗ ಡಿಸಿ ಗಂಗಾಧರ ಸ್ವಾಮಿ ಮಾತನಾಡಿ, ಅನುಮತಿ ಪಡೆಯದೇ ಚಿಕಿತ್ಸಾ ಕೇಂದ್ರಗಳನ್ನು ನಡೆಸುತ್ತಿರುವುದು ಕಾನೂನು ಬಾಹಿರ. ಅಂತಹ ಚಿಕಿತ್ಸಾ ಕೇಂದ್ರಗಳನ್ನು ಮುಚ್ಚಿಸಿ, ತಲಾ ₹1 ಲಕ್ಷ ದಂಡ ವಿಧಿಸುವಂತೆ ಆದೇಶಿಸಿದರು.
ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು, ಸಿಬ್ಬಂದಿ, ಖಾಸಗಿ ಕ್ಲಿನಿಕ್ ಮುಖ್ಯಸ್ಥರು ಸಭೆಯಲ್ಲಿದ್ದರು.- - -
(ಬಾಕ್ಸ್)* ಪುನರಾವರ್ತನೆ ಆಗದಂತೆ ಸೂಚನೆ: ಡಿಎಚ್ಒ ಡಿಎಚ್ಒ ಮಾತನಾಡಿ, ಎಂಸಿಸಿ ಎ ಬ್ಲಾಕ್ನ ಇಶಾ ಹೇರ್ ಅಂಡ್ ಸ್ಕಿನ್ ಕ್ಲಿನಿಕ್, ರಾಂ ಅಂಡ್ ಕೋ ವೃತ್ತದ ಓಂ ಡೆಂಟಲ್ ಕೇರ್, ಎಂಸಿಸಿ ಬಿ ಬ್ಲಾಕ್ನ ಲಾ ಪೇಟಲ್ಸ್ ಅಸ್ತೇಟಿಕ್ ಕ್ಲಿನಿಕ್, ಶಿವಕುಮಾರ ಸ್ವಾಮಿ ಬಡಾವಣೆಯ ರಿಧಿ ದಂತ ಚಿಕಿತ್ಸಾಲಯ, ಮಾಮಾಸ್ ಜಾಯಿಂಟ್ ರಸ್ತೆಯಲ್ಲಿರುವ ಗ್ಲೋಬಲ್ ಡೆಂಟಲ್ ಅಂಡ್ ಫೇಷಿಯಲ್ ಅಸ್ಥೆಟಿಕ್ ಸೆಂಟರ್ಗಳು ಚಿಕಿತ್ಸೆಗಾಗಿ ಲೈಸೆನ್ಸ್ ಪಡೆದು, ಚರ್ಮ ಚಿಕಿತ್ಸಾ ಕೇಂದ್ರಗಳಾಗಿವೆ. ನಾಮಫಲಕ ತೆರವುಗೊಳಿಸಿ, ಅದು ಪುನರಾವರ್ತನೆ ಆಗದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಿದರು. ವಿದ್ಯಾ ನಗರದ ಪ್ರೆಸ್ಟೀಜ್ ಹೇರ್ ಸೆಲ್ಯೂಷನ್, ಹೌರ ಕಾಸ್ಮೆಟಿಕ್ ಕ್ಲಿನಿಕ್, ದೇವರಾಜ ಅರಸು ಬಡಾವಣೆಯ ರೀಜಿವಾ ಹೇರ್/ ಸ್ಕಿನ್/ ಲೇಸರ್ ಕ್ಲಿನಿಕ್ ಅಂಡ್ ಆಯುರ್ವೇದ ವೆಲ್ನೆಸ್ ಸೆಂಟರ್ ಮತ್ತು ವಿದ್ಯಾರ್ಥಿ ಭವನ ಬಳಿ ವಿ ಸ್ಮಾರ್ಟ್ ಹೇರ್ ಟ್ರಾನ್ಸ್ ಪ್ಲಾಂಟ್ ಅಂಡ್ ಸ್ಕಿನ್ ಸಲ್ಯೂಷನ್ ಖಾಸಗಿ ಸಂಸ್ಥೆಗಳು ಮುಚ್ಚಿದ್ದು ಇವು ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿಸಿದರು.
- - --29ಕೆಡಿವಿಜಿ2, 3.ಜೆಪಿಜಿ:
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.