ತಾಲೂಕಿನ ದೇವಭಾಗ ಕಡಲತೀರಲ್ಲಿ ಬುಧವಾರ ಅರಣ್ಯ ಇಲಾಖೆಯ ವಿಶೇಷ ಕಾಳಜಿಯೊಂದಿಗೆ ರಕ್ಷಿಸಲ್ಪಟ್ಟ ಒಟ್ಟು 163 ಪುಟ್ಟ ಕಡಲಾಮೆ ಮರಿಗಳನ್ನು ಅಧಿಕಾರಿಗಳು ಹಾಗೂ ಪರಿಸರ ಪ್ರೇಮಿಗಳ ಸಮ್ಮುಖದಲ್ಲಿ ಯಶಸ್ವಿಯಾಗಿ ಸಮುದ್ರದ ಒಡಲಿಗೆ ಬಿಡಲಾಯಿತು.
ಕನ್ನಡಪ್ರಭ ವಾರ್ತೆ ಕಾರವಾರ
ತಾಲೂಕಿನ ದೇವಭಾಗ ಕಡಲತೀರಲ್ಲಿ ಬುಧವಾರ ಅರಣ್ಯ ಇಲಾಖೆಯ ವಿಶೇಷ ಕಾಳಜಿಯೊಂದಿಗೆ ರಕ್ಷಿಸಲ್ಪಟ್ಟ ಒಟ್ಟು 163 ಪುಟ್ಟ ಕಡಲಾಮೆ ಮರಿಗಳನ್ನು ಅಧಿಕಾರಿಗಳು ಹಾಗೂ ಪರಿಸರ ಪ್ರೇಮಿಗಳ ಸಮ್ಮುಖದಲ್ಲಿ ಯಶಸ್ವಿಯಾಗಿ ಸಮುದ್ರದ ಒಡಲಿಗೆ ಬಿಡಲಾಯಿತು.ಮರಿಗಳು ಅಲೆಗಳ ಸದ್ದಿಗೆ ಹೆಜ್ಜೆ ಹಾಕುತ್ತಾ ನೀರು ಸೇರುತ್ತಿದ್ದ ದೃಶ್ಯ ನೆರೆದಿದ್ದವರ ಕಣ್ಮನ ಸೆಳೆಯಿತು.
ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೋಸ್ಟಲ್ ಎಂಡ್ ಮರೈನ್ ಇಕೋ ಸಿಸ್ಟಮ್ ಸೆಲ್ ಈ ಕಾರ್ಯಕ್ರಮ ಆಯೋಜಿಸಿತ್ತು. ಈ ಪೈಕಿ ದೇವಭಾಗದ ಗೂಡಿನಿಂದ 76 ಮರಿಗಳು ಹೊರಬಂದಿದ್ದರೆ, ಅಂಕೋಲಾ ಭಾಗದ ಗೂಡುಗಳಿಂದ ರಕ್ಷಿಸಲಾಗಿದ್ದ 87 ಮರಿಗಳನ್ನು ಒಟ್ಟಾಗಿ ಸಮುದ್ರಕ್ಕೆ ಸೇರಿಸಲಾಯಿತು. ಅಳಿವಿನ ಅಂಚಿನಲ್ಲಿರುವ ಕಡಲಾಮೆಗಳ ಸಂತತಿಯನ್ನು ವೃದ್ಧಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕೈಗೊಂಡಿರುವ ಈ ರಕ್ಷಣಾ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.ಈ ಅಪರೂಪದ ಕ್ಷಣಕ್ಕೆ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಸಾಕ್ಷಿಯಾದರು. ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಸಿ. ಮರಿಗಳನ್ನು ಸಮುದ್ರಕ್ಕೆ ಬಿಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ನೀಡಿದರು. ಕಡಲತೀರದ ಪರಿಸರ ವ್ಯವಸ್ಥೆಯಲ್ಲಿ ಕಡಲಾಮೆಗಳ ಪಾತ್ರ ಅತ್ಯಂತ ನಿರ್ಣಾಯಕವಾಗಿದ್ದು, ಅವುಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಈ ವೇಳೆ ಅಧಿಕಾರಿಗಳು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕೆ.ಡಿ. ನಾಯ್ಕ್, ಮೊಹಿಲಾ ವೆಂಕಟ್, ವಲಯ ಅರಣ್ಯಾಧಿಕಾರಿಗಳಾದ ಗಜಾನನ ನಾಯ್ಕ ಮತ್ತು ಕಿರಣ್ ಮನವಚಾರಿ ಉಪಸ್ಥಿತರಿದ್ದರು. ಇವರೊಂದಿಗೆ ಅರಣ್ಯ ಇಲಾಖೆಯ ಗಸ್ತು ಸಿಬ್ಬಂದಿ, ಸ್ಥಳೀಯ ಮೀನುಗಾರರು ಹಾಗೂ ಪ್ರಾಣಿಪ್ರಿಯರು ಪಾಲ್ಗೊಂಡಿದ್ದರು.