ಪುತ್ತೂರು: ಟೀಂ ಉಬಾರ್ ನೇತೃತ್ವದಲ್ಲಿ ೨ನೇ ವರ್ಷದ ಹಲಸು- ಮಾವು ಮೇಳ ಜೂ. ೧೯ರಿಂದ ೨೧ರವರೆಗೆ ಮೂರು ದಿನಗಳ ಕಾಲ ಉಪ್ಪಿನಂಗಡಿಯ ಎಚ್.ಎಂ. ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಟೀಂ ಉಬಾರ್ ತಂಡದ ರಂಗಯ್ಯ ಬಳ್ಳಾಲ್ ಕೆದಂಬಾಡಿ ಬೀಡು ಹೇಳಿದರು.

ಬುಧವಾರ ಪುತ್ತೂರಿನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ. ೧೯ರಂದು ಬೆಳಗ್ಗೆ ೯ ಗಂಟೆಗೆ ಶಾಸಕ ಅಶೋಕ್ ರೈ ಮೇಳ ಉದ್ಘಾಟಿಸುವರು. ಪ್ರಣವ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್. ಪ್ರಸಾದ್, ಇಳಂತಿಲ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶ್ರವಣ್ ಕುಮಾರ್, ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸಿಫ್, ಸುದ್ದಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ.ಯು.ಪಿ. ಶಿವಾನಂದ್, ಉಪ್ಪಿನಂಗಡಿ ಗ್ರಾಪಂ ಮಾಜಿ ಸದಸ್ಯ ಧನಂಜಯ ಕುಮಾರ್ ಭಾಗವಹಿಸುವರು.ಮೇಳದಲ್ಲಿ ಹಲಸು ಮತ್ತು ಮಾವಿನ ವಿವಿಧ ತಳಿಗಳ ಗಿಡಗಳು ಹಾಗೂ ಹಲಸು ಮತ್ತು ಮಾವಿನ ವಿವಿಧ ಖಾದ್ಯಗಳು ಲಭ್ಯವಿರುತ್ತದೆ. ಈ ಸಂದರ್ಭ ಶಾಲಾ ಮಕ್ಕಳಿಗೆ ಪುಸ್ತಕ, ಬ್ಯಾಗ್ ಮತ್ತು ಬಡವರಿಗೆ ಆರ್ಥಿಕ ಸಹಾಯ ಹಾಗೂ ಕಿಟ್ ವಿತರಣೆ ಮಾಡಲಾಗುವುದು. ಜೂ. ೨೧ರಂದು ಸಂಜೆ ನಡೆಯಲಿರುವ ಮೇಳದ ಸಮಾರೋಪದ ಸಂದರ್ಭದಲ್ಲಿ ಸಂಜೆ ೫ ಗಂಟೆಗೆ ಮಂಗಳೂರಿನ ಚಾ ಪರ್ಕ ತಂಡದಿಂದ ‘ಯಾನೊರಿ ಬರೊಲಿಯಾ’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. ಅಂದು ಮಧ್ಯಾಹ್ನ ಉಚಿತ ಕಣ್ಣಿನ ಪರೀಕ್ಷಾ ಶಿಬಿರವು ಪುತ್ತೂರಿನ ವಿಷನ್ ಐ ಕೇರ್ ಆಪ್ಟಿಕಲ್ಸ್ ಸಹಯೋಗದಲ್ಲಿ ನಡೆಯಲಿದೆ ಎಂದು ತಿಳಿಸಿದರು. ಸುದ್ಧಿಗೋಷ್ಟಿಯಲ್ಲಿ ಟೀಂ ಉಬಾರ್ ತಂಡದ ರಾಜೇಶ್ ಪ್ರಭು ಮತ್ತು ರಾಕೇಶ್ ಪ್ರಭು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.