ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಶ್ರೀಕ್ಷೇತ್ರ ಸಿದ್ಧರಬೆಟ್ಟ ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠದ ೧೯ನೇ ವರ್ಷದ ವಾರ್ಷಿಕೋತ್ಸವ, ಶ್ರೀ ಜಗದ್ಗುರು ರೇಣುಕಾಚಾರ್ಯರ, ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವ ಹಾಗೂ ಸಾಮೂಹಿಕ ವಿವಾಹಗಳು ಜನಜಾಗೃತಿ ಧರ್ಮ ಸಮಾರಂಭವು ಜೂ. ೮ರ ಭಾನುವಾರದಂದು ಶ್ರೀಕ್ಷೇತ್ರ ಸಿದ್ಧರಬೆಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಕ್ಷೇತ್ರ ಸಿದ್ಧರಬೆಟ್ಟ ಮಠದ ಪೀಠಾಧ್ಯಕ್ಷರಾದ ಶ್ರೀ ವೀರಭದ್ರ ಶಿವಾಚಾರ್ಯ ಮ ಸ್ವಾಮಿಗಳು ತಿಳಿಸಿದರು.ಅವರು ನಗರದ ಮೇಗಳಪೇಟೆಯಲ್ಲಿರುವ ಶ್ರೀ ಉಜ್ಜಯನಿ ಮಠದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಶ್ರೀಗಳು ಮಾತನಾಡುತ್ತ, ಶ್ರೀಕ್ಷೇತ್ರ ಸಿದ್ಧರಬೆಟ್ಟದಲ್ಲಿ ಕಳೆದ ೧೮ ವರ್ಷಗಳಿಂದಲೂ ಧಾರ್ಮಿಕ ಕಾರ್ಯಗಳಲ್ಲದೆ ಶಿಕ್ಷಣ, ಆರೋಗ್ಯ, ಸಮಾಜಮುಖಿ ಕಾರ್ಯ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾಧಿಗಳು ಸಹಾಯ ಹಸ್ತ ನೀಡಿರುವುದು ಸ್ವಾಗತಾರ್ಹ ಎಂದ ಅವರು ಈ ಸದರಿ ಕಾರ್ಯಕ್ರಮಕ್ಕೆ ಭಕ್ತಾಧಿಗಳು ಎಲ್ಲ ರೀತಿಯ ಸಹಾಯ ಹಸ್ತ ನೀಡಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಶಿರಾ ಸಹಕಾರಿ ಭಂಡಾರದ ಅಧ್ಯಕ್ಷ ಚಂದ್ರಶೇಖರ ಆರಾಧ್ಯ, ವಕೀಲರಾದ ತರೂರು ಬಸವರಾಜು, ಆರಾಧ್ಯ, ಮುಖಂಡರಾದ ರವಿಶಂಕರ್, ಶಾಂತಣ್ಣ, ಸುಂದರಣ್ಣ, ಸೋಮಶೇಖರ್, ಕೃಷ್ಣಪ್ಪ, ಗಂಗಾಧರ, ಪ್ರಕಾಶ್, ರಾಜಣ್ಣ, ನಟರಾಜು.ಜಿ.ಆರ್ ಸೇರಿದಂತೆ ಹಲವರು ಹಾಜರಿದ್ದರು.