ಸಾರಾಂಶ
ಬನ್ನೇರಘಟ್ಟ ಮುಖ್ಯರಸ್ತೆಯಲ್ಲಿರುವ ಹುಳಿಮಾವು ಗ್ರಾಮದ ದಕ್ಷಿಣ ಕಾಶಿ ಎಂದು ಪುರಾಣ ಪ್ರಸಿದ್ಧವಾದ ಸ್ಪೂರ್ತಿ ವಿನಾಯಕ ಸಹಿತ ಸತ್ಯನಾರಾಯಣಸ್ವಾಮಿ ದೇವರ 19ನೇ ವರ್ಷದ ವಾರ್ಷಿಕೋತ್ಸವ ಹಾಗೂ 18ನೇ ವರ್ಷದ ಬ್ರಹ್ಮರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಬೆಂಗಳೂರು ದಕ್ಷಿಣ: ಬನ್ನೇರಘಟ್ಟ ಮುಖ್ಯರಸ್ತೆಯಲ್ಲಿರುವ ಹುಳಿಮಾವು ಗ್ರಾಮದ ದಕ್ಷಿಣ ಕಾಶಿ ಎಂದು ಪುರಾಣ ಪ್ರಸಿದ್ಧವಾದ ಸ್ಪೂರ್ತಿ ವಿನಾಯಕ ಸಹಿತ ಸತ್ಯನಾರಾಯಣಸ್ವಾಮಿ ದೇವರ 19ನೇ ವರ್ಷದ ವಾರ್ಷಿಕೋತ್ಸವ ಹಾಗೂ 18ನೇ ವರ್ಷದ ಬ್ರಹ್ಮರಥೋತ್ಸವ ಅತ್ಯಂತ ವಿಜೃಂಭಣೆಯಿಂದ ಅಪಾರ ಭಕ್ತ ಸಮೂಹದ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ನೆರವೇರಿತು.
ವೇಣುಗೋಪಾಲ್ ಅವರ ನೇತೃತ್ವದಲ್ಲಿ ಹತ್ತು ದಿನ ನಡೆಯುವ ಜಾತ್ರಾ ಮಹೋತ್ಸವಕ್ಕೆ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ। ಸಿ.ಎನ್.ಮಂಜುನಾಥ್ ಅವರು ಕುಟುಂಬ ಸಮೇತರಾಗಿ ಆಗಮಿಸಿ ರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಜಾತ್ರೆ ಹಿನ್ನೆಲೆಯಲ್ಲಿ ಹುಳಿಮಾವು ಗ್ರಾಮದ ಎಲ್ಲಾ ರಸ್ತೆಗಳು, ಮನೆಗಳು ವಿದ್ಯುತ್ ದೀಪಾಲಂಕಾರಗಳಿಂದ ಕಂಗೋಳಿಸುತ್ತಿತ್ತು.
ಜಾತ್ರೆ ಮಹೋತ್ಸವಕ್ಕೆ ರಂಗು ತುಂಬಲು ಮೊಬೈಲ್ ಆರ್ಕೆಸ್ಟ್ರಾ, ವೀರಗಾಸೆ, ವಾದ್ಯ, ನೃತ್ಯಮೇಳ ಸೇರಿದಂತೆ ವಿವಿಧ ದೇವರುಗಳ ಪಲ್ಲಕ್ಕಿಗಳ ಮೆರವಣಿಗೆಯ ಮೂಲಕ ಗ್ರಾಮೋತ್ಸವ ನಡೆಯಲಿದೆ. ಪ್ರತಿದಿನ ಸಂಜೆ ವೇದಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ ಏರ್ಪಡಿಸಲಾಗಿದೆ.
ಭದ್ರಾವತಿಯ ಹರ್ಷ ವರ್ಧನ್, ಪ್ರಧಾನ ಅರ್ಚಕರಾದ ವೈ.ಲಕ್ಷ್ಮೀ ಕಾಂತ ಭಟ್ಟಾಚಾರ್ಯರು, ವೇಣುಗೋಪಾಲ್, ಎಲ್.ಮುತ್ತಪ್ಪ, ಧರ್ಮದರ್ಶಿಗಳು, ಉತ್ಸವಕರ್ತರು ಹಾಗೂ ದೇವಾಲಯದ ಸೇವಾಕರ್ತರು, ವೇಣುಗೋಪಾಲನಗರದ ಗ್ರಾಮಸ್ಥರು ಪೂಜಾಕೈಂಕರ್ಯಗಳಲ್ಲಿ ಭಾಗಿಯಾದರು.