ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ ಹೋಬಳಿಯ ಮಾಯಣ್ಣನ ಕೊಪ್ಪಲು ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದಿಂದ ೨ ಕೋಟಿ ರು.ವೆಚ್ಚದಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಯಲಿಯೂರು ಸರ್ಕಲ್, ಮಾಯಣ್ಣನಕೊಪ್ಪಲಿಗೆ ಹೋಗುವ ಕಾವೇರಿ ಶಾಖಾ ನಾಲೆಯ ಆರನೇ ವಿತರಣಾ ನಾಲಾ ಅಭಿವೃದ್ಧಿ ಕಾಮಗಾರಿಗೆ ಚೆಸ್ಕಾಂ ಅಧ್ಯಕ್ಷ, ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಗುದ್ದಲಿ ಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಅವರು, ಬಹಳ ವರ್ಷಗಳಿಂದ ನಾಲೆ ಅಭಿವೃದ್ಧಿ ನೆನೆಗುದಿಗೆ ಬಿದ್ದಿತ್ತು. ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ ಎನ್ನುವುದು ಸಾರ್ವಜನಿಕರು ಮತ್ತು ರೈತರ ನೋವಾಗಿತ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಅವರ ಸಹಾಯದಿಂದ ಟೆಂಡರ್ ಆಗಿತ್ತು. ಕೊನೆ ಭಾಗದ ರೈತರಿಗೆ ನೀರು ಕೊಡಬೇಕು ಎಂಬುದು ಎಲ್ಲರ ಆಸೆಯಾಗಿತ್ತು. ಎಲ್ಲರ ಪ್ರಯತ್ನದಿಂದ ಈ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ಕೆಂಪರಾಜು, ಗುತ್ತಿಗೆದಾರ ಬ್ರಹ್ಮಯ್ಯ, ಮುಖಂಡರಾದ ಆನಂದ್, ಕಾಳೇನಹಳ್ಳಿ ಮಂಜುನಾಥ್, ಸುಂಡಹಳ್ಳಿ ಸಿದ್ದರಾಜು ಸೇರಿದಂತೆ ಇತರರಿದ್ದರು.
ಜೂ.೨೪ರಂದು ಕಬ್ಬು ಬೆಳೆಗಾರರ ರಾಜ್ಯ ಸಮಾವೇಶ: ಎನ್.ಎಲ್.ಭರತ್ರಾಜ್ಕನ್ನಡಪ್ರಭ ವಾರ್ತೆ ಮಂಡ್ಯಕರ್ನಾಟಕ ಕಬ್ಬು ಬೆಳೆಗಾರರ ಸಂಘದಿಂದ ಕರ್ನಾಟಕ ಕಬ್ಬು ಬೆಳೆಗಾರರ ರಾಜ್ಯ ಸಮಾವೇಶವನ್ನು ಜೂ.೨೪ರಂದು ಬೆಳಗ್ಗೆ ೧೧ ಗಂಟೆಗೆ ನಗರದ ಕರ್ನಾಟಕ ಸಂಘದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಲ್.ಭರತ್ರಾಜ್ ತಿಳಿಸಿದರು.
ಸಮಾವೇಶದ ಮೂಲಕ ಶೇ.೯.೫೦ರಷ್ಟು ಸಕ್ಕರೆ ಇಳುವರಿ ಆಧಾರದಲ್ಲಿ ಟನ್ ಕಬ್ಬಿಗೆ ೫೫೦೦ ರು. ಬೆಂಬಲ ಬೆಲೆ, ಟನ್ ಕಬ್ಬಿಗೆ ೫೦೦ ಎಸ್ಐಪಿ ನಿಗದಿ, ಕಾರ್ಖಾನೆಯ ಸಮಿತಿಗೆ ೫ ಮಂದಿ ಬೆಳೆಗಾರರ ನೇಮಕ, ೧೪ ದಿನದೊಳಗೆ ಹಣ ಪಾವತಿ, ಕಾರ್ಖಾನೆಗಳಿಂದ ನೀಡಬೇಕಾದ ೫೦ ರು. ಪ್ರೋತ್ಸಾಹ ಧನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.ಸಮಾವೇಶದಲಿ ಅಖಿಲ ಭಾರತ ಕಬ್ಬು ಬೆಳೆಗಾರರ ಸಂಘದ ರಾಷ್ಟ್ರಾಧ್ಯಕ್ಷ ಡಿ.ರವೀಂದ್ರನ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಜಿ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಎನ್.ಎಲ್.ಭರತ್ರಾಜ್, ರಾಜ್ಯ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಯು.ಬಸವರಾಜು, ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.
ಜಿಲ್ಲೆ ಎಲ್ಲ ಕಬ್ಬು ಬೆಳೆಗಾರರು ಸಮಾವೇಶದಲ್ಲಿ ಭಾಗವಹಿಸಿ ಅನಿಸಿಕೆ, ಅಭಿಪ್ರಾಯ, ಒತ್ತಾಯಗಳನ್ನು ಮಂಡಿಸುವಂತೆ ಮನವಿ ಮಾಡಿದರು.ಗೋಷ್ಠಿಯಲ್ಲಿ ಪ್ರಾಂತ ರೈತಸಂಘದ ಜಿಲ್ಲಾ ಸಂಚಾಲಕ ಲಿಂಗರಾಜಮೂರ್ತಿ, ಸಿದ್ದೇಗೌಡ, ಮುಖಂಡರಾದ ಬಿ.ರವಿಕುಮಾರ್, ಪ್ರಮೀಳಾ, ಮಧುಕುಮಾರ್, ಕಿರಣ್ಕುಮಾರ್, ಮರಿಲಿಂಗೇಗೌಡ ಇತರರಿದ್ದರು.