ಸಾರಾಂಶ
ರಾಮನಗರ: ಇತಿಹಾಸ ಪ್ರಸಿದ್ದ ಶ್ರೀ ರಾಮದೇವರ ಬೆಟ್ಟದ ಅಭಿವೃದ್ಧಿಗೆ 2 ಕೋಟಿ ರುಪಾಯಿ ಅನುದಾನ ಮಂಜೂರಾಗಿದ್ದು, ಇದರಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಶ್ರೀರಾಮಗಿರಿ ಸೇವಾ ಟ್ರಸ್ಟ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ರಾಮದೇವರ ಬೆಟ್ಟದಲ್ಲಿ ಸ್ವಚ್ಛತೆ, ಹ್ಯಾಂಡ್ ರೈಲಿಂಗ್ಸ್, ದಾಸೋಹ ಭವನ, ತಂಗುದಾಣ, ಶೌಚಾಲಯಗಳ ನಿರ್ಮಾಣ, ಶುದ್ಧ ಕುಡಿಯುವ ನೀರು ಘಟಕಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.ಟ್ರಸ್ಟ್ನ ಸದಸ್ಯರು ಶ್ರಾವಣ ಮಾಸ ಹೊರತುಪಡಿಸಿ ಇತರೆ ದಿನಗಳಲ್ಲಿ ಅರಣ್ಯ ಇಲಾಖೆಯವರು ಪ್ರವಾಸಿಗರು ಮತ್ತು ಸ್ಥಳೀಯರಿಗೆ ತಲಾ 25 ರುಪಾಯಿ ಪ್ರವೇಶ ಶುಲ್ಕ ಸಂಗ್ರಹ ಮಾಡುತ್ತಿದ್ದಾರೆ. ಇದು ಶ್ರೀ ರಾಮದೇವರ ಬೆಟ್ಟಕ್ಕೆ ಬರುವ ಭಕ್ತರಿಗೆ ತೊಂದರೆಯಾಗುತ್ತಿದೆ ಎಂದು ಶಾಸಕರು ಮತ್ತು ಜಿಲ್ಲಾಧಿಕಾರಿಗಳ ಗಮನ ಸೆಳೆದೆರು.
ಇದಕ್ಕೆ ಶಾಸಕ ಇಕ್ಬಾಲ್ ಹುಸೇನ್, ವಾಹನಗಳಿಗೆ ಶುಲ್ಕ ನಿಗಧಿ ಮಾಡಲಿ, ಭಕ್ತರಿಂದ ಶುಲ್ಕ ವಸೂಲಿ ಮಾಡುವುದು ಬೇಡ. ಈ ಬಗ್ಗೆ ಟ್ರಸ್ಟ್ನವರು ಜಿಲ್ಲಾಧಿಕಾರಿಗಳಿಗೆ ಮನವಿ ಕೊಡಿ ಸಂಬಂಧಿಸಿದವರ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.ಆಷಾಢ ತಿಂಗಳು ಮುಗಿದ ಮೇಲೆ ಶ್ರಾವಣ ಮಾಸ ಪ್ರಾರಂಭವಾಗುತ್ತದೆ. ಶ್ರಾವಣ ಶನಿವಾರಗಳಲ್ಲಿ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯ ಸಂಖ್ಯೆಯಲ್ಲಿರುತ್ತಾರೆ. ಆಗಾಗಿ ಶ್ರೀ ರಾಮದೇವರ ಬೆಟ್ಟದ ಅಭಿವೃದ್ದಿ ಮಾಡಲು ಈಗಾಗಲೇ 2 ಕೋಟಿ ರು. ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.
ಶ್ರೀ ರಾಮದೇವಾಲಯ ಅಭಿವೃದ್ಧಿ ಮಾಡಲು ಅರಣ್ಯ ಭೂಮಿ ಅಳತೆ ಮಾಡಿ ಬೌಂಡರಿಯನ್ನು ಗುರುತಿಸಲಾಗುವುದು. ಇದರಿಂದ ಶ್ರೀ ರಾಮದೇವರ ಬೆಟ್ಟಕ್ಕೆ ಸೌಲಭ್ಯ ಕಲ್ಪಿಸುವ ಜೊತೆಗೆ ಬೆಟ್ಟಕ್ಕೆ ಬರುವ ಭಕ್ತರಿಗೆ ಅನುಕೂಲ ಸಹ ಮಾಡಿಕೊಟ್ಟಂತಾಗುತ್ತದೆ ಎಂದು ಶಾಸಕರು ತಿಳಿಸಿದರು.ಶ್ರೀರಾಮಗಿರಿ ಸೇವಾ ಟ್ರಸ್ಟ್ ಅಧ್ಯಕ್ಷ ನರಸಿಂಹಯ್ಯ ಮಾತನಾಡಿ, ಶ್ರೀರಾಮದೇವರ ಬೆಟ್ಟಕ್ಕೆ ಇತಿಹಾಸವಿದ್ದು, ಭಕ್ತರು ಅಪಾರ ಸಂಖ್ಯೆಯಲ್ಲಿ ಬರುತ್ತಾರೆ. ಆವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಟ್ರಸ್ಟ್ ವತಿಯಿಂದ ಶಾಸಕರಿಗೆ ಮನವಿ ಮಾಡಿದ್ದೆವು. ಸರ್ಕಾರದಿಂದ 2 ಕೋಟಿ ರು. ಅನುದಾನ ಮಂಜೂರು ಮಾಡಿಸಿ, ಆಗಬೇಕಿರುವ ಕೆಲಸಗಳ ಬಗ್ಗೆ ಅಧಿಕಾರಿಗಳು ಮತ್ತು ಟ್ರಸ್ಟ್ ಸದಸ್ಯರೊಂದಿಗೆ ಸಭೆ ನಡೆಸಿದ್ದು, ಇಂದು ಪೂಜೆ ನೆರವೇರಿಸಿ ಅಭಿವೃದ್ದಿ ಕೆಲಸಕ್ಕೆ ಚಾಲನೆ ನೀಡುತ್ತಿದ್ದಾರೆ. ಅವರಿಗೆ ಶ್ರೀರಾಮಗಿರಿ ಸೇವಾ ಟ್ರಸ್ಟ್ ಪರವಾಗಿ ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಕೆ.ರಾಜು, ಗ್ರೇಟರ್ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ನಟರಾಜು, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ಕುಮಾರ್, ಮಾಜಿ ಅಧ್ಯಕ್ಷ ಸಿಎನ್ಆರ್ ವೆಂಕಟೇಶ್, ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಯ್ಯ, ಮನ್ಸೂರ್, ಪ್ರವಾಸೋದ್ಯಮ ಇಲಾಖೆಯ ರವಿಕುಮಾರ್, ಶ್ರೀರಾಮಗಿರಿ ಸೇವಾ ಟ್ರಸ್ಟ್ ಅಧ್ಯಕ್ಷ ನರಸಿಂಹಯ್ಯ, ಪದಾಧಿಕಾರಿಗಳಾದ ಪದ್ಮನಾಭ್, ರಾಮಕೃಷ್ಣಯ್ಯ, ಡೇರಿ ವೆಂಕಟೇಶ್, ಸಂತೋಷ್, ಜಗದೀಶ್, ಯತೀಶ್, ಹನುಮಂತೇಗೌಡ, ಮಂಜು, ನಂದೀಶ್, ಚೇತನ್, ಪ್ರದೀಪ (ಪಾಪು), ಸುಹಾಸ್ ಮತ್ತಿತರರು ಉಪಸ್ಥಿತರಿದ್ದರು.2ಕೆಆರ್ ಎಂಎನ್ 1.ಜೆಪಿಜಿ
ರಾಮನಗರದ ಶ್ರೀ ರಾಮದೇವರ ಬೆಟ್ಟದ ಅಭಿವೃದ್ಧಿ ಸಂಬಂಧ ಶಾಸಕ ಇಕ್ಬಾಲ್ ಹುಸೇನ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.