ವಿಶೇಷ ತೆರಿಗೆ ವಸೂಲಾತಿ ಅಭಿಯಾನದಲ್ಲಿ ನಿಗದಿತ ಗುರಿ ಮೀರಿ ಸಾಧನೆ ಸಾಧಿಸಿದೆ.
ಹೊಸಪೇಟೆ: ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ವಸೂಲಾತಿ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಡಿ.24ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 7 ರವರೆಗೆ ₹2 ಕೋಟಿ ತೆರಿಗೆ ಸಂಗ್ರಹಿಸುವ ಗುರಿಯೊಂದಿಗೆ ವಿಶೇಷ ತೆರಿಗೆ ವಸೂಲಾತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಜಿಪಂ ಸಿಇಒ ಅಕ್ರಮ್ ಅಲಿ ಷಾ ತಿಳಿದರು.
ನಗರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬುಧವಾರ ಅವರು ಮಾತನಾಡಿ,ವಿಜಯನಗರ ಜಿಲ್ಲೆಯ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ತೆರಿಗೆ ವಸೂಲಾತಿ ಅಭಿಯಾನದಲ್ಲಿ ನಿಗದಿತ ಗುರಿ ಮೀರಿ ಸಾಧನೆ ಸಾಧಿಸಿದೆ. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಏಕಕಾಲಕ್ಕೆ ತೆರಿಗೆ ಸಂಗ್ರಹ ಕಾರ್ಯ ಅರಂಭವಾಗಿತ್ತು. ಈ ಅಭಿಯಾನದ ಫಲವಾಗಿ ಒಂದೇ ದಿನದಲ್ಲಿ ಸುಮಾರು ₹2.74 ಕೋಟಿ ಸಂಗ್ರಹವಾಗಿದೆ. ಈ ಸಾಧನೆಯು ವಿಜಯನಗರ ಜಿಲ್ಲೆಯ ರಚನೆಯಾದ ನಂತರ ಸಂಗ್ರಹವಾಗಿರುವ ದಾಖಲೆ ಮಟ್ಟದ ತೆರಿಗೆಯಾಗಿರುತ್ತದೆ. ಈ ಮಹತ್ವದ ಸಾಧನೆಗೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಚುನಾಯಿತ ಪ್ರತಿನಿಧಿಗಳು ಹಾಗೂ ಮಹಿಳಾ ಸ್ವಸಹಾಯ ಗುಂಪಿನ ಪ್ರತಿನಿಧಿಗಳು ಸೇರಿದಂತೆ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿಗಳ ನೋಡಲ್ ಅಧಿಕಾರಿಗಳು ಹಾಗು ಗ್ರಾಮ ಪಂಚಾಯತಿಗಳ ಅಧಿಕಾರಿಗಳ ಸಮನ್ವಯ ಮತ್ತು ಸಹಕಾರದಿಂದ ಗರಿಷ್ಠ ಮಟ್ಟದ ತೆರಿಗೆ ವಸೂಲಾತಿ ಸಾಧ್ಯವಾಗಿದೆ ಎಂದರು.
ವಿಶೇಷ ತೆರಿಗೆ ವಸೂಲಾತಿ ಅಭಿಯಾನ ಯಶಸ್ವಿಗೊಳಿಸಲು ಪ್ರತಿ ತಾಲೂಕಿಗೆ ಜಿಲ್ಲಾ ಪಂಚಾಯಿತಿಯ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನು ನೇಮಿಸಿ ಆಯಾ ತಾಲೂಕಿನ ಕನಿಷ್ಠ 5 ಗ್ರಾಪಂ ಗಳಿಗೆ ಭೇಟಿ ನೀಡಿ, ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮೀಣ ಕುಡಿವ ನೀರು ಇಲಾಖೆ ಸಹಾಯಕ ನಿರ್ದೇಶಕರು ಸಹ ತಾಲೂಕಿನಲ್ಲಿ ಕನಿಷ್ಠ 10 ಗ್ರಾಪಂಗಳಿಗೆ ಭೇಟಿ ನೀಡಿ ನಿಗದಿತ ಗುರಿ ಸಾಧಿಸಲು ವಿಶೇಷ ತೆರಿಗೆ ವಸೂಲಾತಿ ಅಭಿಯಾನದಲ್ಲಿ ಪಾಲ್ಗೊಂಡು ಅಗತ್ಯ ಮಾರ್ಗದರ್ಶನ ನೀಡುವಂತೆ ಸೂಚಿಸಲಾಗಿತ್ತು ಎಂದರು.ತಾಲೂಕುವಾರು ತೆರಿಗೆ ಸಂಗ್ರಹ ವಿವರ :
ಹಗರಿಬೊಮ್ಮನಹಳ್ಳಿ- 62,90,218 ರು., ಹರಪನಹಳ್ಳಿ- 56, 41,912, ಹಡಗಲಿ- 54,76,201, ಹೊಸಪೇಟೆ- 46,11,934, ಕೂಡ್ಲಿಗಿ- 31,12,421, ಕೊಟ್ಟೂರು- 23,03,411 ರು., ಒಟ್ಟು 2,74,36,097 ರು. ತೆರಿಗೆ ವಸೂಲಾತಿ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.24ಎಚ್ಪಿಟಿ6- ಹೊಸಪೇಟೆ ತಾಲೂಕಿನ ಡಣನಾಯಕನಕೆರೆ ಗ್ರಾಮದಲ್ಲಿ ವಿಶೇಷ ತೆರಿಗೆ ವಸೂಲಾತಿ ಅಭಿಯಾನದಲ್ಲಿ ಜಿಪಂ ಸಿಇಒ ಅಕ್ರಂ ಅಲಿ ಷಾ ಅವರು ಭಾಗವಹಿಸಿದ್ದರು.