ಸಮೃದ್ಧ ಬೈಂದೂರು ಯೋಜನೆಯಡಿ ಬೈಂದೂರು ವಿಧಾನಸಭಾ ಕ್ಷೇತ್ರದ 6 ಸರ್ಕಾರಿ ಶಾಲೆಗಳಲ್ಲಿ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಲಿಯಂ ಲಿಮಿಟೆಡ್ (ಎಂಆರ್ ಪಿಎಲ್)ನ ಸಿಎಸ್ಆರ್ ನಿಧಿಯಿಂದ 14 ಲಕ್ಷ ರು. ವೆಚ್ಚದಲ್ಲಿ ಹೈಟೆಕ್ ಶೌಚಾಲಯಗಳ ನಿರ್ಮಾಣಕ್ಕೆ ಶಾಸಕ ಗುರುರಾಜ್ ಗಂಟಿಹೊಳೆ ಭೂಮಿ ಪೂಜೆ ನೆರವೇರಿಸಿದರು.

ಬೈಂದೂರು: ಸಮೃದ್ಧ ಬೈಂದೂರು ಯೋಜನೆಯಡಿ ಬೈಂದೂರು ವಿಧಾನಸಭಾ ಕ್ಷೇತ್ರದ 6 ಸರ್ಕಾರಿ ಶಾಲೆಗಳಲ್ಲಿ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಲಿಯಂ ಲಿಮಿಟೆಡ್ (ಎಂಆರ್ ಪಿಎಲ್)ನ ಸಿಎಸ್ಆರ್ ನಿಧಿಯಿಂದ 14 ಲಕ್ಷ ರು. ವೆಚ್ಚದಲ್ಲಿ ಹೈಟೆಕ್ ಶೌಚಾಲಯಗಳ ನಿರ್ಮಾಣಕ್ಕೆ ಶಾಸಕ ಗುರುರಾಜ್ ಗಂಟಿಹೊಳೆ ಭೂಮಿ ಪೂಜೆ ನೆರವೇರಿಸಿದರು. ಸಂಸದರಾದ ಬಿ.ವೈ. ರಾಘವೇಂದ್ರ ಅವರ ಶಿಫಾರಸಿನ ಮೇರೆಗೆ ಇಲ್ಲಿನ ಸರ್ಕಾರಿ ಪ್ರೌಢಶಾಲೆ ತಲ್ಲೂರು, ಸರ್ಕಾರಿ ಹಿ.ಪ್ರಾ, ಶಾಲೆ ಕಂಚುಗೋಡು, ನೇತಾಜಿ ಸುಭಾಸ್‌ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆ ಮರವಂತೆ, ಸರ್ಕಾರಿ ಹಿ.ಪ್ರಾ. ಶಾಲೆ ಕಿರಿಮಂಜೇಶ್ವರ, ಸರ್ಕಾರಿ ಹಿ.ಪ್ರಾ. ಶಾಲೆ ಕಂಚಿಕಾನು, ಸರ್ಕಾರಿ ಹಿ.ಪ್ರಾ. ಶಾಲೆ ಮಾರ್ಡಿ ಇಲ್ಲಿಗೆ ಈ ಹೈಟೆಕ್ ಶೌಚಾಲಯ ಮಂಜೂರಾಗಿವೆ. ಈ ಸಂದರ್ಭ ಮಾತನಾಡಿದ ಶಾಸಕರು, ಪ್ರಸಕ್ತ ವರ್ಷದಲ್ಲಿ ಎಂಆರ್‌ ಪಿಎಲ್ ಸಂಸ್ಥೆ ಬೈಂದೂರು ಕ್ಷೇತ್ರಕ್ಕೆ 2 ಕೋಟಿ ರು.ಗೂ ಅಧಿಕ ಸಿಎಸ್‌ಆರ್ ಅನುದಾನ ನೀಡಿದ್ದು, ಬೈಂದೂರು ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ವರದಾನವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.

ಸಮೃದ್ಧ ಬೈಂದೂರು ಯೋಜನೆ ಮೂಲಕ ಶಿಕ್ಷಣ, ಆರೋಗ್ಯ, ಸ್ವಚ್ಛತೆ, ಗ್ರಾಮೀಣಾಭಿವೃದ್ಧಿ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಿದ್ದು, ಈಗಾಗಲೇ ಕ್ಷೇತ್ರದಲ್ಲಿ ವಿವಿಧ ಸಂಸ್ಥೆಗಳ 30 ಕೋಟಿ ರು,ಗೂ ಅಧಿಕ ಸಿಎಸ್ ಆರ್ ಹಾಗೂ ದಾನಿಗಳ ಸಹಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನ ಸಾಗಿದೆ ಎಂದರು.

ಇದೇ ಸಂದರ್ಭ ಬೈಂದೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೂಮಿ ಟ್ರಸ್ಟ್ ಸಹಕಾರದಿಂದ ಭೀಮ ಗೋಲ್ಡ್ ಅವರ ಸಿಎಸ್ಆರ್ ನಿಧಿಯಿಂದ ನೀಡಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು.

ಭೂಮಿ ಪೂಜನ ಕಾರ್ಯಕ್ರಮದಲ್ಲಿ ಎಲ್ಲ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಪೋಷಕರು, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಹಾಗೂ ಊರಿನ ಪ್ರಮುಖರು ಭಾಗವಹಿಸಿದ್ದರು.