ಬಳ್ಳಾರಿ: ಸಂಡೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಬಾಬಯ್ಯ ಕ್ರಾಸ್‌ ಬಳಿ ಎನ್‌ಎಂಡಿಸಿ ಸಿ-ಬ್ಲಾಕ್‌ನಿಂದ ಜ.16ರಂದು ಅಕ್ರಮವಾಗಿ ಕಬ್ಬಿಣದ ಅದಿರನ್ನು ಸಾಗಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿ, 20 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್‌ ಡಿ.ಪನ್ನೇಕರ್‌ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜ.17ರಂದು ಡಿಎಂಜಿ ಇಲಾಖೆಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ತನಿಖೆ ವೇಳೆ ಆರೋಪಿ ತಿಪ್ಪೇಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಎನ್‌ಎಂಡಿಸಿಯ ಸಿ-ಬ್ಲಾಕ್‌ ನಿಂದ ಅಕ್ರಮ ಮಾರ್ಗದಲ್ಲಿ ಅದಿರನ್ನು ಸಾಗಾಟ ಮಾಡಿರುವ ಬಗ್ಗೆ ಆರೋಪಿ ಒಪ್ಪಿಕೊಂಡಿದ್ದಾನೆ. ಇನ್ನು ಕೆಲವರು ಸಹ ಅಕ್ರಮವಾಗಿ ಕಬ್ಬಿಣದ ಅದಿರು ಸಾಗಾಟ ಮಾಡಿರುವ ಬಗ್ಗೆ ಹೇಳಿಕೆ ನೀಡಿದ್ದಾನೆ.

ಇಲ್ಲಿನ ಅದಿರನ್ನು ಅಕ್ರಮವಾಗಿ ನೆರೆಯ ಆಂಧ್ರ ಪ್ರದೇಶದ ನೇಮಕಲ್ಲು ಬಳಿಯಿರುವ ಶ್ರೀಸಾಯಿ ಬಾಲಾಜಿ ಸ್ಟಾಂಜ್‌ ಐರನ್‌ ಇಂಡಿಯ ಪ್ರೈವೇಟ್‌ ಲಿಮಿಟೆಡ್‌ ಫ್ಯಾಕ್ಟರಿಗೆ ಹಾಗೂ ಬಳ್ಳಾರಿಯ ಹೊರವಲಯದ ಸಿರಿವಾರ ಗ್ರಾಮದ ಬಳಿಯಿರುವ ನೋಬಲ್‌ ಇಸ್ಪಾತ್‌ ಎನರ್ಜಿಸ್‌ ಲಿಮಿಟೆಡ್‌ ಫ್ಯಾಕ್ಟರಿಗಳಿಗೆ ಸಾಗಿಸಿರುವುದಾಗಿ ಸಹ ಮಾಹಿತಿ ನೀಡಿದ್ದಾನೆ. ಈ ಆಧಾರದಲ್ಲಿ ಶ್ರೀಸಾಯಿ ಬಾಲಾಜಿ ಸ್ಟಾಂಜ್‌ ಐರನ್‌ ಇಂಡಿಯ ಪ್ರೈವೇಟ್‌ ಲಿಮಿಟೆಡ್‌ ಫ್ಯಾಕ್ಟರಿಯಿಂದ 1050 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರು, ನೋಬಲ್‌ ಇನ್ಸಾತ್‌ ಎನರ್ಜಿಸ್‌ ಲಿಮಿಟೆಡ್‌ ಫ್ಯಾಕ್ಟರಿಯಿಂದ 1437 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರನ್ನು ಜಪ್ತಿ ಮಾಡಿ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ನಾಗಲಾಪುರ ಗ್ರಾಮದ ಆರೋಪಿ ತಿಪ್ಪೇಸ್ವಾಮಿ ಸೇರಿದಂತೆ ಮೂವರನ್ನು ಬಂಧಿಸಿದ್ದು, ಇನ್ನು ಆರೋಪಿತರ ಪತ್ತೆ, ಕಂಪನಿಗಳಿಂದ ಪೂರಕ ದಾಖಲಾತಿಗಳನ್ನು ಪಡೆದು ಪರಿಶೀಲನೆ ನಡೆಸುವುದು. ಜಿಪಿಎಸ್‌ ಟ್ರ್ಯಾಕಿಂಗ್‌ ಮಾಡುವುದು ಬಾಕಿಯಿದ್ದು, ವಾಸ್ತವಾಂಶಗಳನ್ನು ಶೀಘ್ರದಲ್ಲಿಪತ್ತೆ ಹಚ್ಚಲಾಗುವುದು ಎಂದು ತಿಳಿಸಿದರು.