ಧರ್ಮಸ್ಥಳದಲ್ಲಿ 2000ನೇ ಮದ್ಯವರ್ಜನ ಶಿಬಿರ

| Published : Nov 07 2025, 02:15 AM IST

ಸಾರಾಂಶ

ಮುಂಬರುವ ಚುನಾವಣೆಯಲ್ಲಿ ರಾಜಕಾರಣಿಗಳು ಮತ ಕೇಳಲು ಬಂದರೆ, ಮನೆಯಲ್ಲಿರುವವರ ಕುಡಿತ ಬಿಡಿಸಬೇಕು ಎಂಬ ಬೇಡಿಕೆಯನ್ನು ಅವರಲ್ಲಿ ಇಡಬೇಕು. ಬೇರೆ ಯಾವ ಆಮಿಷಕ್ಕೂ ಒಳಗಾಗಬಾರದು ಎಂದು ಹುಕ್ಕೇರಿ ಗುರುಶಾಂತೇಶ್ವರ ಹಿರೇಮಠದ ಶ್ರೀ ಷ.ಬ್ರ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಜನರಿಗೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿಮುಂಬರುವ ಚುನಾವಣೆಯಲ್ಲಿ ರಾಜಕಾರಣಿಗಳು ಮತ ಕೇಳಲು ಬಂದರೆ, ಮನೆಯಲ್ಲಿರುವವರ ಕುಡಿತ ಬಿಡಿಸಬೇಕು ಎಂಬ ಬೇಡಿಕೆಯನ್ನು ಅವರಲ್ಲಿ ಇಡಬೇಕು. ಬೇರೆ ಯಾವ ಆಮಿಷಕ್ಕೂ ಒಳಗಾಗಬಾರದು ಎಂದು ಹುಕ್ಕೇರಿ ಗುರುಶಾಂತೇಶ್ವರ ಹಿರೇಮಠದ ಶ್ರೀ ಷ.ಬ್ರ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಜನರಿಗೆ ಸಲಹೆ ನೀಡಿದರು.ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾವಿರಾರು ಮದ್ಯವರ್ಜಿತರ 2000ನೇ ಮದ್ಯವರ್ಜನ ಶಿಬಿರದ ಸಮಾವೇಶದಲ್ಲಿ ಆಶೀರ್ವಚನ ನೀಡಿದ ಅವರು, ಬಾಯಿ ಮಾತಿನಿಂದ ಪರಿವರ್ತನೆ ಸಾಧ್ಯವಿಲ್ಲ. ಮಾತಿನಲ್ಲಿ ಹೇಳುವುದನ್ನು ಕಾಯಕದಲ್ಲಿ ಮಾಡಿ ತೋರಿಸಬೇಕು. ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಎಲ್ಲವನ್ನೂ ಮಾತಿನಲ್ಲಿ ಹೇಳದೆ ಕೃತಿ ಮೂಲಕ, ಕಾಯಕದ ಮೂಲಕ ಕ್ರಾಂತಿಕಾರಿ ಪರಿವರ್ತನೆ ಮಾಡಿ ತೋರಿಸಿದ್ದಾರೆ ಎಂದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರಾಮರಾಜ್ಯದ ಕಲ್ಪನೆ ಸಾಕಾರಗೊಳಿಸಿದ್ದಾರೆ. ಮಹಿಳಾಸಬಲೀಕರಣ, ಮದ್ಯವರ್ಜನ ಶಿಬಿರ, ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡಿದ್ದು, ಉಚಿತ ಸಾಮೂಹಿಕ ವಿವಾಹ, ಕೆರೆಗಳಿಗೆ ಕಾಯಕಲ್ಪ, ಶಾಲೆಗಳಿಗೆ ಪೀಠೋಪಕರಣಗಳ ವಿತರಣೆ ಸೇರಿದಂತೆ ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ. ಸೇವೆಯಲ್ಲಿ ದೇವರನ್ನು ಕಾಣುತ್ತಿರುವ ಅವರ ದೂರದೃಷ್ಟಿ, ನಾಯಕತ್ವ ಹಾಗೂ ಚಿಂತನೆಗಳು ಇಡಿ ವಿಶ್ವಕ್ಕೆ ಮಾದರಿಯಾಗಿವೆ ಎಂದು ಬಣ್ಣಿಸಿದರು.

ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು, ಮದ್ಯವರ್ಜಿತರು ಸಂಯಮ ಮತ್ತು ದೃಢ ಸಂಕಲ್ಪದಿಂದ ಇರಬೇಕು. ಮುಂದೆ ಯಾವುದೇ ಆಕರ್ಷಣೆ, ಒತ್ತಡಕ್ಕೆ ಒಳಗಾಗದೆ ಉತ್ತಮ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು. ಹೇಮಾವತಿ ವೀ. ಹೆಗ್ಗಡೆ ಹಾಗೂ ಡಿ.ಹರ್ಷೇಂದ್ರ ಕುಮಾರ್ ಮಾತನಾಡಿದರು.

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಾಪುರ ಸಮಾವೇಶ ಉದ್ಘಾಟಿಸಿ, ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರ ಸಾಮಾಜಿಕ ಪರಿವರ್ತನೆಯ ಬಹುಮುಖಿ ಸೇವಾಕಾರ್ಯಗಳನ್ನು ಶ್ಲಾಘಿಸಿದರು.ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಮಾಣಿಲದ ಮೋಹನದಾಸ ಸ್ವಾಮೀಜಿ, ಬೆಂಗಳೂರು ಕ್ಷೇಮವನದ ಸಿಇಒ ಶ್ರದ್ಧಾ ಅಮಿತ್, ರಾಜಣ್ಣ ಕೊರವಿ, ರಾಮಸ್ವಾಮಿ, ಶ್ರೀನಿವಾಸ ಭಟ್, ದೇವದಾಸ ಹೆಬ್ಬಾರ್, ಕಾಸಿಂ ಮಲ್ಲಿಗೆ ಮನೆ, ಶಾಂತಾರಾಮ ಪೈ, ಆನಂದ ಸುವರ್ಣ ಉಪಸ್ಥಿತರಿದ್ದರು.

ನವಜೀವನ ಸಮಿತಿ ಸದಸ್ಯರಿಗೆ ಪ್ರಶಸ್ತಿ:

ಮದ್ಯವ್ಯಸನಿಗಳನ್ನು ವ್ಯಸನಮುಕ್ತರಾಗಿಸಿದ ನವಜೀವನ ಸಮಿತಿ ಸದಸ್ಯರಿಗೆ ‘ಜಾಗೃತಿ ಮಿತ್ರ’ ಮತ್ತು ‘ಜಾಗೃತಿ ಅಣ್ಣ’ ಪ್ರಶಸ್ತಿ ನೀಡಲಾಯಿತು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲ್ಯಾನ್ ಮತ್ತು ಸಮಾಜ ಸೇವಕ ಮುಂಬೈನ ಆರ್.ಬಿ. ಹೆಬ್ಬಳ್ಳಿ ಅವರನ್ನು ಗೌರವಿಸಲಾಯಿತು.