2024 ರ ಎಂಪಿ ಚುನಾವಣೇಲಿ ಕಾಂಗ್ರೆಸ್‌ ಪಕ್ಷಕ್ಕೆ ಗೆಲುವು

| Published : Mar 07 2024, 01:46 AM IST

ಸಾರಾಂಶ

2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಗೆಲ್ಲಲಿದ್ದು, ಚಾಮರಾಜನಗರ ಲೋಕಸಭೆ ಕ್ಷೇತ್ರಕ್ಕೆ ನಾನು ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಗೆಲ್ಲಲಿದ್ದು, ಚಾಮರಾಜನಗರ ಲೋಕಸಭೆ ಕ್ಷೇತ್ರಕ್ಕೆ ನಾನು ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10 ದಿನದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಚಾಮರಾಜನಗರ ಲೋಕಸಭೆ ಅಭ್ಯರ್ಥಿ ಪೈನಲ್‌ ಆಗಲಿದ್ದು, ರಾಜಕೀಯ ಅನುಭವದಲ್ಲಿ ಎಲ್ಲಾ ಆಕಾಂಕ್ಷಿಗಳಿಗಿಂತ ಮುಂದೆ ಇರುವ ನನಗೆ ಈ ಬಾರಿ ಟಿಕೆಟ್‌ ನೀಡಿದರೆ ಇದು ನನ್ನ ಕೊನೆಯ ಚುನಾವಣೆ ಕೂಡ ಆಗಲಿದೆ ಎಂದರು.ಲೋಕಸಭಾ ಸದಸ್ಯನಾಗಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದೇನೆ. ನಂತರ ನನಗೆ ಮೂರು ಅವಧಿಯಲ್ಲಿ ಧ್ರುವನಾರಾಯಣ್ ಹಾಲಿ ಸಂಸದರು ಎಂಬ ಕಾರಣಕ್ಕೆ ಟಿಕೆಟ್ ದೊರೆಯಲಿಲ್ಲ. ಎರಡು ಬಾರಿ ದಿ. ಧ್ರುವನಾರಾಯಣ್ ಉತ್ತಮ ಕೆಲಸ ಮಾಡಿದ್ದಾರೆ. ಕಳೆದ ಬಾರಿ ಸೋತಿದ್ದರು ಸಹ ವರ್ಚಸ್ಸು ಹೆಚ್ಚಿಸಿಕೊಂಡಿದ್ದರು. ಈಗ ಅವರು ನಿಧನರಾಗಿದ್ದಾರೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ನನ್ನನ್ನು ವರಿಷ್ಠರು ಪರಿಗಣಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದರು.ಯುಪಿಎ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಮತ ನೀಡಿದ್ದು, ಪಕ್ಷದ ವರಿಷ್ಠರ ತೀರ್ಮಾನದ ವಿರುದ್ಧವಾಗಿ ಅಂದು ಸೋನಿಯಾಗಾಂಧಿ ಪರ ಸಂಸತ್‌ನಲ್ಲಿ ಮತ ಹಾಕಿದ್ದೇನೆ. ಹೀಗಾಗಿ ಈ ಬಾರಿ ವರಿಷ್ಠರು ನನಗೆ ಚಾ.ನಗರ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಬೇಕು ಎಂದರು. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕ್ಷೇತ್ರದ ಶಾಸಕರು ಹಾಗೂ ಮಾಜಿ ಶಾಸಕರನ್ನು ಖುದ್ದು ಭೇಟಿ ಮಾಡಿ, ಮನವಿ ಮಾಡಿಕೊಂಡಿದ್ದೇನೆ. ಅವರು ಸಹ ಪೂರಕವಾಗಿ ಸ್ಪಂದಿಸಿದ್ದಾರೆ. ಕಳೆದ 15 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯನಾಗಿ ಲೋಕಸಭಾ, ವಿಧಾನಸಭೆ ಹಾಗೂ ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಕೆಲಸ ಮಾಡಿ, ಅವರ ಗೆಲುವಿಗೆ ಶ್ರಮ ವಹಿಸಿದ್ದೇನೆ. ಅಲ್ಲದೇ 8 ಕ್ಷೇತ್ರಗಳಲ್ಲಿ ತನ್ನದೇ ಆದ ವರ್ಚಸ್ಸು ಉಳಿಸಿಕೊಂಡು ಸಂಘಟನೆ ಮತ್ತು ಸಾರ್ವಜನಿಕರ ಜೀವನದಲ್ಲಿ ಬೆರೆತು ಸಕ್ರಿಯ ರಾಜಕಾರಣದಲ್ಲಿದ್ದೇನೆ. ಹೀಗಾಗಿ ಈ ಬಾರಿ ಖಂಡಿತ ನನಗೆ ಟಿಕೆಟ್ ದೊರೆಯುತ್ತದೆ ಎಂಬ ಅಚಲ ವಿಶ್ವಾಸವನ್ನು ಎಂ. ಶಿವಣ್ಣ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಶಿವಣ್ಣನ ಪುತ್ರ ಅಪೂರ್ವ ಶಿವಣ್ಣ, ತಾಪಂ ಮಾಜಿ ಸದಸ್ಯರಾದ ಆಲೂರು ಕೃಷ್ಣ, ಜಿಲ್ಲಾ ಕಾರ್ಮಿಕ ವಿಭಾಗದ ಉಪಾಧ್ಯಕ್ಷ ಗೂಳಿಪುರ ನಾಗೇಂದ್ರ, ಮುಖಂಡರಾದ ಆಶೋಕ್, ಕಾಗಲವಾಡಿ ಶಿವಸ್ವಾಮಿ ಹಾಜರಿದ್ದರು.