ಸಾರಾಂಶ
ಲಿಂಗಸುಗೂರು: ದೇಶದಲ್ಲಿ ಶೇ.21ರಷ್ಟು ಜನ ವ್ಯಸನಗಳಿಗೆ ದಾಸರಾಗುತ್ತಿದ್ದಾರೆ. ಶಿಕ್ಷಕರು, ಪಾಲಕರು ಮಕ್ಕಳ ಮೇಲೆ ನಿಗಾವಹಿಸಬೇಕು. ಹದಿಹರೆಯದ ವಯಸ್ಸಿನಲ್ಲಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಬಲಭೀಮರಾವ್ ಕುಲಕರ್ಣಿ ಹೇಳಿದರು.
ತಾಲೂಕಿನ ಹಟ್ಟಿ ಪಟ್ಟಣದ ಬಸವ ಸೇವಾ ಸಮಿತಿಯಲ್ಲಿ ಯೋಜನೆಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮದ್ಯಪಾನ, ಧೂಮಪಾನ, ಗುಟ್ಕಾ ಸೇವನೆಯಂಥ ದುಶ್ಚಟಗಳಿಂದ ಮಾನಸಿಕ, ದೈಹಿಕ, ಆರ್ಥಿಕ, ಸಾಮಾಜಿಕ ಸ್ವಾಸ್ಥ್ಯ ಹದಗೆಡುತ್ತದೆ. ದುಶ್ಚಟಗಳಿಗೆ ಕಡಿವಾಣ ಹಾಕಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಅಡಿವೆಯ್ಯ ಸಲಹೆ ನೀಡಿದರು.
ಯೋಜನೆವತಿಯಿಂದ 1774 ಮದ್ಯ ವರ್ಜನೆ ಶಿಬಿರ ಆಯೋಜಿಸಲಾಗಿದೆ. ಲಕ್ಷಾಂತರ ಜನರು ಮದ್ಯವ್ಯವಸನದಿಂದ ದೂರವಾಗಿದ್ದು ನವಜೀವನ ಪ್ರಾರಂಭಿಸಿದ್ದಾರೆ. ಯೋಜನೆಯಿಂದ ನಡೆಯುವ ಹಲವಾರು ಚಟುವಟಿಕೆಗಳಲ್ಲಿ ಸದಸ್ಯರು ಪಾಲ್ಗೊಂಡು ಸದುಪಯೋಗಪಡಿಸಿಕೊಳ್ಳಬೇಕೆಂದರು.
ವಲಯ ಮೇಲ್ವಿಚಾರಕ ಶಿವಗ್ಯಾನಿ ನಾಯಕ್, ನೋಡೆಲ್ ಅಧಿಕಾರಿ ಪರಶುರಾಮ್, ಒಕ್ಕೂಟದ ಅಧ್ಯಕ್ಷೆ ಶಾರದಾ ಹಾಗೂ ಮೇಲ್ವಿಚಾರಕರು, ಸದಸ್ಯರು ಸೇರಿದಂತೆ ಇತರರು ಇದ್ದರು.