ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಾರ್ಚ್ 8ರಿಂದಲೇ ಒಂದು ಲೀಟರ್ ಹಾಲಿಗೆ ಖರೀದಿ ದರದಲ್ಲಿ 50 ಪೈಸೆ ಹೆಚ್ಚಿಸಿ ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರಿಗೆ ಉಗಾದಿ ಹಬ್ಬಕ್ಕೆ ಕೊಡುಗೆಯನ್ನುಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಚಿಮೂಲ್) ನೀಡಿದೆ ಎಂದು ಅಧ್ಯಕ್ಷ ವಿ. ಮಂಜುನಾಥರೆಡ್ಡಿ ತಿಳಿಸಿದರು.ನಗರ ಹೊರವಲಯದ ನಂದಿ ಕ್ರಾಸ್ ಬಳಿಯ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ತಮ್ಮ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಅವಕಾಶ ಬೇಸಿಗೆಯ ಮೂರು ತಿಂಗಳಿಗೆ ಮಾತ್ರ ನೀಡಿದ್ದು, ಮೂರು ತಿಂಗಳ ನಂತರ ಹಾಲು ಉತ್ಪಾದನೆ ನೋಡಿಕೊಂಡು ದರ ಹೆಚ್ಚಳದ ಬಗ್ಗೆ ಪರಿಶೀಲನೆ ಮಾಡಲಾಗುವುದು. ಇದು ರಾಜ್ಯದಲ್ಲಿಯೇ 2026 ನೇ ಸಾಲಿನಲ್ಲಿ ಎರಡನೇ ಬಾರಿಗೆ ಪ್ರಥಮವಾಗಿ ಬೆಲೆ ಏರಿಕೆ ಮಾಡಿದ ಕೀರ್ತಿ ನಮ್ಮ ಒಕ್ಕೂಟಕ್ಕೆ ಸಲ್ಲುತ್ತದೆ ಎಂದರು.ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಕೋಲಾರ ಜಿಲ್ಲಾ ಸಹಕಾರ ಹಾಲು ಒಕ್ಕೂಟದಿಂದ ಒಂದೂವರೆ ವರ್ಷದ ಹಿಂದೆ ಬೆರ್ಪಟ್ಟು 3.90 ಲಕ್ಷ ಲೀಟರ್ ಹಾಲು ಶೇಖರಣೆಯಿಂದ ಕಾರ್ಯರಂಭಗೊಂಡ ಒಕ್ಕೂಟ ಈಗ 5.0 ಲಕ್ಷ ಲೀಟರ್ ಹಾಲು ಪ್ರತಿದಿನ ಶೇಖರಣೆ ಮಾಡುತ್ತಿದೆ. ಬೇಸಿಗೆ ಪ್ರಾರಂಭವಾಗಿರುವುದರಿಂದ ಹಾಲು ಉತ್ಪಾದನೆ ಕಡಿಮೆ ಇದೆ.

ಇಂತಹ ಸಂಕಷ್ಟ ಸಂದರ್ಭದಲ್ಲಿ ಉತ್ಪಾದಕರ ಕಷ್ಟಕ್ಕೆ ಸ್ಪಂದಿಸಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಆಡಳಿತಾಧಿಕಾರಿ ಮಂಡಲಿ ನಿರ್ದೇಶಕರ ನೇತೃತ್ದಲ್ಲಿ ಸಮಾಲೋಚಿಸಿ ಒಕ್ಕೂಟ ಈ ತೀರ್ಮಾನ ತೆಗೆದುಕೊಂಡಿದೆ. ಇದು ರಾಜ್ಯದ 16 ಒಕ್ಕೂಟಗಳಲ್ಲೆ ಎರಡನೇ ಬಾರಿಗೆ ಮೊದಲಾಗಿದೆ. ಕಳೆದ ಜನವರಿ ಒಂದರಂದು ಹೊಸವರ್ಷಕ್ಕೆ ಪ್ರತಿ ಲೀ. ಹಾಲಿಗೆ 1 ರೂ. ದರ ಹೆಚ್ಚಳ ಮಾಡಲಾಗಿತ್ತು ಈಗ ಕೇವಲ 67 ದಿನಗಳ ಅಂತರದಲ್ಲಿ ಮತ್ತೆ 50 ಪೈಸೆ ಹೆಚ್ಚಳ ಮಾಡಿರುವುದರಿಂದ 2.50 ಕೋಟಿ ರು. ಆರ್ಥಿಕ ಹೊರೆ ಆಗಲಿದೆ. ಜಿಲ್ಲೆಯ 40 ಸಾವಿರ ರೈತರಿಗೆ ಇದರ ಲಾಭ ಸಿಗಲಿದೆ ಎಂದು ತಿಳಿಸಿದರು. ಚಿಮುಲ್‌ನಲ್ಲಿ ಈಗ ಸದ್ಯ ಹಾಲು ಮತ್ತು ಮೊಸರು ಪ್ಯಾಕಿಂಗ್ ಘಟಕ ಇಲ್ಲದಿರುವುದರಿಂದ ಕೋಲಾರ ಬೆಂಗಳೂರು ಡೈರಿಗಳಿಂದ ಸರಬರಾಜು ಮಾಡಿಕೊಳ್ಳುತ್ತಿರುವುದರಿಂದ 2.5 ಕೋಟಿ ವೆಚ್ಚವಾಗುತ್ತಿದ್ದು, ಘನ ಸರ್ಕಾರ ಲೋಕಲ್ ಸೆಲ್ ಘಟಕ ಸ್ಥಾಪನೆಗಾಗಿ 9.15 ಎಕರೆ ಜಮೀನು ಮುಂಜೂರು ಮಾಡಿದೆ. ಆ ಘಟಕ ನಿರ್ಮಾಣಕ್ಕೆ 30 ಕೋಟಿ ವೆಚ್ಚದ ಡಿಪಿಆರ್ ತಯಾರಿಸಲಾಗಿದೆ. ಲೋಕಲ್ ಸೆಲ್ ಪ್ಯಾಕಿಂಗ್ ಘಟಕ ತಯಾರಾದರೆ ಮೇಲೆ ನಮಗೆ ಪ್ರತಿತಿಂಗಳು ಒಂದು ಕೋಟಿ ಉಳಿತಾಯವಾಗುವ ನಿರೀಕ್ಷೆಯಲ್ಲಿದ್ದೇವೆ. ಸದ್ಯ ನಮ್ಮಲ್ಲಿ ತುಪ್ಪ, ಮೈಸೂರು ಪಾಕ್ ಮತ್ತು ದೂದ್ ಪೇಡಾಗೇ ಹೆಚ್ಚು ಬೇಡಿಕೆ ಇದೆ.

ಹಾಲು ಉತ್ಪಾದಕರಿಗೆ ಚಿಮುಲ್ ಪ್ರಸ್ತುತ ಪ್ರತಿ ಲೀ. ಹಾಲಿಗೆ 36 ರು. 40 ಪೈಸೆ ದರ ನೀಡುತ್ತಿತ್ತು. ಹೊಸ ವರ್ಷದ ಕೊಡುಗೆಯಾಗಿ ಲೀ. ಹಾಲಿಗೆ ಇನ್ಮುಂದೆ 36 ರು. 90 ಪೈಸೆ ನೀಡಲಾಗುವುದು. ಸರ್ಕಾರ ನೀಡುತ್ತಿರುವ ಪ್ರೋತ್ಸಾಹಧನ 5 ರು. ಸೇರಿ ರು. 41.90 ಪ್ರತಿ ಲೀಟರ್‌ಗೆ ನೀಡಲಾಗುತ್ತದೆ. ರಾಜ್ಯದಲ್ಲಿ ಅಧಿಕ ದರ ನೀಡುತ್ತಿರುವ ಪ್ರಥಮ ಜಿಲ್ಲೆ ನಮ್ಮದಾಗಿದೆ. ಈಗ ನಮ್ಮ ಜಿಲ್ಲೆಯಲ್ಲಿ ಒಟ್ಟು 996 ಹಾಲು ಉತ್ಪಾದಕರ ಸಹಕಾರ ಸಂಘಗಳು ಕೆಲಸ ಮಾಡುತ್ತಿದು ಅವುಗಳ ಪೈಕಿ 125 ಮಹಿಳಾ ಸಂಘಗಳು ಕೆಲಸ ಮಾಡುತ್ತಿವೆ. ಅವುಗಳಲ್ಲಿ ಎಲ್ಲಾ ಸಂಘಗಳು ಗುಣಮಟ್ಟದ ಹಾಲು ಸರಭರಾಜು ಮಾಡುತ್ತಿದ್ದು, ಐದಾರು ಸಂಘಗಳು ನಷ್ಟದಲ್ಲಿ ನಡೆಯುತ್ತಿರಬಹುದು. ಚಿಮುಲ್‌ನಿಂದ ಕಾಶ್ಮೀರ, ಪಶ್ಚಿಮ ಬಂಗಾಳ, ಗೋವಾ ಹಾಗೂ ಸೇನಾ ಮತ್ತು ರಕ್ಷಣಾ ನಮ್ಮ ಹಾಲು ಸರಬರಾಜಾಗುತ್ತಿದೆ ಎಂದು ಹೇಳಿದರು.

ಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್ ಮಾತನಾಡಿ, ಸಿಬ್ಬಂದಿ ವರ್ಗಕ್ಕೆ 75 ಸಾವಿರ ಮತ್ತು ಗುತ್ತಿಗೆ ಸಿಬ್ಬಂದಿಗೆ ವೇತನಾನುಸಾರ ಶೇ 4.1ರಷ್ಟು ಎಕ್ಸ್ ಗ್ರೇಷಿಯಾವನ್ನು ಯುಗಾದಿ ಕೊಡುಗೆಯಾಗಿ ನೀಡಲಾಗುವುದು ಎಂದು ತಿಳಿಸಿದರು.


ಸುದ್ದಿಗೋಷ್ಟಿಯಲ್ಲಿ ಚಿಮುಲ್ ನಿರ್ದೇಶಕರಾದ ಕಾಂತರಾಜು, ದಿನೇಶ್. ಕೆ.ಎನ್.ಕೃಷ್ಣಾರೆಡ್ಡಿ, ಆದಿನಾರಾಯಣರೆಡ್ಡಿ, ಕೆ.ಎನ್.ಆವಲಪ್ಪ, ಸುಧಾ, ಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಎ.ಸಿ.ಶ್ರೀನಿವಾಸಗೌಡ ಇದ್ದರು.

ಸಿಕೆಬಿ-2 ಸುದ್ದಿಗಾರರೊಂದಿಗೆ ಚಿಮುಲ್ ಅಧ್ಯಕ್ಷ ವಿ.ಮಂಜುನಾಥರೆಡ್ಡಿ ಮಾತನಾಡಿದರು.