ಕನ್ನಡಪ್ರಭ ವಾರ್ತೆ ಕೊರಟಗೆರೆ ರಾಜ್ಯ ಸರ್ಕಾರದಿಂದ ಕೊರಟಗೆರೆ ಕ್ಷೇತ್ರಕ್ಕೆ ೨೦೨೫-೨೬ನೇ ಆರ್ಥಿಕ ವರ್ಷಕ್ಕೆ ೨೧೮ಕೋಟಿಗೆ ಮಂಜೂರಾಗಿದ್ದು, ಪ್ರಸ್ತುತ ೬೦ಕೋಟಿಯ ವಿವಿಧ ನೀರಾವರಿ ಮತ್ತು ರಸ್ತೆ ಕಾಮಗಾರಿಗಳಿಗೆ ಅಡಿಗಲ್ಲು ಹಾಕಿದ್ದೇನೆ. ಬಜೆಟ್‌ನಲ್ಲಿ ನೀರಾವರಿ ಯೋಜನೆಗೆ ಪ್ರಮುಖ ಆದ್ಯತೆ ನೀಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.ತಾಲೂಕಿನ ಹೊಳವನಹಳ್ಳಿ ಹೋಬಳಿಯ ಗರುಡಾಚಲ, ಸುವರ್ಣಮುಖಿ ಮತ್ತು ಜಯಮಂಗಲಿ ನದಿಗಳಿಗೆ ಅಡ್ಡಲಾಗಿ ಚೇಕ್ ಡ್ಯಾಂ ಕಂ ಬ್ರೀಡ್ಜ್ ಮತ್ತು ವಿವಿಧ ರಸ್ತೆ ಕಾಮಗಾರಿಗಳಿಗೆ ಸೋಮವಾರ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು.ಶಾಶ್ವತ ನೀರಾವರಿಗೆ ಎತ್ತಿನಹೊಳೆ ಯೋಜನೆಯಿಂದ ೬೯ಕೆರೆಗಳಿಗೆ ನೀರು ಹರಿಸುವ ಪೈಪ್‌ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಅಂತರ್ಜಲ ಅಭಿವೃದ್ದಿಗೆ ಗರುಡಾಚಲ, ಜಯಮಂಗಲಿ, ಸುವರ್ಣಮುಖಿ ನದಿಗಳಿಗೆ ಅಡ್ಡಲಾಗಿ ೩೮ಕೋಟಿ ಅನುದಾನದಿಂದ ೧೦ಕಡೆ ಚೆಕ್‌ಡ್ಯಾಂ ಕಂ ಬ್ರೀಡ್ಜ್ ನಿರ್ಮಾಣ ಮಾಡಲಾಗುತ್ತಿದ್ದು, ಚುನಾವಣೆ ವೇಳೆ ನಾನು ರೈತರಿಗೆ ನೀಡಿದ ನೀರಾವರಿ ಭರವಸೆ ಈಡೇರುತ್ತಿದೆ ಎಂದರು.

ತೋವಿನಕೆರೆಗೆ ಸರ್ಕಾರದಿಂದ ೩೬ಕೋಟಿಯ ಹೈಟೆಕ್ ಆಸ್ಪತ್ರೆ ಉದ್ಘಾಟನೆಗೆ ಸಿದ್ದವಾಗಿದೆ. ಕೊರಟಗೆರೆ ಪಟ್ಟಣಕ್ಕೆ ಹೈಟೆಕ್ ಆಸ್ಪತ್ರೆಗೆ ೪೦ ಕೋಟಿಯ ಅನುದಾನ ಮಂಜೂರಾಗಿದ್ದು ಅಡಿಗಲ್ಲು ಹಾಕಬೇಕಿದೆ. ೨೦೨೬-೨೭ನೇ ಸಾಲಿನ ಬಜೆಟ್‌ನಲ್ಲಿ ಕೋಳಾಲಕ್ಕೆ ಹೈಟೆಕ್ ಆಸ್ಪತ್ರೆ ಮಂಜೂರಾಗುತ್ತೆ. ಕಾರ್ಮಿಕ ಇಲಾಖೆಯ ೩೨ಕೋಟಿಯ ವಸತಿನಿಲಯ ತೋವಿನಕೆರೆಯಲ್ಲಿ ನಿರ್ಮಾಣ ಆಗುತ್ತೆ ಎಂದು ಗೃಹಸಚಿವ ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್ಪಿ ಅಶೋಕ್, ಎಸಿ ಗೋಟೊರು ಶಿವಪ್ಪ, ಸಣ್ಣ ನೀರಾವರಿ ಇಇ ಸುರೇಶ್, ಎಇಇ ತಿಪ್ಪೇಸ್ವಾಮಿ, ರಮೇಶ್, ಪಿಡ್ಲ್ಯೂಡಿ ಎಸ್‌ಇ ಜಗದೀಶ್, ಎಇಇ ದೀಪಕ್, ತಾಪಂ ಇಓ ಅಪೂರ್ವ, ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ನಾಗಣ್ಣ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅರಕೆರೆಶಂಕರ್, ಅಶ್ವತ್ಥನಾರಾಯಣ್, ಯುವಧ್ಯಕ್ಷ ಬೈರೇಶ್, ವಿನಯ್, ಮುಖಂಡರಾದ ಮಹಾಲಿಂಗಪ್ಪ ಕವಿತಮ್ಮ, ಜಯರಾಮು, ಉಮೇಶ್, ಜಯರಾಜ್, ರವಿಕುಮಾರ್, ನಾಸೀರ್, ರಾಮಾಂಜಿನಯ್ಯ, ಸೇರಿದಂತೆ ಇತರರು ಇದ್ದರು.