ಶಾಶ್ವತ ಕುಡಿಯುವ ನೀರಿನ ಯೋಜನೆಗೆ ₹22.63 ಕೋಟಿ: ಆನಂದ್ ಮಾಹಿತಿ

| Published : Nov 02 2025, 03:00 AM IST

ಸಾರಾಂಶ

ನರಸಿಂಹರಾಜಪುರ, ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿ ಮುತ್ತಿನಕೊಪ್ಪ ತುಂಗಾ ನದಿಯಿಂದ ಪಟ್ಟಣದ ಶಾಶ್ವತ ಕುಡಿಯುವ ನೀರಿನ ಪೂರೈಕೆಗೆ ಮಂಜೂರಾದ ₹22.63 ಕೋಟಿಯಡಿ ಕಾಮಗಾರಿ ಪ್ರಾರಂಭ ವಾಗಿದೆ ಎಂದು ಕುಡಿಯುವ ನೀರು ಸರಬರಾಜು ಇಲಾಖೆ ಕೊಪ್ಪ ಡಿವಿಜನ್ ನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆನಂದ್ ಮಾಹಿತಿ ನೀಡಿದರು.

- ನರಸಿಂಹರಾಜಪುರ ಪಟ್ಟಣ ಪಂಚಾಯಿತಿ ಸರ್ವ ಸದಸ್ಯರ ಸಾಮಾನ್ಯ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿ ಮುತ್ತಿನಕೊಪ್ಪ ತುಂಗಾ ನದಿಯಿಂದ ಪಟ್ಟಣದ ಶಾಶ್ವತ ಕುಡಿಯುವ ನೀರಿನ ಪೂರೈಕೆಗೆ ಮಂಜೂರಾದ ₹22.63 ಕೋಟಿಯಡಿ ಕಾಮಗಾರಿ ಪ್ರಾರಂಭ ವಾಗಿದೆ ಎಂದು ಕುಡಿಯುವ ನೀರು ಸರಬರಾಜು ಇಲಾಖೆ ಕೊಪ್ಪ ಡಿವಿಜನ್ ನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆನಂದ್ ಮಾಹಿತಿ ನೀಡಿದರು.

ಶುಕ್ರವಾರ ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷೆ ಜುಬೇದಾ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಪಟ್ಟಣದ 1800 ಮನೆಗಳಿಗೆ ಹೊಸದಾಗಿ ಪೈಪ್ ಲೈನ್ ಅಳವಡಿಸಿ ಮೀಟರ್ ಸಹಿತ ಪ್ರತಿಯೊಬ್ಬ ವ್ಯಕ್ತಿಗೆ ದಿನಕ್ಕೆ 135 ಲೀ. ನೀರಿನಂತೆ 10 ಲಕ್ಷ ಲೀ. ನೀರು ಸರಬರಾಜು ಮಾಡಲಾಗುವುದು. ಇದಕ್ಕೆ 2.50 ಲಕ್ಷ ಲೀ. ಸಾಮಾರ್ಥ್ಯದ ಟ್ಯಾಂಕ್ ನಿರ್ಮಿಸಲಾ ಗುವುದು.ಈಗಾಗಲೇ ಪಟ್ಟಣದಲ್ಲಿ ಪೈಪ್ ಲೈನ್ ಕಾಮಗಾರಿ ಪ್ರಾರಂಭವಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ಜುಬೇದಾ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ಹಾಗೂ ಸದಸ್ಯರು ಮಾತನಾಡಿ, ಪಟ್ಟಣದ ಎರಡು ಬದಿಯಲ್ಲೂ ಪೈಪ್ ಲೈನ್ ಅಳವಡಿಸಬೇಕು. ಹಿಂದೆ ಶಾಶ್ವತ ಕುಡಿಯುವ ನೀರು ಯೋಜನೆ ವಿಫಲವಾದಂತೆ ಆಗದೆ ಸಮರ್ಪಕವಾಗಿ ಈ ಯೋಜನೆ ಕಾಮಗಾರಿ ಮಾಡಬೇಕು ಎಂದು ಸೂಚಿಸಿದರು.

ನಗರೋತ್ಥಾನ 4 ರ ಯೋಜನೆಯಡಿ ಕ್ರಿಯಾಯೋಜನೆ ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ಮುಗಿಯುವವರೆಗೆ ನಿಲ್ದಾಣದ ಬಾಡಿಗೆದಾರರಿಗೆ ಬಾಡಿಗೆ ವಿನಾಯಿತಿ ನೀಡ ಬೇಕು ಹಾಗೂ ಇದನ್ನು ಕರಾರು ಅವಧಿಯಲ್ಲಿ ಪರಿಗಣಿಸಬೇಕು ಎಂದು ತೀರ್ಮಾನಿಸಲಾಯಿತು. ಬಸ್ ನಿಲ್ದಾಣದ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಅಂಗಡಿ ಬಾಗಿಲು ಮುಚ್ಚುವುದರಿಂದ ಬಾಡಿಗೆ ಪಾವತಿಸಿ ಎಂದು ಹೇಳುವುದು ಮಾನವೀಯತೆಯಲ್ಲ ಎಂದು ಹೇಳಿದಾಗ ಬಾಡಿಗೆ ವಿನಾಯಿತಿ ನೀಡುವ ಬಗ್ಗೆ ಅಧಿಕೃತ ದಾಖಲೆ ನೀಡುವ ಬಗ್ಗೆ ಬಾಡಿಗೆದಾರರ ಸಭೆ ಕರೆದು ತೀರ್ಮಾನಿಸುವಂತೆ ಅಧ್ಯಕ್ಷೆ ಜುಬೇದಾ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಸೂಚಿಸಿದರು. ಪಟ್ಟಣದ ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆಗೆ ಸರ್ಕಾರದಿಂದ ಈಗಾಗಲೇ ಅನುಮೋದನೆ ದೊರೆತಿದ್ದು ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಸಂಪೂರ್ಣ ಮನೆ ಕಳೆದುಕೊಳ್ಳುವ 3-4 ಕುಟುಂಬಗಳಿಗೆ ಪರಿಹಾರ ನೀಡುವ ಜತೆಗೆ ಆಶ್ರಯ ಬಡಾವಣೆಯಲ್ಲಿ ನಿವೇಶನ ನೀಡಲು ಆಶ್ರಯ ಸಮಿತಿ ಅಧ್ಯಕ್ಷರಿಗೆ ಶಿಫಾರಸು ಮಾಡಲು ಸಭೆ ನಿರ್ಧರಿಸಿತು. ಕೆಲವು ಅಂಗಡಿಯವರಿಗೆ ರಸ್ತೆ ಕಾಮಗಾರಿ ಮುಗಿಯುವವರೆಗೂ ಪಟ್ಟಣ ಪಂಚಾಯಿತಿ ಖಾಲಿ ಮಳಿಗೆಯಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗುವುದು. ಖಾತೆ ಇಲ್ಲದೆ ಇರುವ ಮನೆಯ ವರಿಗೂ ಮಾನವೀಯ ನೆಲೆಗಟ್ಟಿನಲ್ಲಿ ಪರಿಹಾರ ನೀಡಲಾಗುವುದು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಹಾಗೂ ಅಧ್ಯಕ್ಷೆ ಜುಬೇದ ತಿಳಿಸಿದರು. ಸಭೆ ಇದಕ್ಕೆ ಒಪ್ಪಿಗೆ ಸೂಚಿಸಿತು.

ಕಸವಿಲೇವಾರಿ ಘಟಕದ ಟೆಂಡರ್ ಪಡೆದ ಗುತ್ತಿಗೆದಾರರು ಸಮರ್ಪಕ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕಂದಾಯ ನಿರೀಕ್ಷಕ ವಿಜಯಕುಮಾರ್ ಸಭೆ ಗಮನಕ್ಕೆ ತಂದರು. ಅಂತಹ ಗುತ್ತಿಗೆದಾರನ ಟೆಂಡರ್ ರದ್ದು ಪಡಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಪಟ್ಟಣದ ಶಾರದ ವಿದ್ಯಾಮಂದಿರದ ಬಳಿ ಕೆರೆ ಕಾಮಗಾರಿ ಕಳಪೆಯಾಗಿದೆ. ಕೆರೆಗೆ ತಡೆಗೋಡೆ ನಿರ್ಮಿಸಲು ಅನುದಾನ ಮೀಸಲಿಟ್ಟರೂ ಅನುಮೋದನೆ ನೀಡದಿರುವ ಬಗ್ಗೆ ಪ್ರಶಾಂತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ನೂತನವಾಗಿ ನಿರ್ಮಾಣ ವಾಗುತ್ತಿರುವ ಆಶ್ರಯ ಬಡಾವಣೆಗೆ ಶಾಸಕರು ₹4 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದು ರಸ್ತೆ ಮತ್ತು ಪಾರ್ಕ್ ಗೆ ಟಿ.ಡಿ.ರಾಜೇಗೌಡರ ಹೆಸರಿಡುವಂತೆ ಸಭೆ ತೀರ್ಮಾನಿಸಿತು.

ಪಟ್ಟಣದಲ್ಲಿ ಬೀದಿ ದೀಪದ ಗುತ್ತಿಗೆ ಪಡೆದವರು ಸಮರ್ಪಕ ಬೀದಿ ದೀಪಗಳನ್ನು ಅಳವಡಿಸದಿರುವ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ವಾರ್ಡ್ ನಂ.8 ರಲ್ಲಿ ಮದರ್ ಥೆರಸಾ ಬಸ್ ತಂಗುದಾಣ ನವೀಕರಿ ಸಲು ಲಿಟ್ಲ್ ಫ್ಲವರ್ ಚರ್ಚ್ ನವರು ಮನವಿ ಸಲ್ಲಿಸಿದ ವಿಚಾರದ ಬಗ್ಗೆ ಚರ್ಚೆ ನಡೆಯಿತು.

ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಉಮಾಕೇಶವ್, ಮುಖ್ಯಾಧಿಕಾರಿ ಆರ್.ವಿ. ಮಂಜುನಾಥ್ ಇದ್ದರು. ಪಟ್ಟಣ ಪಂಚಾಯಿತಿ ಸದಸ್ಯರಾದ ಮುಕಂದ, ಮುನಾವರ್ ಪಾಷಾ, ಕುಮಾರ ಸ್ವಾಮಿ, ಸುರೈಯಾಭಾನು, ಮಹಮ್ಮದ್ ವಸೀಂ, ರೀನಾಮೋಹನ್, ರೇಖಾ, ನಾಮಿನಿ ಸದಸ್ಯರಾದ ರಜಿ, ಅಣ್ಣಪ್ಪ, ಸುಬ್ರಮಣ್ಯ , ಲೆಕ್ಕಾಧಿಕಾರಿ ಉಷಾ, ಸಮುದಾಯ ಸಂಘಟಕ ಅಧಿಕಾರಿ ಲಕ್ಷ್ಮಣಗೌಡ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.