ಗಂಗಾವತಿಯ ಸಣಾಪುರ ಜಲಾಶಯ ಬಳಿ 25 ಅಕ್ರಮ ತೆಪ್ಪಗಳ ಜಪ್ತಿ

| Published : Jan 06 2024, 02:00 AM IST / Updated: Jan 06 2024, 11:01 AM IST

ಸಾರಾಂಶ

ಅಂಜನಾದ್ರಿಯ ಸನಿಹದ ಸಣಾಪುರ ಸಮತೋಲನ ಜಲಾಶಯದಲ್ಲಿ ಅಕ್ರಮ ತೆಪ್ಪಗಳನ್ನು ಹಾಕುತ್ತಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಗ್ರಾಪಂ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 25 ತೆಪ್ಪಗಳನ್ನು ಜಪ್ತಿ ಮಾಡಿದ್ದಾರೆ.

ಗಂಗಾವತಿ: ತಾಲೂಕಿನ ಸಣಾಪುರ ಗ್ರಾಮದ ಹತ್ತಿರವಿರುವ ತುಂಗಭದ್ರಾ ಸಮತೋಲನಾ ಜಲಾಶಯದಲ್ಲಿ ಅಕ್ರಮ ತೆಪ್ಪಗಳನ್ನು ಹಾಕುತ್ತಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಗ್ರಾಪಂ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 25 ತೆಪ್ಪಗಳನ್ನು ಜಪ್ತಿ ಮಾಡಿದ್ದಾರೆ.

ಕನ್ನಡಪ್ರಭದಲ್ಲಿ ಜ.5ರಂದು "ಸಣಾಪುರ ಜಲಾಶಯದಲ್ಲಿ ಅಕ್ರಮ ತೆಪ್ಪ ಸಂಚಾರ " ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಇಲಾಖೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ತೆಪ್ಪಗಳನ್ನು ಜಪ್ತಿ ಮಾಡಿದ್ದಾರೆ.ಅಂಜನಾದ್ರಿಯ ಸನಿಹದ ಸಣಾಪುರ ಸಮತೋಲನ ಜಲಾಶಯದಲ್ಲಿ ಪ್ರವಾಸಗರನ್ನು ಆಕರ್ಷಿಸಲು ತೆಪ್ಪಗಳನ್ನು ಹಾಕುತ್ತಿದ್ದರು. 

ಈ ವೇಳೆ ಕಾರ್ಯಾಚರಣೆ ನಡೆಸಿ ಸ್ಥಳದಲ್ಲಿದ್ದ 17 ತೆಪ್ಪಗಳು ಮತ್ತು ಹಳೇ ಪ್ರವಾಸಿ ಮಂದಿರ ಹತ್ತಿರ ನದಿಯಲ್ಲಿ 3 ತೆಪ್ಪಗಳನ್ನು ಹಾಗೂ ಇತರ ಸ್ಥಳಗಳಲ್ಲಿದ್ದ 5 ತೆಪ್ಪಗಳನ್ನು ಜಪ್ತಿ ಮಾಡಿದ್ದಾರೆ.ನದಿ, ಜಲಾಶಯಗಳಲ್ಲಿ ಅನಧಿಕೃತವಾಗಿ ತೆಪ್ಪಗಳನ್ನು ಹಾಕಬಾರದೆಂದು ನ್ಯಾಯಾಲಯ, ಜಿಲ್ಲಾಡಳಿತ ಆದೇಶಿಸಿದ್ದರೂ ಇದನ್ನು ದಿಕ್ಕರಿಸಿ ತೆಪ್ಪಗಳನ್ನು ಹಾಕುತ್ತಿದ್ದರು. ಜತೆಗೆ ಪ್ರವಾಸಿಗರಿಂದ ಅಧಿಕ ಹಣ ವಸೂಲಿ ಮಾಡುತ್ತಿದ್ದಾರೆಂಬ ದೂರು ಕೇಳಿ ಬಂದಿತ್ತು. 

ನದಿಯಲ್ಲಿ ಎಷ್ಟೋ ಬಾರಿ ಅವಘಡ ಸಂಭವಿಸಿದ್ದ ಉದಾಹರಣೆಗಳಿವೆ. ಪ್ರೀ ವೆಡ್ಡಿಂಗ್ ಚಿತ್ರೀಕರಣಕ್ಕೂ ಅಧಿಕ ಹಣ ವಸೂಲಿ ಮಾಡುತ್ತಿದ್ದರು ಎಂಬ ಆರೋಪವಿತ್ತು.ತೆಪ್ಪಗಳನ್ನು ಜಪ್ತಿ ಮಾಡುತ್ತಿದ್ದಾರೆಂಬ ಮಾಹಿತಿ ಹರಡುತ್ತಿದ್ದಂತೆಯೇ ಜಲಾಶಯ ಮತ್ತು ನದಿ ಬಳಿ ಇರುವ ತೆಪ್ಪಗಳ ಮಾಲೀಕರು ನಾಪತ್ತೆಯಾಗಿದ್ದಾರೆ. 

ಇವುಗಳ ಮಾಲೀಕರ ಬಗ್ಗೆ ಇಲಾಖೆಯಿಂದ ಪತ್ತೆಕಾರ್ಯ ನಡೆಯುತ್ತಿದೆ.ಅರಣ್ಯ ಇಲಾಖೆಯ ಆರ್‌ಎಫ್‌ಒ ಸುಭಾಸ್ ಚಂದ್ರ, ಪಿಡಿಒ ವತ್ಸಲಾ ಸೇರಿದಂತೆ ಪೊಲೀಸ್ ಇಲಾಖೆ, ಗ್ರಾಪಂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.ಸಣಾಪುರ ಸಮಾನಾಂತರ ಜಲಾಶಯದಲ್ಲಿ ಅಕ್ರಮವಾಗಿ ತೆಪ್ಪಗಳನ್ನು ಹಾಕುತ್ತಿದ್ದರು.

ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ 25 ತೆಪ್ಪ ಜಪ್ತಿ ಮಾಡಲಾಗಿದ್ದು, ವಾರುಸುದಾರರ ಬಗ್ಗೆ ಪತ್ತೆ ಕಾರ್ಯ ನಡೆಯುತ್ತಿದೆ. ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರ್‌ಎಫ್‌ಒ ಸುಭಾಸ್ ಚಂದ್ರ ತಿಳಿಸಿದರು.