ಹಗರಿಬೊಮ್ಮನಹಳ್ಳಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) ಅನುದಾನದಲ್ಲಿ ₹25 ಲಕ್ಷ ಒದಗಿಸಿ ಪಟ್ಟಣದಲ್ಲಿ ಎಸ್.ಎಸ್.ಕೆ. ಸಮಾಜದ ಸಹಸ್ರಾರ್ಜುನ ಸಮುದಾಯ ಭವನ ನಿರ್ಮಾಣಕ್ಕೆ ಜೂನ್‌ನಲ್ಲಿ ಚಾಲನೆ ನೀಡಲಾಗುತ್ತದೆ ಎಂದು ಶಾಸಕ ನೇಮಿರಾಜ್ ನಾಯ್ಕ ಪ್ರಕಟಿಸಿದರು.

ಪಟ್ಟಣದ ಜಗದಂಬಾ ದೇಗುಲದ 17ನೇ ವಾರ್ಷಿಕೋತ್ಸವ, ಗಣೇಶ ಮತ್ತು ದತ್ತಾತ್ರೇಯ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ನಿಮಿತ್ತ ಮಂಗಳವಾರ ತಾಲೂಕು ಎಸ್.ಎಸ್.ಕೆ. ಸಮಾಜ ಆಯೋಜಿಸಿದ್ದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.

ಸಮಾಜದ ಪ್ರತಿಯೊಬ್ಬರೂ ಕಷ್ಟ ಜೀವಿಗಳಾಗಿದ್ದು, ಅವರ ಕಾಯಕ ಶ್ರದ್ಧೆ ಮಾದರಿಯಾಗಿದೆ. ಸಮಾಜ ಬಾಂಧವರು ಸಮುದಾಯದ ಸಹಭಾಗಿತ್ವದಲ್ಲಿ ತಮ್ಮ ಕುಲದೇವತೆಯ ಭವ್ಯ ಮಂದಿರ ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದರು.

ಸಮಾಜದ ಅಧ್ಯಕ್ಷ ದೀಪಕ್ ಕಠಾರೆ ಮಾತನಾಡಿ, ಕಳೆದ 17 ವರ್ಷಗಳಿಂದ ನನೆಗುದ್ದಿಗೆ ಬಿದ್ದಿದ್ದ ದೇಗುಲದ ಗೋಪುರ ನಿರ್ಮಾಣ ಮಾಡಿ ಕಳಸಾರೋಹಣ ನೆರವೇರಿಸಲಾಗಿದೆ. ಹರಿಹರ ತಪೋವನದ ಡಾ. ಶಶಿಕುಮಾರ್ ಮೆಹರವಾಡೆ ಮತ್ತು ಅಮರ್ ದಲಬಂಜನ್ ಸಮುದಾಯ ಭವನದ ನಿವೇಶನ ಖರೀದಿಗೆ ದೇಣಿಗೆ ನೀಡಿ ಸಹಕರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಸಮಾಜದ ಮಾಜಿ ಕಾರ್ಯದರ್ಶಿ ಲಕ್ಷ್ಮಿಕಾಂತ ಭಾವಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಮತ್ತು ದೇಣಿಗೆ ನೀಡಿ ಸಹಕರಿಸಿದವರನ್ನು ಗೌರವಿಸಲಾಯಿತು.


ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು, ಶಿವಲಿಂಗ ರುದ್ರಮುನಿ ಶ್ರೀಗಳು, ಶಾಖಾ ಗವಿ ಮಠದ ಮರಿ ಶಾಂತವೀರ ಶ್ರೀಗಳು, ಹಾಲ ಸಿದ್ದೇಶ್ವರ ಶ್ರೀಗಳು, ಹಿಮಾಚಲ ಪ್ರದೇಶದ ಪ್ರಕಾಶ ಸ್ವರೂಪ ಶ್ರೀಗಳು, ಬಾಲಯೋಗಿನಿ ಜಯಶ್ರೀ ಮಾತಾಜಿ, ತಾರಾಚಂದ ಮಹಾರಾಜ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಸಮಾಜದ ರಾಜ್ಯ ಘಟಕದ ಖಜಾಂಚಿ ಕೃಷ್ಣಮೂರ್ತಿ ರಂಗರೇಜ್, ಭಾಗ್ಯನಗರ ಸಮಾಜದ ಅಧ್ಯಕ್ಷ ಜವಾಹರಸಾ ಅಂಟಾಳಮರದ, ಬಳ್ಳಾರಿ ಸಮಾಜದ ಅಧ್ಯಕ್ಷ ಶ್ರೀನಿವಾಸ್ ಚಾವಡಿಮನಿ, ಮುಂಡರಗಿ ಸಮಾಜದ ಅಧ್ಯಕ್ಷ ಅಶೋಕಸಾ ಸಿದ್ಲಿಂಗ ಹಾಗೂ ತಾಲೂಕು ಘಟಕದ ಮಾಜಿ ಅಧ್ಯಕ್ಷ ರಂಗನಾಥಸಾ ಕಠಾರೆ, ಅಶೋಕ ಮೆಹರವಾಡೆ, ಉಪಾಧ್ಯಕ್ಷ ಪರಶುರಾಮಸಾ ಪವಾರ್, ಡಾ. ಜಯವಂತರಾವ್ ಕಾಶೀಗಾವ್, ಮಹಿಳಾ ಘಟಕದ ಅಧ್ಯಕ್ಷೆ ಸೋನಾಬಾಯಿ ಭಾವಿಕಟ್ಟಿ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಸಿ.ಎಚ್. ಸಿದ್ಧರಾಜು ಹಾಗೂ ಮತ್ತಿತರರಿದ್ದರು.

ಸಂಗೀತ ಶಿಕ್ಷಕಿ ಶಾರದಾ ಮಂಜುನಾಥ್ ಪ್ರಾರ್ಥಿಸಿದರು. ಸಮಾಜದ ರಾಮೂಸಾ ಕಾಟವಾ, ಬಾಳಕೃಷ್ಣಸಾ ದಲಬಂಜನ್, ರಾಕೇಶ್ ಭಾವಿಕಟ್ಟಿ, ಓಂಕಾರ್ ಭಾವಿಕಟ್ಟಿ, ಕೃಷ್ಣಾಸಾ ಬಾಕಳೆ ನಿರ್ವಹಿಸಿದರು.