ಪಂಚವರ್ಣದ ೨೫೬ನೇ ಪರಿಸರಸ್ನೇಹಿ ಅಭಿಯಾನ: ಕೊರಗ ಕಾಲೋನಿಯಲ್ಲಿ ಸ್ವಚ್ಛತೆ

| Published : May 27 2025, 01:25 AM IST

ಸಾರಾಂಶ

ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಹಂದಟ್ಟು ಮಹಿಳಾ ಬಳಗ ಕೋಟ, ಮಣೂರು ಫ್ರೆಂಡ್ಸ್, ಜೆಸಿಐ ಕೋಟ ಸೀನಿಯರ್ ಲಿಜನ್ ಸಹಯೋಗದೊಂದಿಗೆ ಕೋಟತಟ್ಟು ಗ್ರಾಮ ಪಂಚಾಯಿತಿ, ಬಾರಿಕೆರೆ ಯುವಕ ಮಂಡಲದ ಸಂಯೋಜನೆಯೊಂದಿಗೆ ೨೫೬ನೇ ಪರಿಸರಸ್ನೇಹಿ ಅಭಿಯಾನದ ಪ್ರಯುಕ್ತ ಕೋಟತಟ್ಟು ಕೊರಗ ಕಾಲೋನಿ ಸ್ವಚ್ಛತಾ ಕಾರ್ಯ ನಡೆಯಿತು.

ಕನ್ನಡಪ್ರಭ ವಾರ್ತೆ ಕೋಟ

ದೇಶವನ್ನೇ ಸ್ವಚ್ಛವಾಗಿಡಲು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಪರಿಕಲ್ಪನೆಯನ್ನು ಜಾರಿಗೆ ತಂದರು. ಅದರಂತೆ ಪ್ರತಿಯೊಬ್ಬರೂ ಸ್ವಚ್ಛತೆಯ ಬಗ್ಗೆ ಇನ್ನಷ್ಟು ಜಾಗೃತರಾಗಿ ಪ್ರಧಾನಮಂತ್ರಿ ಅವರ ಕನಸು ಸಾಕಾರಗೊಳಿಸೋಣ ಎಂದು ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ ಹೇಳಿದರು.

ಅವರು ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಹಂದಟ್ಟು ಮಹಿಳಾ ಬಳಗ ಕೋಟ, ಮಣೂರು ಫ್ರೆಂಡ್ಸ್, ಜೆಸಿಐ ಕೋಟ ಸೀನಿಯರ್ ಲಿಜನ್ ಸಹಯೋಗದೊಂದಿಗೆ ಕೋಟತಟ್ಟು ಗ್ರಾಮ ಪಂಚಾಯಿತಿ, ಬಾರಿಕೆರೆ ಯುವಕ ಮಂಡಲದ ಸಂಯೋಜನೆಯೊಂದಿಗೆ ೨೫೬ನೇ ಪರಿಸರಸ್ನೇಹಿ ಅಭಿಯಾನದ ಪ್ರಯುಕ್ತ ಕೋಟತಟ್ಟು ಕೊರಗ ಕಾಲೋನಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.ಪರಿಸರದ ಬಗ್ಗೆ ಪಂಚವರ್ಣ ಸಂಘಟನೆ ಸಾಕಷ್ಟು ಶ್ರಮಿಸುತ್ತಿದೆ. ಅದೇ ಮನೋಭಾವನೆ ಪ್ರತಿಯೊಂದು ಮನೆ ಮನದಲ್ಲಿ ಮೊಳಗಬೇಕು, ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ಎಸೆಯುವ ಬ್ಲ್ಯಾಕ್ ಸ್ಪಾಟ್ ಪ್ರದೇಶಗಳಲ್ಲಿ ಸಿಸಿ ಕ್ಯಾಮರ ಕಣ್ಗಾವಲು ಇರಿಸಲಾಗುವುದು ಎಂದರು.

ಕೋಟತಟ್ಟು ಪಂಚಾಯಿತಿ ಸದಸ್ಯರಾದ ಪ್ರಮೋದ್ ಹಂದೆ, ವಾಸು ಪೂಜಾರಿ, ಬಾರಿಕೆರೆ ಯುವಕ ಮಂಡಲ ಅಧ್ಯಕ್ಷ ರವಿ ಕುಂದರ್, ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಕೆ.ಮನೋಹರ್ ಪೂಜಾರಿ, ಉಪಾಧ್ಯಕ್ಷ ದಿನೇಶ್ ಆಚಾರ್, ಪಂಚವರ್ಣ ಮಹಿಳ ಮಂಡಲ ಉಪಾಧ್ಯಕ್ಷೆ ಪುಷ್ಪಾ ಕೆ. ಹಂದಟ್ಟು ಮತ್ತಿತರರು ಇದ್ದರು. ಪಂಚವರ್ಣದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.