ಸುಂಟಿಕೊಪ್ಪ: ಕೆದಕಲ್ ಗ್ರಾಮದ ಶ್ರೀ ಭದ್ರಕಾಳೇಶ್ವರಿ ದೇವಾಲಯದ 26ನೇ ವಾರ್ಷಿಕೋತ್ಸವ ಗುರುವಾರ ನಡೆಯಿತು.ದೇವಾಲಯದ ಪ್ರಧಾನ ಅರ್ಚಕ ಲಕ್ಷ್ಮಿನಾರಾಯಣ ಭಟ್ ನೇತೃತ್ವದಲ್ಲಿ ಗಣಪತಿ ಹೋಮದೊಂದಿಗೆ ಧಾರ್ಮಿಕ ವಿಧಿ ವಿಧಾನಗಳಿಗೆ ಚಾಲನೆ ದೊರೆಯಿತು.ನಂತರ ಕುಂಭಾಭಿಷೇಕ ಮತ್ತು ಕಳಶ ಪೂಜೆ, ಹೂವಿನ ಪೂಜೆ, ಕುಂಕುಮಾರ್ಚನೆ ನಡೆಯಿತು. ಇದಾದ ನಂತರ ನೆರೆದಿದ್ದ ಭಕ್ತರಿಗೆ ದೇವಿಯ ದರ್ಶನ ದೊರೆತು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹರಕೆ ಮಾಡಿಕೊಂಡರಲ್ಲದೆ ಹರಕೆಯನ್ನು ಒಪ್ಪಿಸಿದರು. ಮಧ್ಯಾಹ್ನ 12 ಗಂಟೆಗೆ ವಿಶೇಷ ಪೂಜೆ, ಆರಾಧನೆ, ಮಹಾಪೂಜೆ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.

ಭಕ್ತರಿಗೆ ದೇವಾಲ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯ ಸಮಿತಿ ಅಧ್ಯಕ್ಷ ಸಿ.ಎ. ಕರುಂಬಯ್ಯ, ಕಾರ್ಯದರ್ಶಿ ಕೆ.ಎಂ. ಸತೀಶ್, ತಕ್ಕ ಮುಖ್ಯಸ್ಥರಾದ ಪುಲ್ಲೇರ ತಿಮ್ಮಯ್ಯ, ಪುಲ್ಲೇರ, ಕಾಳಪ್ಪ, ಪಿ.ಬಿ. ವಸಂತ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.ಕೆದಕಲ್, ಬೋಯಿಕೇರಿ, ಹಾಲೇರಿ, ಕಾಂಡನಕೊಲ್ಲಿ, ಸುಂಟಿಕೊಪ್ಪ, ಬಾಳೆಕಾಡು, ಮಡಿಕೇರಿ, ಹೊರೂರು ಸೇರಿದಂತೆ ಹೊರ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು.