ರೋಣ: ಗ್ರಾಮೀಣ ಭಾಗದ ಶೈಕ್ಷಣಿಕ ಗುಣಮಟ್ಟ ಸುಧಾರಿಸಬೇಕು, ಕಲಿಕೆಗೆ ಪೂರಕ ವಾತಾವರಣ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜಿಗಳೂರ ಶಾಲೆಗೆ ಹೆಚ್ಚುವರಿಯಾಗಿ 3 ಕೊಠಡಿಗಳ ನಿರ್ಮಿಸಲು ಆದ್ಯತೆ ನೀಡುವಲ್ಲಿ ಶೀಘ್ರ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು. ಅವರು ತಾಲೂಕಿನ ಜಿಗಳೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಬಳಿಕ ಜರುಗಿದ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪ್ರಸಕ್ತ ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿಯನ್ನು ನೀಡಬೇಕಾದರೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಪಡೆಯಲು ಬೇಕಾಗಿರುವ ಸೌಲಭ್ಯಗಳನ್ನು ಮತ್ತು ಕಲಿಕೆಯ ವಾತಾವರಣವನ್ನು ಉನ್ನತೀಕರಿಸಬೇಕು. ಗ್ರಾಮೀಣ ವಿದ್ಯಾರ್ಥಿಗಳು ಸಾಮಾಜಿಕ, ನೈತಿಕ ಮಟ್ಟದಲ್ಲಿ ಹೆಚ್ಚು ಪ್ರಬುದ್ಧರಾಗಿದ್ದಾರೆ. ಬುದ್ಧಿಯಲ್ಲಿ ಪಟ್ಟಣದ ವಿದ್ಯಾರ್ಥಿಗಳಿಗಿಂತಲೂ ಮುಂದಿರುತ್ತಾರೆ. ಆದ್ದರಿಂದ ಗ್ರಾಮೀಣ ಭಾಗದ ಶೈಕ್ಷಣಿಕ ವ್ಯವಸ್ಥೆ ಉತ್ತಮವಾಗಲು ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಶ್ರಮಿಸಲಿದೆ. ಈ ನಿಟ್ಟಿನಲ್ಲಿ ನನ್ನ ಮತಕ್ಷೇತ್ರ ಗ್ರಾಮೀಣ ಭಾಗದ ಪ್ರತಿಯೊಂದು ಶಾಲೆಗಳಿಗೂ ಅಗತ್ಯವಿರುವ ಸೌಕರ್ಯ, ಕೊಠಡಿ, ಗ್ರಂಥಾಲಯ, ಆಟದ ಮೈದಾನ ಮುಂತಾದ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಅದರಂತೆ ಜಿಗಳೂರ ಶಾಲೆಗೆ ಇನ್ನೂ 3 ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಶೀಘ್ರದಲ್ಲಿಯೇ ಅನುದಾನ ಬಿಡುಗಡೆ ಕ್ರಮ ಕೈಗೊಳ್ಳಲಾಗುವದು ಎಂದರು.ವಿದ್ಯಾರ್ಥಿಗಳೊಂದಿಗೆ ಶಾಸಕ ಸಂವಾದ: ಶಾಸಕ ಜಿ.ಎಸ್. ಪಾಟೀಲ ಅವರು ವರ್ಗ ಕೋಣೆಗಳಿಗೆ ಭೇಟಿ ನೀಡಿ ಕೆಲ ಕಾಲ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳಲ್ಲಿ ಜಾಣ್ಮೆ, ಚುರುಕುತನ, ವಿಷಯ ಪ್ರಬುದ್ಧತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗದಿಂದ ಸನ್ಮಾನ ಜರುಗಿತು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಶರಣಪ್ಪ ಬಸೆವಡೆಯರ, ಉಪಾಧ್ಯಕ್ಷೆ ಗೀತಾ ಮಾದರ, ಮುಖ್ಯೋಪಾಧ್ಯಾಯ ಆರ್.ಎ. ಹಿರೇಮಠ, ನೀಲಪ್ಪಗೌಡ ಧರಣೆಪ್ಪಗೌಡ್ರ, ದುರ್ಗಪ್ಪ ಮಾದರ, ಯಲ್ಲಪ್ಪ ಹಾಳಕೇರಿ, ಮಲ್ಲಿಕಾರ್ಜುನಗೌಡ ದಾನಪ್ಪಗೌಡ್ರ, ರೇಷ್ಮಾ ತಹಸೀಲ್ದಾರ್, ಬಸವ್ವ ನಾಗರಾಳ, ಬಿ.ವ್ಹಿ. ಮಲ್ಲಾಪೂರ,ಎ.ಎಸ್. ಕೊಂಚಗೇರಿ, ಎಸ್.ಎಸ್. ಹುನಗುಂಡಿ, ಎನ್.ಎಂ. ರಾಮದುರ್ಗ, ದೇವಕಿ ಧರ್ಮಟ್ಟಿ, ವ್ಹಿ.ಎಸ್. ಹಿರೇಮಠ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಆರ್.ಎ. ಹಿರೇಮಠ ಸ್ವಾಗತಿಸಿ, ವಂದಿಸಿದರು.
ಜಿಗಳೂರ ಶಾಲೆಗೆ 3 ಹೆಚ್ಚುವರಿ ಕೊಠಡಿ ಮಂಜೂರು: ಶಾಸಕ ಜಿ.ಎಸ್. ಪಾಟೀಲ
ಗ್ರಾಮೀಣ ಭಾಗದ ಶೈಕ್ಷಣಿಕ ಗುಣಮಟ್ಟ ಸುಧಾರಿಸಬೇಕು, ಕಲಿಕೆಗೆ ಪೂರಕ ವಾತಾವರಣ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಅನುಕೂಲಕಕ್ಕಾಗಿ ಜಿಗಳೂರ ಶಾಲೆಗೆ ಹೆಚ್ಚುವರಿಯಾಗಿ 3 ಕೊಠಡಿಗಳ ನಿರ್ಮಿಸಲು ಆದ್ಯತೆ ನೀಡುವಲ್ಲಿ ಶೀಘ್ರ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.