ಮಹದೇಶ್ವರ ಬೆಟ್ಟದಲ್ಲಿ 3 ಬೈಕ್‌ಗಳು ಭಸ್ಮ

| Published : Jun 23 2025, 11:53 PM IST

ಸಾರಾಂಶ

ಮಹದೇಶ್ವರ ಬೆಟ್ಟದಲ್ಲಿ ಭಕ್ತಾದಿಗಳ 3 ಮೋಟಾರ್ ಬೈಕ್‌ಗಳು ಬೆಂಕಿಗೆ ಹೊತ್ತಿ ಉರಿದು ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ.

ಕನ್ನಡಪ್ರಭ ವಾರ್ತೆ ಹನೂರು

ಮಹದೇಶ್ವರ ಬೆಟ್ಟದಲ್ಲಿ ಭಕ್ತಾದಿಗಳ 3 ಮೋಟಾರ್ ಬೈಕ್‌ಗಳು ಬೆಂಕಿಗೆ ಹೊತ್ತಿ ಉರಿದು ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ.

ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆಮಹದೆಶ್ವರ ಸ್ವಾಮಿ ದೇವಾಲಯಕ್ಕೆ ರಾಜ್ಯವಲ್ಲದೆ ನೆರೆ ರಾಜ್ಯಗಳಿಂದಲೂ ಸಹ ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಅಲ್ಲದೆ ಯಾವುದೇ ರೀತಿಯಾದ ಭಯ ಆತಂಕವಿಲ್ಲದೆ ಎಲ್ಲೆಂದರಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ದೇವರ ದರ್ಶನವನ್ನು ಪಡೆದು ರಾತ್ರಿ ವೇಳೆಯಲ್ಲಿ ಕೊಠಡಿಗಳು ಖಾಲಿ ಇಲ್ಲದಿದ್ದರೆ ಯಾವುದೇ ರೀತಿಯಾದ ಆತಂಕವಿಲ್ಲದೆ ಸಂಕಮ್ಮ ನಿಲಯ ಡಾರ್ಮೆಂಟರಿ ಬಸ್ ನಿಲ್ದಾಣ ಇನ್ನಿತರ ಸ್ಥಳಗಳಲ್ಲಿ ವಾಸ್ತವ್ಯ ಹೂಡಿ ತಮ್ಮ ಗ್ರಾಮಗಳಿಗೆ ತೆರಳುತಿದ್ದರು.

ಅದೇ ರೀತಿ ನಂಜನಗೂಡು ತಾಲೂಕಿನ ಸರಗೂರು ಗ್ರಾಮದ ಆದರ್ಶ ಎಂಬುವರು ಭಾನುವಾರ ತಮ್ಮ ಹೊಸ ಬೈಕ್ ಬಜಾಜ್ ಪಲ್ಸರ್ ಎನ್ಎಸ್ 125 ಹೊಸದಾಗಿ ಖರೀದಿ ಮಾಡಿದ್ದು, ಅವರ ಸ್ನೇಹಿತ ಅಭಿಷೇಕ್ ಜೊತೆ ಮಾದಪ್ಪನ ಬೆಟ್ಟಕ್ಕೆ ಬಂದಿದ್ದು, ಸೋಮವಾರ ರಾತ್ರಿ ಮಾದಪ್ಪನ ದರ್ಶನ ಪಡೆದು ರಾತ್ರಿ ಪ್ರಾಧಿಕಾರದ ಕಾರಯ್ಯ ಬಿಲ್ಲಯ್ಯ ವಸತಿ ಗೃಹದ ಮುಂಬಾಗ ಬೈಕನ್ನು ನಿಲ್ಲಿಸಿ ವಸತಿ ಗೃಹದಲ್ಲಿ ಮಲಗಿದ್ದ ಸಂದರ್ಭ ಮಧ್ಯ ರಾತ್ರಿ 2 ಗಂಟೆಯ ಸುಮಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಅಕ್ಕ ಪಕ್ಕದಲ್ಲಿದ್ದ ಸ್ಪೆಂಡರ್ ಪ್ಲೆಸ್, ತಮಿಳುನಾಡಿಗೆ ಸೇರಿದ ಹೋಂಡ ಶೈನ್ ಮೂರು ಬೈಕ್‌ಗಳು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು ಮತ್ತೊಂದು ಹಿರೋ ಪ್ಲಸ್ ಬೈಕ್‌ನ ಅರ್ಧಭಾಗ ಸುಟ್ಟು ಹೋಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೋಲೀಸ್ ಇನ್ಸ್‌ಪೆಕ್ಟರ್ ಜಗದೀಶ್ ನೇತೃತ್ವದ ತಂಡ ಸ್ಥಳ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.