ಸರ್ಕಾರಿ ಕಾಲೇಜು ನಿರ್ಮಾಣಕ್ಕೆ 3 ಕೋಟಿ ಅನುದಾನ

| Published : Jun 07 2025, 02:07 AM IST

ಸಾರಾಂಶ

ನಿಪ್ಪಾಣಿ ನಗರಸಭೆ ವತಿಯಿಂದ ಬಸವೇಶ್ವರ ಪೊಲೀಸ್ ಠಾಣೆ ಎದುರಿಗೆ 2 ಎಕರೆ ಜಾಗವನ್ನು ಕಾಲೇಜಿಗೆ ನೀಡಿದ್ದು, ಅಲ್ಲಿ ಹೈಟೆಕ್ ಕಾಲೇಜು ನಿರ್ಮಿಸಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಮಾಡಿಕೊಡಲಾಗುವುದು.

ಕನ್ನಡಪ್ರಭ ವಾರ್ತೆ ನಿಪ್ಪಾಣಿ

ನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡಕ್ಕೆ ₹3 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಲಾಗುವುದು ಎಂದು ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಈ ಸರ್ಕಾರಿ ಕಾಲೇಜು ಹೆಚ್ಚುವರಿ ತರಗತಿ ಕೊಠಡಿ, ಪ್ರಯೋಗಾಲಯ, ಮೂಲಸೌಕರ್ಯ ಹಾಗೂ ಹೈ ಟೆಕ್ ಕಟ್ಟಡದೊಂದಿಗೆ ನಿರ್ಮಾಣ ಮಾಡಲಾಗುವುದು. ನಿಪ್ಪಾಣಿ ನಗರಸಭೆ ವತಿಯಿಂದ ಬಸವೇಶ್ವರ ಪೊಲೀಸ್ ಠಾಣೆ ಎದುರಿಗೆ 2 ಎಕರೆ ಜಾಗವನ್ನು ಕಾಲೇಜಿಗೆ ನೀಡಿದ್ದು, ಅಲ್ಲಿ ಹೈಟೆಕ್ ಕಾಲೇಜು ನಿರ್ಮಿಸಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಮಾಡಿಕೊಡಲಾಗುವುದು. 2020-21ನೇ ಸಾಲಿನಲ್ಲಿ ತಾವು ಸಚಿವೆಯಾದ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವರಾದ ಅಶ್ವತ ನಾರಾಯಣ ಅವರಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಿಪ್ಪಾಣಿಗೆ ಮಂಜೂರು ಮಾಡುವಂತೆ ಮನವಿ ನೀಡಲಾಗಿತ್ತು. ತಮ್ಮ ಮನವಿಗೆ ಸ್ಪಂದಿಸಿ ಆಗಿನ ಬಿಜೆಪಿ ಸರ್ಕಾರದ ಅವಧಿ 2020-21ನೇ ಸಾಲಿನಲ್ಲಿ ಮಂಜೂರು ನೀಡಲಾಗಿತ್ತು. ಆದರೆ ಸ್ವಂತ ಕಟ್ಟಡವಿಲ್ಲದ ಕಾರಣ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ತರಗತಿ ಪ್ರಾರಂಭ ಮಾಡಲಾಗಿತ್ತು. ಈಗಿನ ಕಾಂಗ್ರೆಸ್ ಸರಕಾರದಲ್ಲಿ ಹಲವು ಬಾರಿ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿ, ಅಧಿವೇಶನದಲ್ಲಿ ಸಚಿವರ ಗಮನ ಸೆಳೆದು ಧ್ವನಿ ಎತ್ತಿ, ತಮ್ಮ ಶತ ಪ್ರಯತ್ನದ ಫಲವಾಗಿ ₹3 ಕೋಟಿ ಅನುದಾನ ಮಂಜೂರು ಮಾಡಿಸಲಾಗಿದೆ. ನಿಪ್ಪಾಣಿಯಲ್ಲಿ ಇಲ್ಲಿಯವರೆಗೆ ಸರ್ಕಾರಿ ಪದವಿ ಕಾಲೇಜು ಇರಲಿಲ್ಲ. ಆದರೆ ಪದವಿ ಕಾಲೇಜು ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಿ, ಈಗ ಅನುದಾನ ಬಿಡುಗಡೆಯಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.