ಆದಿಚುಂಚನಗಿರಿ ಶಾಖಾ ಮಠದಲ್ಲಿ 3 ದಿನ ಧಾರ್ಮಿಕ ಪೂಜಾ ಕೈಂಕರ್ಯ

| Published : Feb 27 2024, 01:31 AM IST

ಆದಿಚುಂಚನಗಿರಿ ಶಾಖಾ ಮಠದಲ್ಲಿ 3 ದಿನ ಧಾರ್ಮಿಕ ಪೂಜಾ ಕೈಂಕರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಹಾಲ್ತಿ ಗ್ರಾಮದ ಸ್ವರ್ಗಾಶ್ರಮದಲ್ಲಿರುವ ಆದಿಚುಂಚನಗಿರಿ ಶಾಖಾ ಮಠದಲ್ಲಿ ಮಾ.5ರಿಂದ 7ರ ವರೆಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿವೆ ಎಂದು ಆದಿಚುಂಚನಗರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಹಾಲ್ತಿ ಗ್ರಾಮದ ಸ್ವರ್ಗಾಶ್ರಮದಲ್ಲಿರುವ ಆದಿಚುಂಚನಗಿರಿ ಶಾಖಾ ಮಠದಲ್ಲಿ ಮಾ.5ರಿಂದ 7ರ ವರೆಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿವೆ ಎಂದು ಆದಿಚುಂಚನಗರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಹಾಲ್ತಿ ಸ್ವರ್ಗಾಶ್ರಮ ಶಾಖಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಅನುಗ್ರಹ ಮತ್ತು ಅಮರಾನಂದ ಪರಮಹಂಸ ಸ್ವಾಮೀಜಿ ಅವರ ಆಶೀರ್ವಾದೊಂದಿಗೆ ಹಾಲ್ತಿ ಶಾಖಾ ಮಠದಲ್ಲಿ ನಿರ್ಮಾಣಗೊಂಡಿರುವ ಕ್ಷೇತ್ರಾಧಿದೇವತೆಗಳ ನೂತನ ದೇವಸ್ಥಾನ ಉದ್ಘಾಟನೆ ಹಾಗೂ ಅನ್ನಪೂರ್ಣೇಶ್ವರಿ ಭವನ ಮತ್ತು ಸಮುದಾಯ ಭವನದ ಲೋಕಾರ್ಪಣೆ ಮೂರು ದಿನ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಹಾಲ್ತಿ ಗ್ರಾಮದಲ್ಲಿ ಭ್ರಮರಾಂಭ ಸಹಿತ ಶ್ರೀ ಮಲ್ಲಿಕಾರ್ಜುನಸ್ವಾಮಿ, ಮಹಾಗಣಪತಿ, ಸುಬ್ರಹ್ಮಣ್ಯ ಮತ್ತು ಬಾಲಭೈರವೇಶ್ವರಸ್ವಾಮಿ ಧ್ಜಜಸ್ಥಂಭ ಹಾಗೂ ಪರಿವಾರ ದೇವತೆಗಳ ಪ್ರತಿಷ್ಠಾಪನೆ, ನೂತನ ದೇವಾಲಯದ ವಿಮಾನಗೋಪುರದ ಮಹಾಕುಂಬಾಭಿಷೇಕ, ಭವನಗಳ ಲೋಕಾರ್ಪಣೆ ಕಾರ್ಯ ನಡೆಯಲಿದೆ.

ಶ್ರೀ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ ಸಾನಿಧ್ಯದಲ್ಲಿ 3 ದಿನಗಳ ಕಾಲ ನಡೆಯುವ ಹೋಮ ಹವನಾದಿ ಸೇರಿದಂತೆ ಧಾರ್ಮಿಕ ಪೂಜಾ ವಿಧಿ ವಿಧಾನಗಳಿಗೆ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ಚಾಲನೆ ನೀಡುವರು ಎಂದರು.

ಆದಿಚುಂಚನಗಿರಿ ಕೆಂಗೇರಿ ಶಾಖಾ ಮಠದ ಪ್ರಕಾಶನಾಥಸ್ವಾಮೀಜಿ, ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಬೆಂಗಳೂರು ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಕೆ.ಆರ್.ನಗರ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ, ಮುಧೋಳ ತಾಲೂಕಿನ ಶಿರೋಳ ರಾಮಾರೂಢ ಮಠದ ಶಂಕರಾರೂಢಸ್ವಾಮೀಜಿ, ರಾಮನಗರದ ಅರ್ಚಕರಹಳ್ಳಿ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ಸೇರಿದಂತೆ ವಿವಿಧ ಶಾಖಾಮಠದ ಶ್ರೀಗಳು ಪಾಲ್ಗೊಳ್ಳುವರು ಎಂದರು.

ಮಾ.5ರಂದು ವೇದ ಪಾರಾಯಣ, ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ ಮಹಾ ಸಂಕಲ್ಪ ಹಾಲ್ತಿ ಬೆಟ್ಟದ ಮೂಲ ದೇವತೆ ಮಲ್ಲಿಕಾರ್ಜುನಸ್ವಾಮಿ ಅವರ ಅನುಜ್ಞಾ ಪೂರ್ವಕ ವಿವಿಧ ಅಭಿಷೇಕಗಳು, ಕಲಶಸ್ಥಾಪನೆ, ವೇದಿಕಾರ್ಚಮೆ, ಗಣಪತಿ, ನವಗ್ರಹ ಹೋಮ, ಅಸ್ತ್ರ ಹೋಮ, ಧ್ರವ್ಯಾಹುತಿ, ಪೂರ್ಣಾಹುತಿ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಅಂದು ಸಂಜೆ ಗೋಧೂಳಿ ಲಗ್ನದಲ್ಲಿ ಗ್ರಾಮ ಪ್ರದಕ್ಷಿಣೆ, ಗಂಗೆ ಪೂಜೆ ಅನುಜ್ಞೆ ಪೂಜೆ ವಾಸ್ತು ಪರ್‍ಯನ್ನಿಕರಣ ಪೂಜೆಗಳು ನಡೆಯಲಿವೆ ಎಂದರು.

ಮಾ.6ರ ಬೆಳಗ್ಗೆ ಮಹಾಲಕ್ಷ್ಮಿ ಕಳಶ ಸ್ಥಾಪನೆ, ಅಗ್ನಿಕಾರ್ಯ, ನೂತನ ವಿಗ್ರಹಗಳಿಗೆ ಜಲಾಧಿವಾಸ, ಕ್ಷೀರಾಧಿವಾಸ, ಪೂರ್ಣಾಹುತಿ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಅಂದು ಸಂಜೆ ಮಹಾಸಂಕಲ್ಪ ಅಂಕುರಾರ್ಪಣ ರಕ್ಷಾಬಂಧನ, ಅಗ್ನಿ ಕಾರ್‍ಯ ಹೋಮ ಪೂರ್ಣಾಹುತಿ ಸೇರಿದಂತೆ ದೇವತೆಗಳ ನೂತನ ವಿಗ್ರಹಗಳಿಗೆ ಮಂತ್ರ ಪುಷ್ಪ ಅಷ್ಟಾವಧಾನ ಸೇವೆ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗದ ಜೊತೆಗೆ ವಿಮಾನಗೋಪುರ ಕಲಶ ಸ್ಥಾಪನೆ ಮತ್ತು ಪೀಠಪೂಜೆ ನವರತ್ನ ಸಹಿತ ಯಂತ್ರ ಸ್ಥಾಪನೆ, ಅಷ್ಟಬಂಧನ ಸಮರ್ಪಣೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿರು.

ಮಾ.7ರ ಬೆಳಗ್ಗೆ ವಿವಿಧ ಬಗೆಯ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆದ ನಂತರ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯುವ ಧರ್ಮಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಉದ್ಘಾಟಿಸುವರು. ವಿ.ಪ ಸದಸ್ಯ ಮಧು ಜಿ,ಮಾದೇಗೌಡ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಸಿ.ಟಿ.ರವಿ, ಸಾ.ರಾ.ಮಹೇಶ್, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮತ್ತು ಮಾಜಿ ಶಾಸಕ ಸುರೇಶ್‌ಗೌಡ ಅತಿಥಿಗಳಾಗಿ ಪಾಲ್ಗೊಳ್ಳುವರು. ಸುದ್ದಿಗೋಷ್ಠಿಯಲ್ಲಿ ಆದಿಚುಂಚನಗಿರಿಯ ಮೈಸೂರು ಶಾಖಾ ಮಠ ಹಾಗೂ ಸ್ವರ್ಗಾಶ್ರಮ ಹಾಲ್ತಿ ಶಾಖಾ ಮಠದ ಕಾರ್ಯದರ್ಶಿ ಸೋಮೇಶ್ವರನಾಥಸ್ವಾಮೀಜಿ, ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಎಚ್.ಟಿ. ಕೃಷ್ಣೇಗೌಡ ಇದ್ದರು.