ಸಾರಾಂಶ
ಮೈಸೂರು : ದೇಶದಲ್ಲಿ ಸ್ಟ್ರೋಕ್ ಮತ್ತು ಹೃದಯಾಘಾತ ನಂಬರ್ ಒನ್ ಕಾಯಿಲೆಯಾಗಿದ್ದು, 30 ಲಕ್ಷ ಜನರು ಪ್ರತಿವರ್ಷ ಹೃದಯಾಘಾತ ಮತ್ತು ಬ್ರೈನ್ ಸ್ಟ್ರೋಕ್ ಗೆ ತುತ್ತಾಗುತ್ತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ, ಪದ್ಮಶ್ರೀ ಡಾ.ಸಿ.ಎನ್. ಮಂಜುನಾಥ್ ವಿಷಾದ ವ್ಯಕ್ತಪಡಿಸಿದರು.
ನಗರದ ಗೋಕುಲಂನಲ್ಲಿ ಡಾ. ಶುಶ್ರೂತ್ ಗೌಡ ಪ್ರಾರಂಭಿಸಿರುವ ಎಸ್.ಎಂ.ಕೃಷ್ಣ ಮೆಮೋರಿಯಲ್ ನ್ಯೂರೋ ಝೋನ್ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಶುಶ್ರೂತ್ ಗೌಡ ಅವರು ಅಮೇರಿಕಾದಿಂದ ತಾಯ್ನಾಡಿಗೆ ಬಂದು ಎಸ್.ಎಂ. ಕೃಷ್ಣ ಅವರ ಹೆಸರಿನಲ್ಲಿ ನ್ಯೂರೋ ಝೋನ್ ತೆರೆದು ಸೇವೆ ಸಲ್ಲಿಸುತ್ತಿದ್ದಾರೆ. ಈ ರೀತಿ ಸೆಟ್ ಲೈಟ್ ಸೆಂಟರ್ ಬಹಳ ಅವಶ್ಯಕತೆ ಇದೆ. ಎಸ್.ಎಂ. ಕೃಷ್ಣ ಒಬ್ಬ ಆದರ್ಶ ರಾಜಕಾರಣಿಯಾಗಿದ್ದರು. ಈ ನ್ಯೂರೋ ಸೆಂಟರ್ಗೆ ಎಸ್.ಎಂ. ಕೃಷ್ಣ ಹೆಸರಿಟ್ಟಿರುವುದು ವಿಶೇಷವಾಗಿದೆ. ದೇಶದಲ್ಲಿ ಬದಲಾದ ಜನರ ಜೀವನಶೈಲಿಯಿಂದ 15 ಕೋಟಿ ಜನರಿಗೆ ಸಕ್ಕರೆ ಕಾಯಿಲೆ ಇದೆ. 25 ಕೋಟಿ ಜನರಿಗೆ ಬಿ.ಪಿ. ಇದೆ. ಹೃದಯಾಘಾತಕ್ಕೆ ಇರುವ ಕಾರಣಗಳೇ ಬ್ರೈನ್ ಸ್ಟ್ರೋಕ್ ಗೂ ಇದ್ದು, ಹೃದಯಾಘಾತ ಮತ್ತು ಬ್ರೈನ್ ಸ್ಟ್ರೋಕ್ ಆದ 3 ಗಂಟೆ ಒಳಗೆ ಚಿಕಿತ್ಸೆ ನೀಡಿದರೆ ರೋಗಿಯನ್ನು ಬದುಕಿಸಬಹುದು ಎಂದರು.
ಜನರಿಗೆ ಒತ್ತಡ ಹೆಚ್ಚಾಗಿದೆ. ತಾಳ್ಮೆ ಇಲ್ಲ:
ಇಂದು ಜನರಿಗೆ ಒತ್ತಡ ಹೆಚ್ಚಾಗಿದೆ. ತಾಳ್ಮೆ ಇಲ್ಲ, ಎಲ್ಲವೂ ಬೇಗ ಬೇಗ ಆಗಬೇಕು ಎಂಬ ದುರಾಸೆಯಿಂದ ಸಂತೋಷವೇ ಇಲ್ಲವಾಗಿದೆ. ಇಂದು ಅತಿ ಬುದ್ಧಿವಂತರಿಗೆ ಚಿಕಿತ್ಸೆ ಕೊಡುವುದು ಕಷ್ಟವಾಗಿದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕಾಗಿದೆ. ಔಷಧವಲ್ಲದ ಔಷಧಿಗಳಾದ ಬಿಸಿಲು, ನಿದ್ರೆ, ವ್ಯಾಯಾಮ, ಉತ್ತಮ ಗೆಳೆಯರ ಜೊತೆ ಬೆರೆಯುವುದು, ಯೋಗ, ಮೆಡಿಟೇಷನ್, ಸಂತೃಪ್ತಿಕ, ನಗು, ಒಂದು ವಿಶ್ವಭಾಷೆ. ಆಭರಣ ನಗುವನ್ನು ಅಳವಡಿಸಿಕೊಳ್ಳಿರಿ. 35 ವರ್ಷ ದಾಟಿದ ಪುರುಷರು, 45 ವರ್ಷ ದಾಟಿದ ಮಹಿಳೆಯರು ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿರಿ. ಡಾ. ಶುಶ್ರೂತ್ ಆಸ್ಪತ್ರೆ ಇಡೀ ಕರ್ನಾಟಕದಲ್ಲೇ ಅತ್ಯುತ್ತಮ ನ್ಯೂರೋ ಸೆಂಟರ್ ಆಗಲಿ ಎಂದರು.
ಜನರ ಸೇವೆ ನಿಮ್ಮ ಮನಸ್ಸಿನಲ್ಲಿ ಸದಾ ಇರಲಿ:
ಪಬ್ಲಿಕ್ ಟಿ.ವಿ. ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಮಾತನಾಡಿ, ಎಸ್.ಎಂ. ಕೃಷ್ಣ ಅವರು ನನಗೆ ಪ್ರೀತಿಪಾತ್ರವಾದ ವ್ಯಕ್ತಿ. ಅವರ ಹೆಸರನ್ನು ಇಟ್ಟಿರುವುದು ಉತ್ತಮವಾಗಿದೆ. ದೇಶದಲ್ಲಿ ನ್ಯೂರೋ ಮತ್ತು ಕ್ಯಾನ್ಸರ್ ಜನರನ್ನು ಕಾಡುತ್ತಿದೆ. ಜನರ ಸೇವೆ ನಿಮ್ಮ ಮನಸ್ಸಿನಲ್ಲಿ ಸದಾ ಇರಲಿ. ಈ ಕೇಂದ್ರ ತುಂಬಾ ಚೆನ್ನಾಗಿ ನಡೆಯಲಿ. ಇದು ಸಕ್ಸಸ್ ಆಗುವುದು ಗ್ಯಾರಂಟಿ ಎಂದರು.
ಪ್ರೇಮಾ ಕೃಷ್ಣ, ಶಾಸಕ ಜಿ.ಟಿ. ದೇವೇಗೌಡ, ಡಾ. ಶುಶ್ರೂತ್ ಗೌಡ, ಧನ್ಯಶುಶ್ರೂತ್, ಎಂಡಿಎ ಮಾಜಿ ಅಧ್ಯಕ್ಷ ಕೆ. ಮರೀಗೌಡ, ಮಾಜಿ ಸಂಸದ ಶಿವಣ್ಣ, ಮಾರುತಿರಾವ್ ಪವಾರ್, ಮಾರ್ಬಳ್ಳಿ ಕುಮಾರ್, ಮಾಜಿ ಮೇಯರ್ ಪುಷ್ಪಲತಾ ಚಿಕ್ಕಣ್ಣ, ನಗರಪಾಲಿಕೆ ಮಾಜಿ ಸದಸ್ಯರಾದ ಪ್ರಶಾಂತ್ ಗೌಡ, ಜಗದೀಶ್, ವಿಕ್ರಾಂತ್ ದೇವೇಗೌಡ, ಚೈನಳ್ಳಿ ಸತ್ಯನಾರಾಯಣಗೌಡ ಇದ್ದರು.