ಪಟ್ಟಣದಲ್ಲಿನ ಪ್ರಮುಖ ರಸ್ತೆಗಳಲ್ಲಿ ಅಲಂಕಾರಿಕ ಬೀದಿ ದೀಪ ಅಳವಡಿಸಲು ರಾಜ್ಯ ಸರ್ಕಾರವು ನಗರಾಭಿವೃದಿ ಇಲಾಖೆಯಿಂದ ₹337ಲಕ್ಷ ಅನುದಾನ ಬಿಡುಗಡೆ ಮಾಡಿದೆ.

ಕನ್ನಡಪ್ರಭ ವಾರ್ತೆ ಹಳಿಯಾಳ

ಪಟ್ಟಣದಲ್ಲಿನ ಪ್ರಮುಖ ರಸ್ತೆಗಳಲ್ಲಿ ಅಲಂಕಾರಿಕ ಬೀದಿ ದೀಪ ಅಳವಡಿಸಲು ರಾಜ್ಯ ಸರ್ಕಾರವು ನಗರಾಭಿವೃದಿ ಇಲಾಖೆಯಿಂದ ₹337ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಟೆಂಡರ್ ಕರೆಯಲಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಶನಿವಾರ ಪಟ್ಟಣದ ತಮ್ಮ ಗೃಹಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಜೂರಾದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಎಂಜಿನಿಯರಿಂಗ್ ಕಾಲೇಜಿನಿಂದ-ಧಾರವಾಡ ರಸ್ತೆಯ ಸಮಾವೇಶ ಕೇಂದ್ರದವರೆಗೆ, ವಿ.ಆರ್. ದೇಶಪಾಂಡೆ ಮುಖ್ಯ ರಸ್ತೆ, ಬಸವೇಶ್ವರ ವೃತದಿಂದ ಚೆನ್ನಮ್ಮಾ ವೃತ ಮೂಲಕ ಆನೆಗುಂದಿ ಬಡಾವಣೆ ಕ್ರಾಸ್‌ವರೆಗೆ ಹಾಗೂ ಚೆನ್ನಮ್ಮ ವೃತದಿಂದ ಬಸ್ ಸ್ಟ್ಯಾಂಡ್ ರಸ್ತೆಯವರೆಗೆ ಅಲಂಕಾರಿ ಬೀದಿ ದೀಪಗಳನ್ನು ಅಳವಡಿಸಲಾಗುವುದು ಎಂದರು.ಖೇಲೋ ಇಂಡಿಯಾ:ಪಟ್ಟಣದಲ್ಲಿ ಖೇಲೋ ಇಂಡಿಯಾ ಯೋಜನಯಡಿಯಲ್ಲಿ ನಿರ್ಮಿಸಲ್ಪಡುತ್ತಿರುವ ಒಳಾಂಗಣ ಕ್ರೀಡಾಂಗಣದ ಬಾಕಿಯಿರುವ ಕಾಮಗಾರಿ ಪೂರ್ಣಗೊಳಿಸಲು ಹಾಗೂ ಮೂಲಭೂತ ಸೌಲಭ್ಯ ಅಳವಡಿಸಲು ರಾಜ್ಯ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ₹248ಲಕ್ಷ ಹೆಚ್ಚುವರಿ ಅನುದಾನ ಮಂಜೂರಾಗಿದೆ. ಈ ಒಳಾಂಗಣ ಕ್ರೀಡಾಂಗಣದ ನಿರ್ಮಾಣಕ್ಕೆ ಆರಂಭದಲ್ಲಿ ಕೇಂದ್ರ ಸರ್ಕಾರವು ₹750 ಲಕ್ಷ ಬಿಡುಗಡೆ ಮಾಡಿತ್ತು ಎಂದರು. ಉರ್ದು ಶಾಲೆಗೆ ಜಮೀನು: ಪಟ್ಟಣದ ಅರ್ಬನ್‌ ಬ್ಯಾಂಕ್ ಬಳಿಯಿರುವ ಉರ್ದು ಬಾಲಕಿಯರ ಶಾಲೆಗೆ ಅಗತ್ಯವಾದ ಮೂಲಭೂತ ಸೌಲಭ್ಯ ನೀಡಲು ಗುತ್ತಿಗೆರೆಯ ಬಳಿ 15ಗುಂಟೆ ಜಮೀನನ್ನು ಲೀಜ್ ಮೇಲೆ ಪಡೆಯಲು ಸರ್ಕಾರ ಮಂಜೂರಾತಿ ನೀಡಿದೆ. ಅದಕ್ಕಾಗಿ ಲೀಜ್ ಹಣ ನೀಡಲು ₹43.50ಲಕ್ಷ ಅನುದಾನ ಮಂಜೂರು ಮಾಡಿದೆ. ಈ ಮೂಲಕ ಶಾಲೆಯ ಅಭಿವೃದ್ಧಿಯ ಹಾಗೂ ನಿರ್ವಹಣೆಗೆ ಅನುಕೂಲಕರವಾಗಲಿದೆ ಎಂದರು.ಪೈಲ್ವಾನರಿಗೆ ಪಿಂಚಣಿ:ಮಾಜಿ ಕುಸ್ತಿಪಟುಗಳ ಮಾಸಾಶನ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ನಾನು ಮಾಡಿದ ಮನವಿಗೆ ಸ್ಪಂದಿಸಿರುವ ಸರ್ಕಾರವು ಈ ಬಜೆಟ್‌ನಲ್ಲಿ ಕುಸ್ತಿ ಮಾಶಾಸನ ಯೋಜನೆಯಡಿ ಹಿರಿಯ ಕುಸ್ತಿಪಟುಗಳಿಗೆ ನೀಡುವ ಮಾಶಾಸನ ಹೆಚ್ಚಿಸಿದೆ. ಇದರಿಂದ ರಾಜ್ಯಮಟ್ಟದ ಕುಸ್ತಿ ಆಡಿದ ಪೈಲ್ವಾನರಿಗೆ ₹3500ರಿಂದ 4500ವರೆಗೆ ಹಾಗೂ ರಾಷ್ಟ್ರಮಟ್ಡದ ಕುಸ್ತಿ ಆಡಿದವರಿಗೆ ₹4000ರಿಂದ 5000 ವರೆಗೆ ಹೆಚ್ಚಳವಾಗಿದ್ದು, ನಮ್ಮ ತಾಲೂಕಿನ 52 ಮಾಜಿ ಕುಸ್ತಿಪಟುಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದರು.ಪಿಎಂಶ್ರೀ ಯೋಜನೆಯಡಿ ಹಳೆ ದಾಂಡೇಲಿಯ ಸರ್ಕಾರಿ ಪಿಯು ಕಾಲೇಜು ಆಯ್ಕೆಯಾಗಿದೆ. ಇದರಿಂದ ಕಾಲೇಜಿನ ಕಟ್ಟಡ ನವೀಕರಣ ಹಾಗೂ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಅನುದಾನವು ದೊರೆಯಲಿದೆ ಎಂದು ದೇಶಪಾಂಡೆ ತಿಳಿಸಿದರು. ಹಳಿಯಾಳ ಕ್ಷೇತ್ರಕ್ಕೆ ಹೊಸದಾಗಿ ಆ್ಯಂಬುಲೆನ್ಸ್ ಪಡೆಯಲು ದಾಂಡೇಲಿಯ ಅಲ್ಪಸಂಖ್ಯಾತ ಸಮುದಾಯದ ಬೇಡಿಕೆ ಬಂದಿದ್ದರಿಂದ ಅಲ್ಪಸಂಖ್ಯಾತರ ವಿವಿಧ ಅಭಿವೃದ್ಧಿ ಕಾರ್ಯಕ್ರಮ ಯೋಜನೆಯಡಿ ₹30ಲಕ್ಷ ಮಂಜೂರಾಗಿದೆ ಎಂದು ದೇಶಪಾಂಡೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಯುವಕಾಂಗ್ರೆಸ್ ಪ್ರಮುಖ ರವಿ ತೋರಣಗಟ್ಟಿ, ವಿಆರ್‌ಡಿ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಇದ್ದರು.

ಇಂದು ಕಾಳಿನೀರಾವರಿ ಯೋಜನೆಗೆ ಪ್ರಾಯೋಗಿಕ ಚಾಲನೆಕಾಳಿನೀರಾವರಿ ಯೋಜನೆಯ ಮೊದಲ ಹಂತದ ಕಾಮಗಾರಿಯನ್ನು ಭಾನುವಾರ ಪ್ರಾಯೋಗಿಕವಾಗಿ ಚಾಲನೆ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಅದಕ್ಕಾಗಿ ಹಳಿಯಾಳ ವಿಧಾನ ಸಭಾ ಕ್ಷೇತ್ರದ ಮೂರು ತಾಲೂಕಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ದೇಶಪಾಂಡೆ ತಿಳಿಸಿದರು.

ಕಾಳಿ ನೀರಾವರಿ ಯೋಜನೆಯು ಅಂತಿಮ ಹಂತಕ್ಕೆ ತಲುಪಿದೆ. ಹೀಗಿರುವಾಗ ಒಮ್ಮೆಯೂ ಈ ಯೋಜನೆಯ ಬಗ್ಗೆ ನನ್ನೊಂದಿಗೆ ಚರ್ಚೆಗೆ ಬರದವರು, ಈಗ ಮುಷ್ಕರ ಮಾಡುತ್ತಿದ್ದಾರೆ ಎಂದರೆ ಏನರ್ಥ ಎಂದರು. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನದಲ್ಲಿಟ್ಟಿರುವ ನಮ್ಮ ಕ್ಷೇತ್ರದ ಮತದಾರರು ಈ ಮುಷ್ಕರದಿಂದ ಹೊರ ಉಳಿದರು ಎಂದರು.