ಸಾರಾಂಶ
ಬೇಲೂರು : ಪಟ್ಟಣದ ಕೋಟೆ ಶ್ರೀಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಯವರ 354ನೇ ಆರಾಧನಾ ಮಹೋತ್ಸವವನ್ನು ಆಚರಿಸಲಾಯಿತು. ಭಕ್ತರು ಅಧಿಕ ಸಂಖ್ಯೆಯಲ್ಲಿ ಮಠಕ್ಕೆ ಆಗಮಿಸಿ ಸ್ವಾಮಿಗಳ ಪಾದಪೂಜೆ, ಪಂಚಾಮೃತಾಭಿಷೇಕ, ವಿಶೇಷ ಅಲಂಕಾರ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಆರಾಧನೆಯ ಅಂಗವಾಗಿ ಮುಂಜಾನೆ ವೇದಘೋಷ, ಭಜನೆ, ಆರತಿ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಮಠದ ಆವರಣದಲ್ಲಿ ಧಾರ್ಮಿಕ ವಾತಾವರಣ ತುಂಬಿ ತುಳುಕಿದ್ದು, ಎಲ್ಲೆಡೆ ರಾಘವೇಂದ್ರ ರಾಯರಿಗೇ ಜಯ ಎಂಬ ಘೋಷಣೆಗಳು ಕೇಳಿಬರುತ್ತಿದ್ದವು.ಶ್ರೀ ಮಠದ ಪ್ರಧಾನ ಅರ್ಚಕ ಸುದೀಂದ್ರ ಮಾತನಾಡಿ, ಪ್ರತೀ ವರ್ಷ ಆರಾಧನೆ ಪ್ರಯುಕ್ತ ಜಾತಿ, ಮತ ಭೇದವಿಲ್ಲದೆ ರಾಯರನ್ನು ಆರಾಧಿಸುತ್ತಿದ್ದಾರೆ.
ಈ ದಿನದ ವಿಶೇಷ ಶ್ರೀ ಗುರು ರಾಯರು ಬೃಂದಾವನವಾದ ದಿನವಾಗಿದ್ದು ಮಠದ ಬೃಂದಾವನದಲ್ಲಿ ನಲೆಸಿರುವ ಗುರುರಾಯರಿಗೆ ಶ್ರೀ ಆಂಜನೇಯ ಸ್ವಾಮಿ ಹಾಗು ಉಗ್ರನರಂಸಿಹಸ್ವಾಮಿಗೆ ವಿಶೇಷ ಪಂಚಾಮೃತಾಭಿಷೇಕ. ವಿಶೇಷವಾಗಿ ಪೂರ್ವಾರಾಧನೆ ದಿನ ಅಷ್ಟವದನಸೇವೆ, ಅಷ್ಟೋತ್ತರ ಸಹಸ್ರನಾಮ, ಏಕ ಮಂಗಳಾರತಿ, ಭಜನೆ, ಕೀರ್ತನೆ ಹಾಗೂ ನಾದಸ್ವರ ಸೇವೆಯೊಂದಿಗೆ ವಿಶೇಷ ಸಂಕಲ್ಪ ಮಾಡಿ ಪೂಜಿಸಲಾಯಿತು. ಕೊನೆಯ ದಿನ ಸ್ವಾಮಿಯವರ ಭವ್ಯ ಮೆರವಣಿಗೆ ಹಾಗೂ ರಥೋತ್ಸವ ಕಾರ್ಯಕ್ರಮ ಸರ್ವ ಭಕ್ತರ ನೆರವಿನಿಂದ ನಡೆದುಕೊಂಡು ಬರುತ್ತಿದೆ. ಮೂರು ದಿನಗಳ ಕಾಲ ಬಂದಂತ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಸಿಕೊಂಡು ಬರುತ್ತಿದ್ದೇವೆ ಎಂದರು.
ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಶಾಸಕ ಎಚ್ ಕೆ ಸುರೇಶ್, ಪೂಜ್ಯರ ೩೫೪ನೇ ಆರಾಧನಾ ಮಹೋತ್ಸವ ಅಂಗವಾಗಿ ರಾಯರು ತಾಲೂಕಿನ ಸಮಸ್ತ ಜನತೆಗೆ ಎಲ್ಲಾ ರೀತಿಯ ಫಲಫ್ರದ ನೀಡಲಿ. ನಾಡಿನಲ್ಲಿ ಜನತೆಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದು, ಇಂದಿನಿಂದ ಅದಿವೇಶನದಲ್ಲಿ ಭಾಗವಹಿಸುತ್ತಿದ್ದು ತಾಲೂಕಿಗೆ ಹೆಚ್ಚಿನ ಅನುದಾನ ತಂದು ತಾಲೂಕಿನ ಅಭಿವೃದ್ಧಿ ಗೆ ಹೆಚ್ಚಿನ ಸಹಕಾರ ನೀಡುವಂತೆ ರಾಯರಲ್ಲಿ ಪ್ರಾರ್ಥಿಸಿದ್ದೇನೆ ಎಂದರು.
ನಂತರ ಬಂದಂತ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು.ಈ ವೇಳೆ ಚನ್ನಕೇಶವ ದೇಗುಲದ ದೇಗುಲದ ಪ್ರಧಾನ ಅರ್ಚಕರಾದ ಶ್ರೀನಿವಾಸ್ ಭಟ್ಟರ್, ಪುರಸಭೆ ಮಾಜಿ ಅಧ್ಯಕ್ಷ ಎ ಆರ್ ಅಶೋಕ್, ಇತರರು ಹಾಜರಿದ್ದರು.