ಸ್ತುತ ಹಾಗೂ ಭವಿಷ್ಯದಲ್ಲಿ ಎಐ ಹಾಗೂ ಡಿಜಿಟಲ್ ಮನೋವಿಜ್ಞಾನ, ಸಮ್ಮೇಳನದ ಪ್ರಮುಖ ವಿಷಯವಾಗಿರಲಿದೆ. ಮನೋವೈದ್ಯಕೀಯ ಚಿಕಿತ್ಸೆಯಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲ್ ತಂತ್ರಜ್ಞಾನದ ಪ್ರಸ್ತುತ ಬಳಕೆ, ಭವಿಷ್ಯದ ಸಾಧ್ಯತೆಗಳು ಹಾಗೂ ಅವುಗಳಿಂದ ಮಾನಸಿಕ ಆರೋಗ್ಯ ಸೇವೆಯಲ್ಲಿ ಉಂಟಾಗಬಹುದಾದ ಬದಲಾವಣೆಗಳ ಕುರಿತು ತಜ್ಞರು ಸಮ್ಮೇಳನದಲ್ಲಿ ಚರ್ಚಿಸಲಿದ್ದಾರೆ.
ಕಾರವಾರ: ಮನೋವೈದ್ಯಕೀಯ ಕ್ಷೇತ್ರದಲ್ಲಿನ ಹೊಸ ಬೆಳವಣಿಗೆಗಳು, ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲ್ ತಂತ್ರಜ್ಞಾನದ ಬಳಕೆ ಸೇರಿದಂತೆ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚಿಸಲು ಮನೋರೋಗ ತಜ್ಞರ 36ನೇ ವಾರ್ಷಿಕ ರಾಜ್ಯಮಟ್ಟದ ಸಮ್ಮೇಳನ ಸೆ. 4ರಿಂದ 6ರ ವರೆಗೆ ಕಾರವಾರದಲ್ಲಿ ನಡೆಯಲಿದೆ ಎಂದು ಕ್ರಿಮ್ಸ್ನ ಮನೋರೋಗ ವಿಭಾಗದ ಪ್ರಾಧ್ಯಾಪಕ ಹಾಗೂ ವಿಭಾಗದ ಅಧ್ಯಕ್ಷ ಡಾ. ವಿಜಯರಾಜ್ ತಿಳಿಸಿದರು. ಮಂಗಳವಾರ ಸುದ್ದಿಗೋಷ್ಥಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕರ್ನಾಟಕ ಭಾರತೀಯ ಮನೋವೈದ್ಯಕೀಯ ಸಂಘದ ಆಶ್ರಯದಲ್ಲಿ ಕೆಎಎನ್ಸಿಐಪಿಎಸ್ ಹೆಸರಿನಲ್ಲಿ ಮೂರು ದಿನಗಳ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಪ್ರಸ್ತುತ ಹಾಗೂ ಭವಿಷ್ಯದಲ್ಲಿ ಎಐ ಹಾಗೂ ಡಿಜಿಟಲ್ ಮನೋವಿಜ್ಞಾನ, ಸಮ್ಮೇಳನದ ಪ್ರಮುಖ ವಿಷಯವಾಗಿರಲಿದೆ. ಮನೋವೈದ್ಯಕೀಯ ಚಿಕಿತ್ಸೆಯಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲ್ ತಂತ್ರಜ್ಞಾನದ ಪ್ರಸ್ತುತ ಬಳಕೆ, ಭವಿಷ್ಯದ ಸಾಧ್ಯತೆಗಳು ಹಾಗೂ ಅವುಗಳಿಂದ ಮಾನಸಿಕ ಆರೋಗ್ಯ ಸೇವೆಯಲ್ಲಿ ಉಂಟಾಗಬಹುದಾದ ಬದಲಾವಣೆಗಳ ಕುರಿತು ತಜ್ಞರು ಸಮ್ಮೇಳನದಲ್ಲಿ ಚರ್ಚಿಸಲಿದ್ದಾರೆ ಎಂದರು. ಕ್ರಿಮ್ಸ್ ಮನೋರೋಗ ವಿಭಾಗದ ಸಹ ಪ್ರಾಧ್ಯಾಪಕ ಡಾ. ಅಕ್ಷಯ್ ಪಾಟಕ್ ಮಾತನಾಡಿ, ಸಮ್ಮೇಳನದ ಅಂಗವಾಗಿ ಕಳೆದ ನಾಲ್ಕು ತಿಂಗಳಿನಿಂದ ಉತ್ತರ ಕನ್ನಡ ಮನೋವೈದ್ಯಕೀಯ ಸಂಘದ ವತಿಯಿಂದ ಜಿಲ್ಲೆಯ ವಿವಿಧೆಡೆ ಮಾನಸಿಕ ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದರು.
ಸಂತ ಇಗ್ನೀಶಿಯಸ್ ಆಸ್ಪತ್ರೆ ಹೊನ್ನಾವರದ ಮನೋರೋಗ ತಜ್ಞ ಡಾ. ವಿಶಾಲ್ ವಿ. ಮಾತನಾಡಿ, ಸೆ. 4ರಂದು ಸಮ್ಮೇಳನದ ಅಂಗವಾಗಿ ಸಾರ್ವಜನಿಕ ಮಾಹಿತಿ ಹಾಗೂ ತರಬೇತಿ ಕಾರ್ಯಕ್ರಮ ಕ್ರಿಮ್ಸ್ ನಲ್ಲಿ ನಡೆಯಲಿದೆ. ಸಮ್ಮೇಳನದ ಉಳಿದ ಕಾರ್ಯಕ್ರಮಗಳು ಕಾರವಾರದ ಹೋಟೆಲ್ ಅಜ್ಜಿ ಓಷನ್ನಲ್ಲಿ ನಡೆಯಲಿವೆ. ಸೆ. 5ರಂದು ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮನೋರೋಗ ತಜ್ಞ ಹಾಗೂ ಪದ್ಮಶ್ರೀ ಪುರಸ್ಕೃತ ಡಾ. ಸಿ.ಆರ್. ಚಂದ್ರಶೇಖರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದಲ್ಲಿ ಮಾನಸಿಕ ಆರೋಗ್ಯ ಆರೈಕೆಯಲ್ಲಿ ಸರ್ಕಾರ, ಖಾಸಗಿ ಸಂಸ್ಥೆಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳ ಪಾತ್ರದ ಕುರಿತು ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಮ್ಮೇಳನದಲ್ಲಿ ಹಿರಿಯ ಹಾಗೂ ಖ್ಯಾತ ಮನೋವೈದ್ಯರನ್ನು ಸನ್ಮಾನಿಸುವ ಕಾರ್ಯಕ್ರಮವೂ ನಡೆಯಲಿದೆ. ವೈದ್ಯರಲ್ಲದವರಿಂದ ನಡೆಸಲ್ಪಡುತ್ತಿರುವ ನಶಾಮುಕ್ತಿ ಕೇಂದ್ರಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ‘ಸ್ಪಂದನ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದರು.ಕರ್ನಾಟಕ ಭಾರತೀಯ ಮನೋವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಅನಿಲ್ ಎಂ. ನಾಗರಾಜ್, ಕಾರ್ಯದರ್ಶಿ ಡಾ. ನಾರಾಯಣ್ ಮುತಾಲಿಕ್ ಹಾಗೂ ಕೆಎಎನ್ಸಿಐಪಿಎಸ್ ವೈಜ್ಞಾನಿಕ ಸಮಿತಿ ಅಧ್ಯಕ್ಷ ಡಾ. ರಂಗನಾಥ್ ಕುಲಕರ್ಣಿ ಅವರ ಮುತುವರ್ಜಿಯಲ್ಲಿ ಸಮ್ಮೇಳನ ನಡೆಯಲಿದೆ ಎಂದು ಸಂಘದ ಪದಾಧಿಕಾರಿಗಳು ಮಾಹಿತಿ ನೀಡಿದರು.