ಶಿರಾ ತಾಲೂಕಿನಲ್ಲಿ ನಂದಿನಿ ಉತ್ಪನ್ನಗಳ ತಯಾರಿಕಾ ಘಟಕ ಸ್ಥಾಪಿಸಲು ೪ ಎಕರೆ ಜಮೀನನ್ನು ಮಂಜೂರು ಮಾಡಲಾಗುವುದು
ಕನ್ನಡಪ್ರಭ ವಾರ್ತೆ ಶಿರಾ
ಹೈನುಗಾರಿಕೆಯಿಂದ ಉತ್ತಮ ಆದಾಯವಿದ್ದು ತಾಲೂಕಿನ ಜನತೆ ಹೆಚ್ಚು ಹೆಚ್ಚು ಹೈನುಗಾರಿಕೆಯಲ್ಲಿ ತೊಡಗಬೇಕು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.ಅವರು ನಗರದ ನಂದಿನಿ ಕ್ಷೀರ ಮಳಿಗೆ ಆವರಣದಲ್ಲಿ ತುಮಕೂರು ಹಾಲು ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಫಲಾನುಭವಿಗಳಿಗೆ ಸವಲತ್ತು ವಿತರಣೆ ಹಾಗೂ ಅಂಧರ ಟಿ೨೦ ಕ್ರಿಕೆಟ್ ವಿಶ್ವಕಪ್ ಗೆದ್ದ ನಾಯಕಿ ದೀಪಿಕಾ ಅವರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾನು ಸ್ವತಃ ಇಷ್ಟ ಪಟ್ಟು ಕೃಷಿ ಮಂತ್ರಿ, ಪಶು ಸಂಗೋಪನೆ, ನೀರಾವರಿ ಖಾತೆ ಕೇಳಿ ಪಡೆದಿದ್ದೆ. ಸಚಿವನಾಗಿದ್ದ ಸಂದರ್ಭದಲ್ಲಿ ಹೈನುಗಾರಿಕೆಗೆ ಪ್ರೋತ್ಸಾಹ ನೀಡಿದ್ದೇನೆ. ಶಿರಾ ತಾಲೂಕಿನಲ್ಲಿ ನಂದಿನಿ ಉತ್ಪನ್ನಗಳ ತಯಾರಿಕಾ ಘಟಕ ಸ್ಥಾಪಿಸಲು ೪ ಎಕರೆ ಜಮೀನನ್ನು ಮಂಜೂರು ಮಾಡಲಾಗುವುದು ಎಂದರು.ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ ಶಿರಾದಲ್ಲಿ ಶಾಸಕ ಟಿ.ಬಿ.ಜಯಚಂದ್ರ ಅವರು ನೀರನ ಹೊಳೆ ಹರಿಸಿದ್ದಾರೆ. ಎಸ್.ಆರ್.ಗೌಡ ಅವರು ಹಾಲಿನ ಹೊಳೆ ಹರಿಸಿದ್ದಾರೆ. ನಾನು ನನ್ನ ಇಚ್ಚೆಯಂತೆ ಶಿಕ್ಷಣದ ಹೊಳೆ ಹರಿಸುವ ಕಾರ್ಯ ಮಾಡುತ್ತಿದ್ದೇನೆ. ಒಟ್ಟಾರೆ ಶಿರಾ ತಾಲೂಕಿನ ಜನತೆ ಅನುಕೂಲವಾಗುವ ಕೆಲಸವನ್ನು ಎಲ್ಲರೂ ಪಕ್ಷಾತೀತವಾಗಿ ಮಾಡುತ್ತಿದ್ದೇವೆ ಎಂದರು.
ಶಾಸಕರು ಹಾಗೂ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಎಚ್.ವಿ.ವೆಂಕಟೇಶ್ ಮಾತನಾಡಿ ತುಮಕೂರು ಹಾಲು ಒಕ್ಕೂಟಕ್ಕೆ ನಾನು ಅಧ್ಯಕ್ಷನಾದಾಗಿನಿಂದ ರೈತರ ಪರವಾದ, ಹೈನುಗಾರರ ಪರವಾದ ನಿರ್ಣಯ ತೆಗೆದುಕೊಳ್ಳುತ್ತೇವೆ. ನಾನು ಅಧ್ಯಕ್ಷನಾದ ತಕ್ಷಣ ಹೈನುಗಾರರಿಗೆ ೨ ರು. ಪ್ರೋತ್ಸಾಹ ಧನ ನೀಡಿದ್ದೇನೆ ಮುಂದಿನ ದಿನಗಳಲ್ಲೂ ಹೈನುಗಾರರಿಗೆ ಅನುಕೂಲವಾಗುವ ಯೋಜನೆಗಳನ್ನು ರೂಪಿಸುತ್ತೇವೆ ಎಂದರು.ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್ ಆರ್ ಗೌಡ ಮಾತನಾಡಿ ಯುವಕರು ಬೆಂಗಳೂರಿಗೆ ವಲಸೆ ಹೋಗುವ ಬದಲು ಇಲ್ಲಿಯೇ ಹೈನುಗಾರಿಕೆ ಉದ್ಯಮ ಮಾಡಿದರೆ ಹೆಚ್ಚು ಅಭಿವೃದ್ಧಿ ಹೊಂದಬಹುದು ಎಂದರು.
ಬಾಕ್ಸ್ಸನ್ಮಾನ ಸ್ವೀಕರಿಸಿ ಮಾತನಾಡಿದ ಅಂಧರ ಟಿ೨೦ ವಿಶ್ವಕಪ್ ವಿಜೇತ ತಂಡದ ನಾಯಕಿಯಾದ ಶಿರಾ ತಾಲೂಕಿನ ಕರೆ ತಿಮ್ಮನಹಳ್ಳಿ ಗ್ರಾಮದ ದೀಪಿಕ ಟಿ.ಸಿ. ಶಿರಾ ತಾಲೂಕಿನಲ್ಲಿ ನನಗೆ ಹೆಚ್ಚು ಪ್ರೋತ್ಸಾಹ ಸಿಕ್ಕಿದೆ. ನಾನು ಮುಂದೆಯೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹೆಚ್ಚು ಗೆಲುವು ಸಾಧಿಸಿ ಶಿರಾಕ್ಕೆ ಕೀರ್ತಿ ತರುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಜಿಶಾನ್ ಮೊಹಮೂದ್, ತುಮುಲ್ ನಿರ್ದೇಶಕರಾದ ಕೃಷ್ಣ ಕುಮಾರ್, ನಾಗೇಶ್ ಬಾಬು, ಸಿದ್ದಂಗಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಜಿ ಎಸ್ ರವಿ, ಜಿ.ಎನ್ ಮೂರ್ತಿ, ದಿಶಾ ಸಮಿತಿ ಸದಸ್ಯ ಮದಲೂರು ಮೂರ್ತಿ ಮಾಸ್ಟರ್, ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ಗಿರೀಶ್, ಮಾಜಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಟಿ ಡಿ ಮಲ್ಲೇಶ್, ನಗರಸಭೆ ಸದಸ್ಯೆ ಉಮಾ ವಿಜಯರಾಜ್, ಮಾಜಿ ತಾ.ಪಂ. ಉಪಾಧ್ಯಕ್ಷ ರಂಗನಾಥ್ ಗೌಡ, ಮುಖಂಡರಾದ ಡಿ ವೈ ಗೋಪಾಲ್, ಮುದ್ದು ಗಣೇಶ, ಮದ್ದೆವಳ್ಳಿ ರಾಮಕೃಷ, ಸೇರಿದಂತೆ ಹಲವರು ಹಾಜರಿದ್ದರು.