ಕಾಲೇಜ ನೂತನ ಕಟ್ಟಡಕ್ಕೆ 40 ಕೋಟಿ ರು. ಮಂಜೂರಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ₹20 ಕೋಟಿ ಹಣದಿಂದ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ಇನ್ನುಳಿದ ಅನುದಾನಿತ ಹಣವನ್ನು ಶೀಘ್ರ ಬಿಡುಗಡೆ ಮಾಡಿಸಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು ಎಂದು ಶಾಸಕ ಹಂಪನಗೌಡ ಬಾದರ್ಲಿ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ಸಿಂಧನೂರು
ಕಾಲೇಜ ನೂತನ ಕಟ್ಟಡಕ್ಕೆ 40 ಕೋಟಿ ರು. ಮಂಜೂರಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ₹20 ಕೋಟಿ ಹಣದಿಂದ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ಇನ್ನುಳಿದ ಅನುದಾನಿತ ಹಣವನ್ನು ಶೀಘ್ರ ಬಿಡುಗಡೆ ಮಾಡಿಸಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು ಎಂದು ಶಾಸಕ ಹಂಪನಗೌಡ ಬಾದರ್ಲಿ ಭರವಸೆ ನೀಡಿದರು.ಅವರು ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶುಕ್ರವಾರ ಪ್ರಥಮ ಶುಭಾರಂಭ-2026 ಮತ್ತು ಪಠ್ಯೇತರ ಚಟುವಟಿಕೆಗಳ ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿದರು. ಎ.ಐ.ಸಿ.ಸಿ. ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ನಿರಂತರ ಹೋರಾಟ ಮತ್ತು ಪರಿಶ್ರಮದಿಂದ 371(ಜೆ) ಜಾರಿಯಾಗಿದ್ದು, ಅದರ ಫಲವಾಗಿ ಕಲ್ಯಾಣ ಕರ್ನಾಟಕದ ಸಹಸ್ರಾರು ಯುವಕರಿಗೆ ಉದ್ಯೋಗಾಧಾರಿತ ಶಿಕ್ಷಣ ಮತ್ತು ಉದ್ಯೋಗ ಲಭಿಸಿದೆ. ವಿದ್ಯಾರ್ಥಿಗಳು ಸಹ ಅಷ್ಟೇ ನಿಷ್ಠೆಯಿಂದ ಅಭ್ಯಾಸ ಮಾಡಿ ಕಾಲೇಜಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.
2013 ರ ನಂತರ ಈ ಭಾಗದಲ್ಲಿ ಸಾಮಾನ್ಯ ಕುಟುಂಬದ ವಿದ್ಯಾರ್ಥಿಗಳು ಸಹ ಎಂ.ಬಿ.ಬಿ.ಎಸ್., ಎಂಜಿನಿಯರಿಂಗ್ ಮತ್ತಿತರ ವೃತ್ತಿಪರ ಶಿಕ್ಷಣ ಹಾಗೂ ವಿವಿಧ ಇಲಾಖೆಗಳಲ್ಲಿ ಅಧಿಕಾರ ಪಡೆದಿದ್ದಾರೆ. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆ ಎಂದರು.ಆರ್.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಮಾತನಾಡಿ ಪದವಿ ಅಭ್ಯಾಸ ಅತ್ಯಂತ ಮಹತ್ವಪೂರ್ಣವಾಗಿದ್ದು, ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಶ್ರದ್ಧೆಯಿಂದ ಅಭ್ಯಸಿಸಿ ಬದುಕು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಬೀದರ್ನ ರಾಷ್ಟ್ರ ಮಟ್ಟದ ಸಂಪನ್ಮೂಲ ವ್ಯಕ್ತಿ ಡಾ.ಲಕ್ಕಿ ಪೃಥ್ವಿರಾಜ್ ವಿಶೇಷ ಉಪನ್ಯಾಸ ನೀಡಿ ವಿದ್ಯಾರ್ಥಿಗಳು ಅನುಸರಿಸಬೇಕಾದ ಜೀವನ ಕ್ರಮ ಮತ್ತು ಸಾಧನೆಗೆ ಬೇಕಾದ ಸಿದ್ಧತೆಗಳನ್ನು ಕುರಿತು ವಿವರಿಸಿದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಡಾ.ವೈಜನಾಥ ಸಗರಮಠ, ಸಂಸ್ಥೆಯ ಪ್ರಾಚಾರ್ಯ ಪ್ರೊ.ಪಾಂಡು ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶರಣಪ್ಪ ಉಪ್ಪಲದೊಡ್ಡಿ, ವೆಂಕಟೇಶ್ವರ ರಾವ್, ಮಲ್ಲಿಕಾರ್ಜುನ ಹಟ್ಟಿ, ರಾಜೇಂದ್ರಕುಮಾರ ನಹಾರ್, ಅಯ್ಯನಗೌಡ ಕಲ್ಲೂರು, ಶೇಖಸಾಬ ಮುಳ್ಳೂರು, ಬಸವರಾಜ ಕನಸಾವಿ, ಅಮರೇಶ ಮಾಡಸಿರವಾರ, ವೀರೇಶ ಸಾನಬಾಳ, ನವೀನ್ ಶೇಠ್, ಹನುಮಂತ ನಾಯಕ, ಬಸವ ರಾಜ ತಾಯಪ್ಪ, ಪ್ರಾಧ್ಯಾಪಕರಾದ ಪುಷ್ಪಾ, ಇಶ್ರತ್ ಬೇಗಂ, ವಿಶ್ವನಾಥ ಪಾಟೀಲ ಉಪಸ್ಥಿತರಿದ್ದರು. ಹನುಮನಗೌಡ ಸ್ವಾಗತಿಸಿದರು. ಶಂಕ್ರಗೌಡ ನಿರೂಪಿಸಿ ದರು. ಮುದ್ದಯ್ಯ ವಂದಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.