ನಾಲ್ಕು ದಶಕಗಳ ಗಣೇಶೋತ್ಸವ... ಮೂರು ವರ್ಷಗಳಿಂದ ಜ್ಯೋತಿರ್ಲಿಂಗಗಳ ಕಲಾಕೃತಿ... ವಿಸರ್ಜನಾ ಮೆರವಣಿಗೆಯಲ್ಲಿ 10 ಸಾವಿರ ಭಕ್ತರ ಹೆಜ್ಜೆ!. ಮಂಗಳವಾರಪೇಟೆಯ ಶ್ರೀಗಜಾನನ ಯುವಕ ಮಂಡಳದ ಗಣೇಶೋತ್ಸವ ಹೀಗೆ ಭಕ್ತಿ, ಪರಂಪರೆ ಹಾಗೂ ಸಾಮಾಜಿಕ ಒಗ್ಗಟ್ಟಿನೊಂದಿಗೆ ವಿಶಿಷ್ಟವಾಗಿ ಗಮನ ಸೆಳೆಯುತ್ತಿದೆ.
ಹುಬ್ಬಳ್ಳಿ:
ನಾಲ್ಕು ದಶಕಗಳ ಗಣೇಶೋತ್ಸವ... ಮೂರು ವರ್ಷಗಳಿಂದ ಜ್ಯೋತಿರ್ಲಿಂಗಗಳ ಕಲಾಕೃತಿ... ವಿಸರ್ಜನಾ ಮೆರವಣಿಗೆಯಲ್ಲಿ 10 ಸಾವಿರ ಭಕ್ತರ ಹೆಜ್ಜೆ!. ಮಂಗಳವಾರಪೇಟೆಯ ಶ್ರೀಗಜಾನನ ಯುವಕ ಮಂಡಳದ ಗಣೇಶೋತ್ಸವ ಹೀಗೆ ಭಕ್ತಿ, ಪರಂಪರೆ ಹಾಗೂ ಸಾಮಾಜಿಕ ಒಗ್ಗಟ್ಟಿನೊಂದಿಗೆ ವಿಶಿಷ್ಟವಾಗಿ ಗಮನ ಸೆಳೆಯುತ್ತಿದೆ.40 ವರ್ಷಗಳಿಂದ ಗಣಪತಿ ಪ್ರತಿಷ್ಠಾಪಿಸುತ್ತಿರುವ ಮಂಡಳ, ಈ ಬಾರಿ 37 ಅಡಿ ಎತ್ತರದ ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗದ ಭವ್ಯ ಮಾದರಿ ನಿರ್ಮಿಸಿದೆ. ಜನರಿಗೆ ಪುಣ್ಯಕ್ಷೇತ್ರದ ದರ್ಶನದ ಅನುಭವ ನೀಡುವ ಉದ್ದೇಶದಿಂದ ಮೂರು ವರ್ಷಗಳಿಂದ "ಜ್ಯೋತಿರ್ಲಿಂಗ " ಪರಿಕಲ್ಪನೆ ಮುಂದುವರಿಸಿಕೊಂಡು ಬರಲಾಗಿದೆ.
2024ರಲ್ಲಿ ಕೇದಾರನಾಥ, 2025ರಲ್ಲಿ ಕಾಶಿ ವಿಶ್ವನಾಥದ ಮಾದರಿ ನಿರ್ಮಿಸಲಾಗಿತ್ತು. ಕಾಶಿ ಮಾದರಿ ನಿರ್ಮಿಸುವ ಮುನ್ನ ಐವರು ಸದಸ್ಯರು ಕಾಶಿಗೆ ತೆರಳಿ ದೇವಸ್ಥಾನದ ವಾಸ್ತುಶಿಲ್ಪ ಗಮನಿಸಿದ್ದರು. ಈ ಬಾರಿ ಶ್ರೀಶೈಲದ ಮಾದರಿಗಾಗಿ ಐವರು ಸದಸ್ಯರು ಹುಬ್ಬಳ್ಳಿಯಿಂದ 12 ದಿನಗಳ ಪಾದಯಾತ್ರೆ ಕೈಗೊಂಡು ಕ್ಷೇತ್ರ ದರ್ಶನ ಮಾಡಿ, ಅಲ್ಲಿನ ವಿನ್ಯಾಸವನ್ನು ಆಧರಿಸಿ ಕಲಾಕೃತಿ ರೂಪಿಸಿದ್ದಾರೆ.ಮೂರು ತಿಂಗಳ ಮುಂಚಿತವಾಗಿ ಸಭೆ ಸೇರಿ ಪರಿಕಲ್ಪನೆ ಅಂತಿಮಗೊಳಿಸಿ ಒಪ್ಪಿಗೆ ಪಡೆಯಲಾಗಿತ್ತು. ಬಳಿಕ 10 ಯುವಕರು 45 ದಿನಗಳ ಕಾಲ ಪ್ರತಿದಿನ 8 ಗಂಟೆ ಶ್ರಮಿಸಿ ಕಲಾಕೃತಿ ನಿರ್ಮಿಸಿದ್ದಾರೆ. ಹೊರಗಿನಿಂದ ಸಿದ್ಧ ಕಲಾಕೃತಿ ತಂದರೆ ಸುಮಾರು ₹9 ಲಕ್ಷ ವೆಚ್ಚವಾಗುತ್ತಿತ್ತು. ಸ್ಥಳೀಯ ಕಲಾವಿದ ವಿಶ್ವನಾಥ ಯಲಬುರ್ಗಿ ಹಾಗೂ ಕಾರ್ಪೆಂಟರ್ ಮಹಾಂತೇಶ ಬಾಳಿಕಾಯಿ ನೇತೃತ್ವದಲ್ಲಿ ಇಲ್ಲಿಯೇ ನಿರ್ಮಿಸಲಾಗಿದೆ.
10 ಸಾವಿರ ಭಕ್ತರ ಮೆರವಣಿಗೆ:ಒಂಬತ್ತನೇ ದಿನದ ವಿಸರ್ಜನಾ ಮೆರವಣಿಗೆ ಮಂಡಳದ ಮತ್ತೊಂದು ಆಕರ್ಷಣೆ. ಪ್ರತಿ ವರ್ಷ ಸುಮಾರು 10 ಸಾವಿರ ಜನರು ಪಾಲ್ಗೊಳ್ಳುತ್ತಾರೆ. ಸೆ. 14ರಂದು ರುದ್ರಾಕ್ಷಿ ಮಠದ ಬಸವಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಲಾಕೃತಿ ಉದ್ಘಾಟಿಸಿದ್ದಾರೆ. ಸೆ. 19ರಂದು ಸಂಜೆ 7ಕ್ಕೆ ಗಂಗಾರತಿ ಕಾರ್ಯಕ್ರಮಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಸೇರಿ ಹಲವು ಗಣ್ಯರು ಭಾಗಿಯಾಗಲಿದ್ದಾರೆ. ಸೆ. 20ರಂದು ಅನ್ನಸಂತರ್ಪಣೆ ನಡೆಯಲಿದೆ. ಸೆ. 22ರಂದು ಮಧ್ಯಾಹ್ನ 2ಕ್ಕೆ ಮಂಗಳವಾರಪೇಟೆಯಿಂದ ವಿಸರ್ಜನಾ ಮೆರವಣಿಗೆ ಆರಂಭವಾಗಿ ಹೊಸೂರು ಬಾವಿಯಲ್ಲಿ ವಿಸರ್ಜನೆ ನಡೆಯಲಿದೆ.
ಹಲವು ದಾನಿಗಳ ಸಹಕಾರಕಳೆದ 10 ವರ್ಷಗಳಿಂದ ‘ಎಲ್ಲರೂ ಅಧ್ಯಕ್ಷರು; ಎಲ್ಲರೂ ಕಾರ್ಯಕರ್ತರು’ ಎಂಬ ಪರಿಕಲ್ಪನೆಯೊಂದಿಗೆ ಸಾಂಪ್ರದಾಯಿಕ ಪದಾಧಿಕಾರಿ ವ್ಯವಸ್ಥೆ ಕೈಬಿಡಲಾಗಿದೆ. 37 ಅಡಿ ಎತ್ತರದ ಭವ್ಯ ಕಲಾಕೃತಿ ನಿರ್ಮಾಣಕ್ಕೆ ಹಲವು ದಾನಿಗಳ ಸಹಾಯ, ಸಹಕಾರವಿದ್ದು, ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಮಂಡಳದ ಸದಸ್ಯ ಜಗದೀಶ ಬುಳ್ಳಾನವರ "ಕನ್ನಡಪ್ರಭ "ಕ್ಕೆ ತಿಳಿಸಿದರು.