ಆಯುರ್ವೇದದಲ್ಲಿ ಮಹತ್ತರ ಸ್ಥಾನ ಪಡೆದ ‘ಅಷ್ಟಾಂಗ ಹೃದಯ ಸಂಹಿತೆ ದಿನಚರ್ಯ ಅಧ್ಯಾಯ’ವನ್ನು 4 ಸಾವಿರಕ್ಕೂ ಅಧಿಕ ಜನರು ಏಕಕಾಲಕ್ಕೆ ಪಠಿಸುವ ಮೂಲಕ ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್ಸ್ ಹಾಗೂ ಏಷಿಯಾ ಬುಕ್ಸ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಬರೆದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಆಯುರ್ವೇದದಲ್ಲಿ ಮಹತ್ತರ ಸ್ಥಾನ ಪಡೆದ ‘ಅಷ್ಟಾಂಗ ಹೃದಯ ಸಂಹಿತೆ ದಿನಚರ್ಯ ಅಧ್ಯಾಯ’ವನ್ನು 4 ಸಾವಿರಕ್ಕೂ ಅಧಿಕ ಜನರು ಏಕಕಾಲಕ್ಕೆ ಪಠಿಸುವ ಮೂಲಕ ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್ಸ್ ಹಾಗೂ ಏಷಿಯಾ ಬುಕ್ಸ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಬರೆದರು.ಇಲ್ಲಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಆಯುರ್ವೇದ ವಿಶ್ವ ಸಮ್ಮೇಳನದ 3ನೇ ದಿನ ಮುಖ್ಯ ವೇದಿಕೆಯಲ್ಲಿ ಈ ಅಧ್ಯಾಯವನ್ನು ಆಯುರ್ವೇದ ತಜ್ಞರು, ವಿದ್ಯಾರ್ಥಿಗಳು ಹಾಗೂ ಗಣ್ಯರು ಸೇರಿ ಪಠಿಸಿದರು. ಸಹಸ್ರಾರು ಕಂಠಗಳಿಂದ ಒಂದೇ ಸಮಯಕ್ಕೆ ದಿನಚರ್ಯವನ್ನು ಪಠಿಸುವ ಮೂಲಕ ಆಯುರ್ವೇದದಲ್ಲಿ ಮೊದಲ ದಾಖಲೆ ನಿರ್ಮಾಣವಾಯಿತು.
ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ನ ಜ್ಯೂರಿ ಮೆಂಬರ್ ಹರೀಶ್ ಆರ್. ಅವರು ದಾಖಲೆಯನ್ನು ಘೋಷಣೆ ಮಾಡಿದರು. ಪ್ರಶಾಂತಿ ಆಯುರ್ವೇದ ಸೆಂಟರ್ ಹೆಸರಲ್ಲಿ ಈ ದಾಖಲೆ ನಿರ್ಮಾಣವಾಗಿದೆ ಎಂದ ಅವರು ಡಾ। ಗಿರಿಧರ್ ಕಜೆ ಅವರಿಗೆ ಪ್ರಮಾಣಪತ್ರ ಹಾಗೂ ಮೆಡಲ್ ನೀಡಿದರು. ಇದು ಆಯುರ್ವೇದ ಕ್ಷೇತ್ರದ ಮೊದಲ ದಾಖಲೆ ಎಂದು ಸಮ್ಮೇಳನದ ರೂವಾರಿ ಡಾ। ಗಿರಿಧರ್ ಕಜೆ ತಿಳಿಸಿದರು.ಮಹರ್ಷಿ ವಾಗ್ಭಟಾಚಾರ್ಯರಿಂದ ಅಷ್ಟಾಂಗ ಹೃದಯ ಸಂಹಿತೆ ರಚಿತವಾಗಿದ್ದು, ದಿನಚರ್ಯೆ ಅಧ್ಯಾಯವು ಪ್ರತಿ ಮನುಷ್ಯನು ಕಾಲ ಹಾಗೂ ದೇಶಗಳಿಗೆ ಅನುಗುಣವಾಗಿ ಯಾವ ರೀತಿಯಾದ ದಿನಚರಿಯನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸುವ ಅಧ್ಯಾಯವಾಗಿದೆ. ಆಯುರ್ವೇದದಲ್ಲಿ ವಿಜ್ಞಾನ ಇಲ್ಲ ಎಂದು ಅಪಪ್ರಚಾರ: ಆಯುರ್ವೇದದಲ್ಲಿ ವಿಜ್ಞಾನ ಇಲ್ಲ, ವೈದ್ಯವಿಜ್ಞಾನ ಅಲ್ಲ ಎಂಬ ಅಪಪ್ರಚಾರ ಸಾಕಷ್ಟಿದೆ. ಆಯುರ್ವೇದ ಕ್ಷೇತ್ರದ ಹಲವು ವರ್ಷಗಳ ಯಶಸ್ಸು, ಚಿಕಿತ್ಸೆಯ ಅಂಕಿಅಂಶ ಸೇರಿ ಇತರೆ ಅಂಶಗಳ ಡೇಟಾ ಕೃತಕ ಬುದ್ಧಿಮತ್ತೆಗೆ ಸೇರ್ಪಡೆ ಆದಲ್ಲಿ ಆಯುರ್ವೇದದಲ್ಲಿ ಸಾಕಷ್ಟು ವಿಜ್ಞಾನ ಅಡಗಿರುವುದನ್ನು ತೋರ್ಪಡಿಸಬಹುದು ಎಂದು ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದರು.ಇಲ್ಲಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಆಯುರ್ವೇದ ವಿಶ್ವ ಸಮ್ಮೇಳನದ 3ನೇ ದಿನವಾದ ಶನಿವಾರ ಮುಖ್ಯ ವೇದಿಕೆಯಲ್ಲಿ ಅವರು ಮಾತನಾಡಿದರು. ಆಯುರ್ವೇದದ ವೈಜ್ಞಾನಿಕ ಸತ್ವದ ಕುರಿತು ಅರಿವು ಮೂಡಿಸುತ್ತಾ ಮುಂದುವರಿದರೆ ವಿದೇಶಗಳಲ್ಲಿರುವ ಪಾಶ್ಚಾತ್ಯ ಮೆಡಿಕಲ್ ಸೆಂಟರ್ಗೆ ಪರ್ಯಾಯವಾಗಿ ಆಯುರ್ವೇದ ಮೆಡಿಕಲ್ ಸೆಂಟರ್ ಬೆಳೆಯಲು ಸಾಧ್ಯವಿದೆ. ಜತೆಗೆ ಇದರಿಂದ ನಮ್ಮ ವೈದ್ಯರಲ್ಲೂ ಆಯುರ್ವೇದದ ಬಗೆಗಿನ ವೈಜ್ಞಾನಿಕ ಮನೋಭಾವ ಹೆಚ್ಚಲಿದೆ ಎಂದರು.
ಪಾಶ್ಚಾತ್ಯ ವಿಜ್ಞಾನವೇ ಜ್ಞಾನ, ನಮ್ಮದು ಜ್ಞಾನವಲ್ಲ ಎಂಬ ಭಾವನೆ ಅಲ್ಲಿಯೂ ಇದೆ, ದುರದೃಷ್ಟವಶಾತ್ ನಮ್ಮಲ್ಲೂ ಇದೆ. ಪಾಶ್ಚಾತ್ಯರು ಈಗಲೂ ಆಯುರ್ವೇದದಲ್ಲಿ ವಿಜ್ಞಾನ, ಜೀವ ವಿಜ್ಞಾನ, ವೈದ್ಯಕೀಯ ವಿಜ್ಞಾನದಲ್ಲಿ ಒಂದೇ ದಾರಿ ಎಂದು ಜಗತ್ತು ನಂಬಿದ್ದಾಗ ಭಾರತ ಆಯುರ್ವೇದದ ಹೊಸ ದಾರಿಯನ್ನು ತೋರಿದೆ. ಅಂಥವನ್ನು ಅಲ್ಲಗಳೆಯಲು ಎಐ ಉತ್ತಮ ಸಾಧನವಾಗಿ ಬಳಸಿಕೊಳ್ಳುವ ಅವಕಾಶವಿದೆ ಎಂದರು.ಬಾರ್ಕೂರು ಮಹಾಸಂಸ್ಥಾನದ ವಿದ್ಯಾವಾಚಸ್ಪತಿ ವಿಶ್ವ ಸಂತೋಷ ಭಾರತಿ ಸ್ವಾಮೀಜಿ ಮಾತನಾಡಿ, ಲಭ್ಯತೆ ಕಡಿಮೆಯಾಗುತ್ತಿರುವ ಆಯುರ್ವೇದ ಸಸಿಗಳನ್ನು ಉಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮುತುವರ್ಜಿ ವಹಿಸಬೇಕು ಎಂದು ಹೇಳಿದರು.ರಾಮಕೃಷ್ಣ-ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಆಯುರ್ವೇದ ಯಾವ ಮಟ್ಟಿಗೆ ಬೆಳೆಯಬೇಕಾಗಿತ್ತೋ ಆ ಹಂತ ತಲುಪಲಿಲ್ಲ. ಇನ್ನಾದರೂ ಹೆಚ್ಚಿನ ಸಂಶೋಧನೆ, ಆಯುರ್ವೇದ ವೈಜ್ಞಾನಿಕ ಕೇಂದ್ರಗಳು ಹೆಚ್ಚಾಗಬೇಕು ಎಂದರು.ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ, ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಮನೋಹರ್, ಬಿ.ಎ.ಪಾಟೀಲ್ ಮಾತನಾಡಿದರು. ಕರ್ನಾಟಕ ಬ್ಯಾಂಕ್ ಸಿಒಒ ರಾಜಾ ಬಿ.ಎಸ್. ಇದ್ದರು.
ಆಯುರ್ವೇದ ಕೇವಲ ಪಾಠವಾಗೋದು ಬೇಡ:ಸಂಜೆ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಮಾತನಾಡಿ, ಸಾವಿರಾರು ವರ್ಷಗಳ ಹಿಂದೆ ಆಯುರ್ವೇದ ತಜ್ಞರಾದ ಸುಶ್ರುತರು ಶಸ್ತ್ರಚಿಕಿತ್ಸೆಯ ಕುರಿತಾಗಿ ಉಲ್ಲೇಖಿಸಿದ್ದಾರೆ. ಆದರೆ ಆನಂತರ ಆ ವಿಚಾರವಾಗಿ ಹೆಚ್ಚಿನ ಸಂಶೋಧನೆ ನಡೆಯಲಿಲ್ಲ. ಇಂದು ಆಯುರ್ವೇದ ವಿದ್ಯಾಲಯಗಳಲ್ಲಿ ಅಷ್ಟಾಂಗ ಯೋಗ ಪಾಠಮಾಡುವಾಗ ‘ಯಮ-ನಿಯಮ’'''' ಮುಂತಾದವನ್ನು ಕೇವಲ ಪಾಠವಾಗಿ ಮಾಡುತ್ತಿದ್ದಾರೆ. ಜೀವನಕ್ಕೆ ಅಳವಡಿಸಿಕೊಳ್ಳುತ್ತಿಲ್ಲ ಎಂದರು.