ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲೆಯ ಇಂಡಿ ಉಪವಿಭಾಗದ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ 2024, 2025 ಹಾಗೂ 2026ನೇ ಸಾಲಿನಲ್ಲಿ ನಡೆದಿದ್ದ ದೇವಸ್ಥಾನ ಕಳ್ಳತನ, ವಾಹನ ಕಳ್ಳತನ, ಮನೆಗಳ್ಳತನ, ಫೈನಾನ್ಸ್ ಕಳ್ಳತನ, ದನ/ಕುರಿ, ಪಂಪ್ಸೆಟ್ ಕಳ್ಳತನ ಮತ್ತು ಸುಲಿಗೆ/ದರೋಡೆ ಸೇರಿದಂತೆ ಒಟ್ಟು 20 ಕಳ್ಳತನ ಪ್ರಕರಣಗಳನ್ನು ನಮ್ಮ ಪೊಲೀಸರು ಬೇಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.ನಗರದ ಪೊಲೀಸ್ ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳ್ಳತನ/ಸುಲಿಗೆ ಪ್ರಕರಣಗಳ ಪತ್ತೆ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿ, ಹೆಚ್ಚುವರಿ ಎಸ್ಪಿ ರಾಮನಗೌಡ ಹಟ್ಟಿ ಮಾರ್ಗದರ್ಶನದಲ್ಲಿ ಇಂಡಿ ಡಿವೈಎಸ್ಪಿ ಸದಾಶಿವ ಕಟ್ಟಿಮನಿ, ಸಿಪಿಐಗಳು ಹಾಗೂ ಆಯಾ ಪೊಲೀಸ್ ಠಾಣೆಗಳ ಪಿಎಸೈ ಹಾಗೂ ಕೈಂ ಸಿಬ್ಬಂದಿಯನ್ನೊಳಗೊಂಡು ವಿವಿಧ ತನಿಖಾ ತಂಡಗಳನ್ನು ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ತನಿಖಾ ತಂಡಗಳು ಒಟ್ಟು 20 ವಿವಿಧ ಸ್ವತ್ತಿನ ಪ್ರಕರಣಗಳಲ್ಲಿ 42 ಜನ ಆರೋಪಿಗಳನ್ನು ಬಂಧಿಸಿ, ಬಂಧಿತರಿಂದ ಸುಮಾರು ₹1,20,04,750 ಮೌಲ್ಯದ ಬಂಗಾರ/ಬೆಳ್ಳಿಯ ಆಭರಣಗಳು, ಕಳುವಾದ ಜೆಸಿಬಿ, ಪಿಕಪ್, ಸ್ಕಾರ್ಪಿಯೋ, ಟ್ರ್ಯಾಕ್ಟರ್ ವಾಹನಗಳು, ನೀರಿನ ಪಂಪ್ಸೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ತನಿಖಾ ತಂಡದ ಅಧಿಕಾರಿ ಹಾಗೂ ಸಿಬ್ಬಂದಿ ಜನರು ತಮಗೆ ವಹಿಸಿದ ಕಳ್ಳತನದ ಪ್ರಕರಣಗಳ ತನಿಖೆಯನ್ನು ನಿಯಮಿತವಾಗಿ ಕೈಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ದೊರೆತ ಕುರುಹು, ಸಿಸಿಟಿವಿ ಪುಟೇಜ್, ಸ್ಥಳೀಯವಾಗಿ ದೊರೆತ ಮಾಹಿತಿ, ನವೀನ ತಂತ್ರಜ್ಞಾನ ಹೀಗೆ ವಿವಿಧ ತನಿಖಾ ಕೌಶಲ್ಯಗಳನ್ನು ಉಪಯೋಗಿಸಿ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಅವರಿಂದ ₹1.20 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡ ತನಿಖಾ ತಂಡದ ಕರ್ತವ್ಯ ಶ್ಲಾಘಿಸಿ, ತಂಡದ ಪ್ರತಿ ಅಧಿಕಾರಿ ಮತ್ತು ಸಿಬ್ಬಂದಿ ಜನರಿಗೆ ಪ್ರತ್ಯೇಕ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗಿದೆ ಎಂದರು.ಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ರಾಮನಗೌಡ ಹಟ್ಟಿ, ಡಿವೈಎಸ್ಪಿ ಸದಾಶಿವ ಕಟ್ಟಿಮನಿ, ಸಿಪಿಐಗಳಾದ ಮಲ್ಲಯ್ಯ ಮಠಪತಿ, ಪರಶುರಾಮ ಮನಗೂಳಿ, ಪಿಎಸೈ ಸೋಮೇಶ ಗೆಜ್ಜಿ ಸೇರಿದಂತೆ ವಿವಿಧ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.ಪೊಲೀಸರು ಬೇಧಿಸಿದ ವಿವಿಧ ಠಾಣೆಗಳ ಪ್ರಮುಖ ಪ್ರಕರಣಗಳು
-2025 ಡಿಸೆಂಬರ್ 18ರಂದು ರಾತ್ರಿ ಚಡಚಣ ಪೊಲೀಸ್ ಠಾಣೆ ವ್ಯಾಪ್ತಿಯ ಶಿರಾಡೋಣ ಗ್ರಾಮದ ಬೀರಪ್ಪ ದೇವಸ್ಥಾನದಲ್ಲಿ ₹6,51,000 ಮೌಲ್ಯದ ಬಂಗಾರ & ಬೆಳ್ಳಿಯ ಆಭರಣಗಳನ್ನು ಕಳುವು ಮಾಡಲಾಗಿತ್ತು. ಈ ಪ್ರಕರಣದಲ್ಲಿ ಮಹಾರಾಷ್ಟ್ರ ಮೂಲದ ಆರೋಪಿ ನಾಗೇಶ ಭೋಸಲೇಯನ್ನು ಬಂಧಿಸಿ, ಬಂಧಿತನಿಂದ ₹6,42,000 ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.-2026 ಮಾರ್ಚ್ 02ರಂದು ರಾತ್ರಿ ಚಡಚಣ ಪೊಲೀಸ್ ಠಾಣೆ ವ್ಯಾಪ್ತಿಯ ಟಾಕಳಿ ಗ್ರಾಮದಲ್ಲಿ ಮಲ್ಲಿಕಾರ್ಜುನ ತೇಲಿ ಎಂಬುವವರ ಪೀಕಪ್ ಗೂಡ್ಸ ವಾಹನ ಕಳ್ಳತನ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಮಹಾರಾಷ್ಟ್ರ ಮೂಲದ ಆರೋಪಿ ವಿಶಾಲ ಮೋಳೆಯನ್ನು ಬಂಧಿಸಿ, ಬಂಧಿತನಿಂದ 2,00,000 ಮೌಲ್ಯದ ಕಳುವಾದ ಪೀಕಪ್ ಗೂಡ್ಸ ವಾಹನ ಜಪ್ತಿ ಮಾಡಲಾಗಿದೆ.-2025 ಅಕ್ಟೋಬರ್ 13ರಂದು ರಾತ್ರಿ ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯ ಯರಗಲ್.ಬಿ.ಕೆ ಗ್ರಾಮದ ಲಕ್ಷ್ಮೀ ತಳವಾರ ರವರ ಮನೆಯಲ್ಲಿದ್ದ ₹4,50,000 ಮೌಲ್ಯದ ಬಂಗಾರ ಹಾಗೂ ಹಣ ಕಳುವು ಮಾಡಲಾಗಿತ್ತು. ಈ ಪ್ರಕರಣದಲ್ಲಿ ಮಹಾರಾಷ್ಟ್ರ ಮೂಲದ ಆರೋಪಿ ಶಂಕರ ಭೋಸ್ಲೆಯನ್ನು ಬಂಧಿಸಲಾಗಿದ್ದು, ಬಂಧಿತನಿಂದ 6,80,000 ಮೌಲ್ಯದ 162.930 ಗ್ರಾಂ ಬಂಗಾರದ ಆಭರಣ ವಶಪಡಿಸಿಕೊಳ್ಳಲಾಗಿದೆ.-2026 ಫೆಬ್ರುವರಿ 8 ರಂದು ಬೆಳಗ್ಗೆ 9 ಗಂಟೆಗೆ ಬೈಕ್ಮೇಲೆ ಬಂದಿದ್ದ ಇಬ್ಬರು ಸುಲಿಗೆಕೋರರು ಆಲಮೇಲ್ ಬಸ್ಸ್ಟ್ಯಾಂಡನಲ್ಲಿ ನಿಂತಿದ್ದ ಸವಿತಾ ಕಾಶೀರಾಯ ತೊರವಿ ರವರ ಕೊರಳಿನಲ್ಲಿದ್ದ ₹1,15,000 ಮೌಲ್ಯದ 1 ತೊಲಿ ಮಂಗಳಸೂತ್ರವನ್ನು ಕಿತ್ತುಕೊಂಡು ಹೋಗಿದ್ದರು. ಈ ಪ್ರಕರಣದಲ್ಲಿ ಮಹಾರಾಷ್ಟ್ರ ಮೂಲದ ಆರೋಪಿಗಳಾದ ದೀಪಕ ಮಾಳಿ, ಅರಮಾನ ಮಿಥಡೆ, ಪ್ರಕಾಶ ಮಾತಂಗಿ, ಕುನಾಲ ಸಾಳುಂಕೆ ಹಾಗೂ ಹರ್ಷದ ಬಡಗೂಜರರನ್ನು ಬಂಧಿಸಲಾಗಿದ್ದು, ಬಂಧಿತರಿಂದ ಆಲಮೇಲ ಪ್ರಕರಣದಲ್ಲಿನ ₹1,15,000 ಮೌಲ್ಯದ 1 ತೊಲಿ ಬಂಗಾರದ ಮಂಗಳಸೂತ್ರ ಹಾಗೂ ಇಂಡಿ ಬಸ್ ನಿಲ್ದಾಣದಲ್ಲಿ ಸುಲಿಗೆ ಮಾಡಿದ್ದ ₹1,15,000 ಮೌಲ್ಯದ 1 ತೊಲಿ ಬಂಗಾರದ ಮಂಗಳಸೂತ್ರ ಜೊತೆಗೆ ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್ಗಳು ಸೇರಿ ಒಟ್ಟು ₹2,90,000 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.