ಕನ್ನಡಪ್ರಭ ವಾರ್ತೆ ಮದ್ದೂರು
ಶ್ರೀರಾಘವೇಂದ್ರ ಗುರು ಸಾರ್ವಭೌಮರ 431ನೇ ವರ್ಧಂತಿಯನ್ನು ಪಟ್ಟಣದ ಕೋಟೆ ಬೀದಿಯ ಶ್ರೀರಾಘವೇಂದ್ರ ಮಂದಿರದಲ್ಲಿ ಮಂಗಳವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.ವರ್ಧಂತಿ ಅಂಗವಾಗಿ ನಡೆದ ದಿವ್ಯ ರಥೋತ್ಸವದಲ್ಲಿ ಸ್ಥಳೀಯರು ಸೇರಿದಂತೆ ನೆರೆ ಜಿಲ್ಲೆಗಳಿಂದ ಆಗಮಿಸಿದ್ದ ಅಸಂಖ್ಯಾತ ಭಕ್ತಾದಿಗಳು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ರಾಘವೇಂದ್ರ ಗುರು ಸಾರ್ವಭೌಮ ರಸೇವಾ ಟ್ರಸ್ಟ್ ವತಿಯಿಂದ ಮುಂಜಾನೆ ಮಠದಲ್ಲಿ ಪ್ರತಿಷ್ಠಾಪನೆ ಮಾಡಿರುವ ಶ್ರೀ ಸತ್ಯನಾರಾಯಣ ಸ್ವಾಮಿ ದೇವರಿಗೆ ಅಭಿಷೇಕದೊಂದಿಗೆ ಬೆಳ್ಳಿ ಕವಚ ಸಮರ್ಪಣೆ ಮಾಡಲಾಯಿತು.
ನಂತರ ರಾಯರ ಬೃಂದಾವನಕ್ಕೆ ಅಷ್ಟೋತ್ತರ ಪಾರಾಯಣದೊಂದಿಗೆ ಫಲ ಪಂಚಾಮೃತ ಅಭಿಷೇಕ ದ ಬಳಿಕ ಮಹಾ ಮಂಗಳಾರತಿ ನೆರವೇರಿಸಲಾಯಿತು. ಸಂಜೆ ಮಠದಲ್ಲಿ ತೊಟ್ಟಿಲು ಸೇವೆ ನಡೆಸಲಾಯಿತು. ಶಾಸಕ ಕೆ. ಎಂ.ಉದಯ್ ಸೇರಿದಂತೆ ಅನೇಕ ಗಣ್ಯರು, ಪಾಲ್ಗೊಂಡು ರಾಯರ ದರ್ಶನ ಪಡೆದು ಧನ್ಯತಾಭಾವ ಮೆರೆದರು.ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ರಾಮಚಂದ್ರ ಪ್ರಸಾದ್ ನೇತೃತ್ವದಲ್ಲಿ ಪದಾಧಿಕಾರಿಗಳು ಪಾಲ್ಗೊಂಡು ಭಕ್ತಾದಿಗಳಿಗೆ ಪ್ರಸಾದದ ರೂಪದಲ್ಲಿ ಅನ್ನಸಂತರ್ಪಣೆ ಮಾಡಿದರು. ರಥೋತ್ಸವ ಮತ್ತು ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶೃತಿಸಾಗರ್ ಭಜನಾ ಮಂಡಳಿ ಸದಸ್ಯರಿಂದ ಆಕರ್ಷಕ ಕೋಲಾಟ ಪ್ರದರ್ಶನ ಸಂಜೆ ಭಕ್ತಿ ಗೀತೆಗಳು ಗಾಯನ ನಡೆಯಿತು.
ಕಾರ್ಮಿಕ ಕಾಂಗ್ರೆಸ್ ಸಮಿತಿಗೆ ಸುಧಾ ಹನುಮ ನೇಮಕ
ಮಂಡ್ಯ: ಜಿಲ್ಲಾ ಕಾರ್ಮಿಕ ಕಾಂಗ್ರೆಸ್ ಸಮಿತಿಯ ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಮಂಡ್ಯದ ಗಾಂನಗರ ಬಡಾವಣೆಯ ನಿವಾಸಿ ಸುಧಾಹನುಮ ಅವರನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷ ಕೆ.ಎಂ.ರಾಮಕೃಷ್ಣ ಅವರು ಆದೇಶ ಹೊರಡಿಸಿದ್ದಾರೆ. ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಕೆ.ಪುಟ್ಟಸ್ವಾಮಿಗೌಡರ ಸೂಚನೆ ಮೇರೆಗೆ ಸುಧಾ ಹನುಮ ಅವರನ್ನು ನೇಮಕ ಮಾಡಲಾಗಿದ್ದು, ತಕ್ಷಣದಿಂದಲೇ ಪಕ್ಷದ ಸಂಘಟನೆ, ಬಲವರ್ಧನೆಗೆ ಕಾರ್ಯೋನ್ಮುಖರಾಗಬೇಕು ಎಂದು ಸೂಚಿಸಲಾಗಿದೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸುಧಾ ಹನುಮ ಅವರಿಗೆ ನೇಮಕಾತಿ ಪತ್ರವನ್ನು ಅಧ್ಯಕ್ಷ ಕೆ.ಎಂ.ರಾಮಕೃಷ್ಣ ವಿತರಿಸಿದರು. ಜಿಲ್ಲಾ ಕಾರ್ಯಾಧ್ಯಕ್ಷ ಗುರುಶಂಕರ್, ನಗರ ಉಪಾಧ್ಯಕ್ಷ ಉಮ್ಮಡಳ್ಳಿ ನಾಗೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಕೃಷ್ಣ, ಬಸರಾಳು ಹೋಬಳಿ ಅಧ್ಯಕ್ಷ ವೆಂಕಟೇಶ್ಚಾರ್ ಇದ್ದರು.