ಏಕಕಾಲಕ್ಕೆ 45 ರೌಡಿಶೀಟರ್‌ ಗಡೀಪಾರು

| Published : Jan 16 2025, 12:47 AM IST

ಸಾರಾಂಶ

ಹಲವು ಅಪರಾಧಿಗಳು ನಾಪತ್ತೆಯಾಗಿದ್ದು, ಅವರಿಗೆ ಶೋಧ ನಡೆಸಲಾಗುತ್ತಿದೆ. ಅಷ್ಟೇ ಅಲ್ಲದೇ ಗೂಂಡಾ ಕಾಯ್ದೆ ಹಾಕಲು ಸಹ ಠಾಣಾ ವ್ಯಾಪ್ತಿಯಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳಲು ಠಾಣಾ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಹುಬ್ಬಳ್ಳಿ:

ವಿವಿಧ ಪ್ರಕರಣಗಳಲ್ಲಿ ಪಾಲ್ಗೊಂಡ ಹುಬ್ಬಳ್ಳಿ-ಧಾರವಾಡ ಮಹಾನಗರದ 45 ರೌಡಿಶೀಟರ್‌ಗಳನ್ನು 6 ತಿಂಗಳ ವರೆಗೆ ಗಡೀಪಾರು ಮಾಡಿ ಕಮಿಷನರೇಟ್‌ ಆದೇಶಿಸಿದೆ. ಇಷ್ಟೊಂದು ಬೃಹತ್‌ ಸಂಖ್ಯೆಯಲ್ಲಿ ರೌಡಿಶೀಟರ್‌ಗಳನ್ನು ಏಕಕಾಲಕ್ಕೆ ಗಡೀಪಾರು ಮಾಡಿರುವುದು ಇದೇ ಮೊದಲು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಮಿಷನರ್‌ ಎನ್‌. ಶಶಿಕುಮಾರ, ಕೊಲೆ (8), ಕೊಲೆಗೆ ಪ್ರಯತ್ನ (12), ಸುಲಿಗೆ (03), ಮನೆ ಗಳ್ಳತನ (1), ಮಾನಭಂಗ (1), ಅಪಹರಣ (1), ಎನ್‌ಡಿಪಿಎಸ್ ಕಾಯ್ದೆ (9), ಅಬಕಾರಿ ಕಾಯ್ದೆ (1), ಓಸಿ ಮಟ್ಕಾ/ಕ್ರಿಕೆಟ್ ಬೆಟ್ಟಿಂಗ್ ಜೂಜಾಟ (6), ಹಲ್ಲೆ (1), ದೊಂಬಿ (2) ಪ್ರಕರಣದಲ್ಲಿ ಪಾಲ್ಗೊಂಡ ಒಟ್ಟು 45 ಮಂದಿಯನ್ನು 1996, 55 ಕಾಯ್ದೆಯಡಿ ಗಡೀಪಾರು ಮಾಡಲಾಗಿದೆ ಎಂದರು.ಸಾಮಾನ್ಯವಾಗಿ ಚುನಾವಣೆ, ಗಲಭೆಗಳಂತ ಪ್ರಕರಣ ನಡೆದಾಗ ಗಡೀಪಾರು ಮಾಡಲಾಗುತ್ತಿತ್ತು. ಈಗ ಮಹಾನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ತಡೆಯುವ ಉದ್ದೇಶದಿಂದ ಮಾಡಲಾಗುತ್ತಿದೆ. ಆದ್ದರಿಂದ ಗಡೀಪಾರು ಮಾಡುವ ಮೂಲಕ ಅಗತ್ಯ ಕಾನೂನು ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

45 ಅಪರಾಧಿಗಳನ್ನು ಬೀದರ್, ಯಾದಗಿರಿ, ಕಲಬುರಗಿ, ದಕ್ಷಿಣ ಕನ್ನಡ ಹಾಗೂ ಚಾಮರಾಜನಗರಗಳಿಗೆ ಗಡೀಪಾರು ಮಾಡಲಾಗಿದೆ. ಗಡಿಪಾರಾದ ಅಪರಾಧಿಗಳು ಜಿಲ್ಲೆ ನಿಗದಿಪಡಿಸಿದ ಠಾಣೆಯಲ್ಲಿ ವರದಿ ಮಾಡಿಕೊಳ್ಳಬೇಕು. ಆದೇಶ ಉಲ್ಲಂಘಿಸಿ ಮತ್ತೆ ನಗರಕ್ಕೆ ಬಂದರೆ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಸ್ಪಷ್ಟ ಪಡಿಸಿದರು.

ಹಲವು ಅಪರಾಧಿಗಳು ನಾಪತ್ತೆಯಾಗಿದ್ದು, ಅವರಿಗೆ ಶೋಧ ನಡೆಸಲಾಗುತ್ತಿದೆ. ಅಷ್ಟೇ ಅಲ್ಲದೇ ಗೂಂಡಾ ಕಾಯ್ದೆ ಹಾಕಲು ಸಹ ಠಾಣಾ ವ್ಯಾಪ್ತಿಯಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳಲು ಠಾಣಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಮಹಾನಗರದಲ್ಲಿ ಕಾನೂನು ಸುವ್ಯವಸ್ಥೆಗೆ ಯಾವುದೇ ಕಾರಣಕ್ಕೂ ಧಕ್ಕೆ ಬಾರದಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.

ಡಿಸಿಪಿಗಳಾದ ರವೀಶ ಸಿ.ಆರ್., ಮಹಾನಿಂಗ ನಂದಗಾಂವಿ, ಎಸಿಪಿಗಳಾದ ಪ್ರಶಾಂತ ಸಿದ್ದನಗೌಡರ, ವಿಜಯಕುಮಾರ ತಳವಾರ, ಉಮೇಶ ಚಿಕ್ಕಮಠ, ಶಿವಪ್ರಕಾಶ ನಾಯ್ಕ ಸೇರಿದಂತೆ ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಗೋಷ್ಠಿಯಲ್ಲಿದ್ದರು.