ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ರಾಜ್ಯದಲ್ಲೇ ಹಾಲು ಉತ್ಪಾದನೆಯಲ್ಲಿ ಚನ್ನರಾಯಪಟ್ಟಣ ತಾಲೂಕು 4ನೇ ಸ್ಥಾನ ಪಡೆಯುವ ಮೂಲಕ ವಾರ್ಷಿಕ ₹400 ರಿಂದ ₹500 ಕೋಟಿ ವಹಿವಾಟು ನಡೆಸುತ್ತಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.ಹೋಬಳಿಯ ಎಂ.ದಾಸಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಬಲ್ಕ್ ಮಿಲ್ಕ್ ಕೂಲರ್ ಘಟಕ( ಬಿಎಂಸಿ ಕೇಂದ್ರ )ವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲೇ ಹಾಲು ಉತ್ಪಾದನೆಯಲ್ಲಿ ಹಾಸನ ಹಾಲು ಒಕ್ಕೂಟ 2ನೇ ಸ್ಥಾನದಲ್ಲಿದ್ದು ಪ್ರತಿನಿತ್ಯ 13.50 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ, ಚನ್ನಪಟ್ಟಣ ತಾಲೂಕಿನಲ್ಲಿ ಪ್ರತಿನಿತ್ಯ 2.50 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುವ ಮೂಲಕ ರಾಜ್ಯದಲ್ಲೇ 4ನೇ ಸ್ಥಾನ ಪಡೆದಿದೆ.ರಾಜ್ಯ ಕೆಎಂಎಫ್ ಹಾಗೂ ಜಿಲ್ಲೆಯ ಡೈರಿ ಉದ್ಯಮದ ಬೆಳವಣಿಗೆಗೆ ಮಾಜಿ ಪ್ರಧಾನಿಗಳಾದ ಎಚ್ ಡಿ ದೇವೇಗೌಡರು ಹಾಗೂ ರೇವಣ್ಣನವರ ಕೊಡುಗೆ ಅಪಾರವಾಗಿದೆ, ಜಿಲ್ಲೆಯ ರೈತರು ಆರ್ಥಿಕವಾಗಿ ಸದೃಢಗೊಳ್ಳಲು ರೇವಣ್ಣನವರ ದೂರದೃಷ್ಟಿಯೇ ಕಾರಣ. ಅವರಿಗೆ ಕ್ಷೀರ ಬ್ರಹ್ಮ ಎಂದು ಬಿರುದು ನೀಡಿದರೆ ತಪ್ಪಾಗಲಾರದು ಎಂದರು.
ಕಳೆದ 3 ವರ್ಷಗಳಲ್ಲಿ ತಾಲೂಕಿನ ರೈತರಿಗೆ ಡೈರಿಗಳ ಮೂಲಕ ಸುಮಾರು ₹5 ಕೋಟಿ ವೆಚ್ಚದಲ್ಲಿ ಮ್ಯಾಟ್ ಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗಿದೆ, ಹೊಸ ಡೈರಿ ಕಟ್ಟಡ ನಿರ್ಮಾಣಕ್ಕೂ ಕೆಎಂಎಫ್ ಹಾಗೂ ಹಾಸನ ಹಾಲು ಒಕ್ಕೂಟ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹೆಚ್ಚಿನ ಅನುದಾನ ಕೊಡಲಾಗಿದೆ ಎಂದರು.
ಪ್ರತಿನಿತ್ಯ ಗ್ರಾಮದಲ್ಲಿ ಸುಮಾರು 2000 ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು ಗ್ರಾಮಸ್ಥರು ಸಂಘದಲ್ಲಿ ಗುಣಮಟ್ಟದ ಹಾಲನ್ನು ಮಾರಾಟ ಮಾಡುತ್ತಿರುವುದರಿಂದ ಸಂಘ ಹೆಚ್ಚು ಲಾಭ ಗಳಿಸಲು ಸಾಧ್ಯವಾಗಿದೆ. ಮುಂಬರುವ ದಿನಗಳಲ್ಲೂ ಸಂಘ ಹೆಚ್ಚು ಲಾಭ ಗಳಿಸಲು ಎಲ್ಲಾ ಸದಸ್ಯರು ಸಹಕಾರ ನೀಡುವಂತೆ ತಿಳಿಸಿದರು.
ಗ್ರಾಮದ ಚರ್ಚ್ ನ ಮಾಜಿ ವಂದನೀಯ ಗುರುಗಳಾದ ಎ.ಶಾಂತರಾಜ್ ಮಾತನಾಡಿ, ಗ್ರಾಮಸ್ಥರ ಒಗ್ಗಟ್ಟಿನಿಂದ ಸಂಘ ಇಷ್ಟು ಬಲಿಷ್ಠಗೊಳ್ಳಲು ಸಾಧ್ಯವಾಗಿದೆ, ಅಸೂಯೆ, ದ್ವೇಷ, ಮನಸ್ತಾಪಗಳನ್ನು ಬಿಟ್ಟು ಗ್ರಾಮದ ಒಳಿತಿಗಾಗಿ ಶ್ರಮಿಸುವಂತೆ ಹೇಳಿದರು.ಸಂಘದ ಅಧ್ಯಕ್ಷ ವಿಕ್ಟರ್ ಮಾತನಾಡಿ, ಕ್ಷೇತ್ರದ ಶಾಸಕರಾದ ಸಿ.ಎನ್. ಬಾಲಕೃಷ್ಣ ಅವರ ಸಹಕಾರದಿಂದ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸುಮಾರು ₹30 ಲಕ್ಷ ವೆಚ್ಚದ ಬಿಎಂಸಿ ಯೂನಿಟ್ ಘಟಕ ಉಚಿತವಾಗಿ ಹಾಸನ ಹಾಲು ಒಕ್ಕೂಟದಿಂದ ಕೊಡಿಸಿದ್ದಾರೆ, ಇದರಿಂದ ಗ್ರಾಮದ ರೈತರು ಡೈರಿಗೆ ಹಾಲನ್ನು ಹಾಕಲು ಹೆಚ್ಚಿನ ಕಾಲಾವಕಾಶ ಸಿಗಲಿದ್ದು, ಜೊತೆಗೆ ಸಂಘ ಲಾಭಗಳಿಸಲು ಸಾಧ್ಯವಾಗುತ್ತದೆ. ಈಗಾಗಲೇ ಗ್ರಾಮದ ಹಲವು ಅಭಿವೃದ್ಧಿ ಕೆಲಸಗಳಿಗೆ ಶಾಸಕರು ಹೆಚ್ಚಿನ ಸಹಕಾರ ನೀಡಿದ್ದು, ಮುಂಬರುವ ದಿನಗಳಲ್ಲೂ ಅವರ ಸಹಕಾರ ಹೀಗೆ ಮುಂದುವರಿಯಲಿ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮದ ಚರ್ಚ್ ನ ಮಾಜಿ ಗುರುಗಳಾದ ಎ.ಶಾಂತರಾಜ್ ಮತ್ತು ಹಾಲಿ ಗುರುಗಳಾದ ಸ್ವಾಮಿ ಆಂತೋನಿ ಪಿಂಟೋ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕಿ ಸೌಜನ್ಯ, ವಿಸ್ತರಣಾಧಿಕಾರಿ ವಿದ್ಯಾ, ಎಪಿಎಂಸಿ ಮಾಜಿ ಅಧ್ಯಕ್ಷರಾದ ದೊರೆಸ್ವಾಮಿ, ವಿ.ಎನ್. ಮಂಜುನಾಥ್, ಕೃಷಿ ಪತ್ತಿನ ಅಧ್ಯಕ್ಷರಾದ ಪಟೇಲ್ ಕುಮಾರ್, ಮಧು, ಮಾಜಿ ತಾಪಂ ಸದಸ್ಯ ಪುಟ್ಟಸ್ವಾಮಿ, ಮಾಜಿ ಕೃಷಿ ಪತ್ತಿನ ಅಧ್ಯಕ್ಷರಾದ ಎಚ್.ಬಿ. ರಂಗಸ್ವಾಮಿ, ಹುಲಿಕೆರೆ ಸಂಪತ್ ಕುಮಾರ್, ನವೀನ್ ಕುಮಾರ್, ವೀರಶೈವ ಸಮಾಜದ ಕಾರ್ಯದರ್ಶಿ ಕೃಪಾ ಶಂಕರ್, ಸಂಘದ ನಿರ್ದೇಶಕರಾದ ಪ್ರಶಾಂತ್, ಬೆರ್ನಾಡು, ನವೀನ್ ಕುಮಾರ್, ಜಾನ್ ಪಾಲ್, ಅಶೋಕ್ ಡೇವಿಡ್ ರೈಮಂಡ್, ಶಾಂತರಾಜ್ ಡಿ.ಸಿ., ಪಾತಿರಾಜ್, ಕಾಣಿಕ ಮೇರಿ, ಮೇರಿ ಶೈಲಜಾ, ಗ್ರಾಪಂ ಮಾಜಿ ಸದಸ್ಯೆ ಗ್ಯಾಂಗಿ ಸರೋಜ, ಸಂಘದ ಕಾರ್ಯದರ್ಶಿ ಜೇಮ್ಸ್ ವಿಲಿಯಂ , ಪರೀಕ್ಷಕಿ ಶೋಭಾ ರಾಣಿ, ಶಿಕ್ಷಕ ಅಂತೋನಿ ಪ್ರಸಾದ್, ಮುಖಂಡರಾದ ಡೈರಿ ಮಂಜಣ್ಣ, ಮುಳುಕೆರೆ ಗಿರೀಶ್, ಚಕ್ರಪಾಣಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.