- ಇನ್ನಷ್ಟು ಕುಟುಂಬಗಳ ಕಾರ್ಡ್ ರದ್ದಾಗುವ ಸಾಧ್ಯತೆ । ಈವರೆಗೆ ಕೇವಲ 149 ಕುಟುಂಬಕ್ಕಷ್ಟೇ ಬಿಪಿಎಲ್‌ ಸೌಲಭ್ಯ ವಾಪಾಸ್‌

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹ ಫಲಾನುಭವಿಗಳ ವಿರುದ್ಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಕಾಫಿನಾಡು ಚಿಕ್ಕಮಗಳೂರಿನ ಬರೋಬ್ಬರಿ 5,532 ಕುಟುಂಬಗಳ ಬಿಪಿಎಲ್‌ ಪಡಿತರ ಚೀಟಿ ಸೌಲಭ್ಯ ರದ್ದಾಗಿವೆ.

ಕಳೆದ ಐದು ತಿಂಗಳ ಅವಧಿಯಲ್ಲಿ ಇಲಾಖೆ ನಡೆಸಿದ ತಪಾಸಣೆಯಲ್ಲಿ ರಾಜ್ಯದ ಒಟ್ಟು 4 ಲಕ್ಷ ಕುಟುಂಬಕ್ಕೆ ಮರ್ಮಾಘಾತ ನೀಡಲಾಗಿದ್ದು, ಅವರ ಬಿಪಿಎಲ್ ಪಡಿತರ ಸೌಲಭ್ಯವನ್ನು ರದ್ದುಗೊಳಿಸಲಾಗಿದೆ. ಇದೇ ರೀತಿ ಜಿಲ್ಲೆಯ 5,532 ಕುಟುಂಬಗಳ ಬಿಪಿಎಲ್‌ ಕಾರ್ಡ್‌ ಸೌಲಭ್ಯ ರದ್ದು ಪಡಿಸಿ ಎಪಿಎಲ್‌ಗೆ ಪರಿವರ್ತನೆ ಮಾಡಲಾಗಿದೆ.


ಮುಂದುವರಿದ ತಪಾಸಣೆ

ಆಹಾರ ಇಲಾಖೆ ಇನ್ನೂ ಅನೇಕ ಅನರ್ಹ ಕಾರ್ಡ್‌ಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಆದಾಯ ತೆರಿಗೆ ಪಾವತಿ ದಾರರು ಅಥವಾ ಸ್ವಂತ ನಾಲ್ಕು ಚಕ್ರದ ವಾಹನ (ವಾಣಿಜ್ಯ ಬಳಕೆ ಹೊರತುಪಡಿಸಿ) ಹೊಂದಿರುವವರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅಂತಹ ಕಾರ್ಡ್‌ಗಳನ್ನು ಮುಲಾಜಿಲ್ಲದೆ ರದ್ದುಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯ ಇನ್ನಷ್ಟು ಕುಟುಂಬದ ಬಿಪಿಎಲ್‌ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

11,300 ಕುಟುಂಬದ ಕಾರ್ಡ್‌ ಪರಿಶೀಲನೆ

ಜಿಲ್ಲೆಯಲ್ಲಿ ಸುಮಾರು 2.54 ಲಕ್ಷ ಬಿಪಿಎಲ್‌ ಕಾರ್ಡ್‌ ಹೊಂದಿದ ಕುಟುಂಬಗಳಿದ್ದು, 71 ಸಾವಿರ ಎಪಿಎಲ್‌ ಕಾರ್ಡ್‌ ಕುಟುಂಬ ಗಳಿವೆ. ಈ ಪೈಕಿ ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆ (ಸಿಬಿಡಿಟಿ) ಆದಾಯ ತೆರಿಗೆ ಪಾವತಿ ಸೇರಿದಂತೆ ಮೊದಲಾದ ಅಂಶಗಳನ್ನು ಪರಿಗಣನೆ ಮಾಡಿ ಸುಮಾರು 11,300 ಕುಟುಂಬದ ಸ್ಥಿತಿ ಪರಿಶೀಲನೆ ಮಾಡುವಂತೆ ಜಿಲ್ಲಾ ಆಹಾರ ಇಲಾಖೆ ಅಧಿಕಾರಿಗಳಿಗೆ ಪಟ್ಟಿ ರವಾನೆ ಮಾಡಲಾಗಿತ್ತು. ಈ ಪೈಕಿ ಪರಿಶೀಲನೆ ಮಾಡಿ ಇದೀಗ 5,532 ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಪಡಿಸಿ ಎಪಿಎಲ್‌ಗೆ ಪರಿವರ್ತನೆ ಮಾಡಲಾಗಿದೆ.

ಸಂಘ ಸಂಸ್ಥೆ ಹಣ ವಹಿವಾಟು: ಕಾರ್ಡ್‌ ರದ್ದತಿಗೆ ತಡೆ

ಕೇಂದ್ರ ಸರ್ಕಾರ ನೀಡಿದ ಪಟ್ಟಿ ಪರಿಶೀಲನೆ ವೇಳೆ 2,417 ಕುಟುಂಬ ಸದಸ್ಯರು, ವಿವಿಧ ಸಂಘ ಸಂಸ್ಥೆ ಹಣ ಸದಸ್ಯರ ಬ್ಯಾಂಕ್‌ ಖಾತೆಗೆ ಜಮಾ ಆಗಿರುವುದು ಕಂಡು ಬಂದ ಹಿನ್ನೆಲೆ ಹಾಗೂ ಜಮಾ ಆಗಿರುವ ಮೊತ್ತ ಕುಟುಂಬದ ಆದಾಯ ಅಲ್ಲ ಎಂದು ದೃಢಪಟ್ಟ ಕಾರಣಕ್ಕೆ ಬಿಪಿಎಲ್‌ ಸೌಲಭ್ಯ ರದ್ದು ಪಡಿಸುವುದಕ್ಕೆ ತಡೆ ಹಾಕಲಾಗಿದೆ ಎಂದು ಜಿಲ್ಲಾ ಆಹಾರ ಇಲಾಖೆ ಅಧಿಕಾರಿಗಳು ಕನ್ನಡಪ್ರಭ ಮಾಹಿತಿ ನೀಡಿದ್ದಾರೆ.---ಬಾಕ್ಸ್‌----

149 ಕುಟುಂಬಕ್ಕಷ್ಟೆ ಬಿಪಿಎಲ್‌ ಸೌಲಭ್ಯ ವಾಪಾಸ್‌ ಬಿಪಿಎಲ್‌ ಕಾರ್ಡ್‌ ರದ್ದಾದ ಕುಟುಂಬ ಸದಸ್ಯರು ಸರಿಯಾದ ದಾಖಲೆ ಮಾಹಿತಿ ನೀಡಿದರೆ ಬಿಪಿಎಲ್‌ ಕಾರ್ಡ್‌ ವಾಪಾಸ್‌ ನೀಡುವುದಾಗಿ ಸರ್ಕಾರ ತಿಳಿಸಿತ್ತು. ಈ ಪೈಕಿ ಜಿಲ್ಲೆಯಲ್ಲಿ ಈವರೆಗೆ ಕೇವಲ 149 ಕುಟುಂಬಕ್ಕಷ್ಟೇ ಬಿಪಿಎಲ್‌ ಸೌಲಭ್ಯ ವಾಪಾಸ್‌ ನೀಡಲಾಗಿದೆ.---ಬಾಕ್ಸ್‌---

ಯಾವ ತಾಲೂಕಿನಲ್ಲಿ ಬಿಪಿಎಲ್‌ ಎಷ್ಟು ರದ್ದು, ಎಷ್ಟು ವಾಪಾಸ್‌?

ತಾಲೂಕುಬಿಪಿಎಲ್‌ನಿಂದ ಎಪಿಎಲ್‌ಗೆಎಷ್ಟು ವಾಪಾಸ್‌ ಬಿಪಿಎಲ್‌ಗೆ

ಅಜ್ಜಂಪುರ31807

ಚಿಕ್ಕಮಗಳೂರು ನಗರ91320

ಚಿಕ್ಕಮಗಳೂರು ಗ್ರಾಮಾಂತರ55614

ಕಡೂರು1,69474

ಕೊಪ್ಪ3321

ಮೂಡಿಗೆರೆ9840

ಎನ್‌ಆರ್‌ಪುರ2100

ಶೃಂಗೇರಿ1940

ತರೀಕೆರೆ33133

ಒಟ್ಟು5,532149

---ಕೋಟ್‌---

ಜಿಲ್ಲೆಯಲ್ಲಿ ಕಾರ್ಡ್‌ ಪರಿಶೀಲನೆ ನಿರಂತರವಾಗಿ ನಡೆಸಲಾಗುತ್ತಿದೆ. ಈವರೆಗೆ ಸುಮಾರು 5 ಸಾವಿರಕ್ಕೂ ಅಧಿಕ ಬಿಪಿಎಲ್‌ ಕಾರ್ಡ್‌ ಅನ್ನು ಎಪಿಎಲ್‌ಗೆ ಬದಲಾವಣೆ ಮಾಡಲಾಗಿದೆ. ಸರಿಯಾದ ದಾಖಲೆ ಸಲ್ಲಿಸಿದರೆ ಪರಿಶೀಲನೆ ಮಾಡಿ ಎಪಿಎಲ್‌ನಿಂದ ಬಿಪಿಎಲ್‌ಗೆ ಮತ್ತೆ ಬದಲಾವಣೆ ಮಾಡಿಕೊಡಲಾಗುವುದು.

- ಯೋಗಾನಂದ, ಉಪ ನಿರ್ದೇಶಕರು,ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಚಿಕ್ಕಮಗಳೂರು