ಖಾನಾಪುರ: ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಡಿ ಖಾನಾಪುರ ವಿಧಾನಸಭಾ ಕ್ಷೇತ್ರಕ್ಕೆ ₹ 500 ಕೋಟಿಯಷ್ಟು ಅನುದಾನ ಸಿಕ್ಕಿದ್ದು, ಇದರಿಂದ ಸಾವಿರಾರು ಕುಟುಂಬಗಳು ನೆಮ್ಮದಿಯ ಜೀವನ ನಡೆಸುತ್ತಿವೆ ಎಂದು ಮಾಜಿ ಶಾಸಕಿ, ಎಐಸಿಸಿ ಕಾರ್ಯದರ್ಶಿ ಡಾ.ಅಂಜಲಿ ನಿಂಬಾಳಕರ ಮಾಹಿತಿ ನೀಡಿದರು.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸರ್ಕಾರ ಕಳೆದ 1000 ದಿನಗಳಲ್ಲಿ ಈ ಯೋಜನೆಗಳಿಗಾಗಿ ₹ 1.16 ಲಕ್ಷ ಕೋಟಿ ವ್ಯಯಿಸಿದೆ. ರಾಜ್ಯದ 1.37 ಕೋಟಿ ಕುಟುಂಬಗಳಿಗೆ ಇದರಿಂದ ಪ್ರಯೋಜನ ಸಿಕ್ಕಿದೆ. ನಮ್ಮ ತಾಲೂಕಿಗೆ ಈ ಯೋಜನೆಗಳಡಿ ವಿತರಣೆಗೆ ಪ್ರತಿ ತಿಂಗಳು ₹ 20 ಕೋಟಿ ಅನುದಾನ ಲಭ್ಯವಾಗುತ್ತಿದ್ದು, ಗ್ಯಾರಂಟಿ ಯೋಜನೆಗಳು ಪ್ರಾರಂಭವಾಗಿ 27 ತಿಂಗಳಲ್ಲಿ ₹ 500 ಕೋಟಿಗೂ ಹೆಚ್ಚು ಹಣ ಲಭ್ಯವಾಗಿದೆ. ಈ ಮೂಲಕ ಬಡವರು, ಸಾಮಾನ್ಯರು, ಶ್ರಮಜೀವಿಗಳು, ಕಾರ್ಮಿಕರು, ರೈತರು ಮತ್ತು ಮಹಿಳೆಯರ ಸಬಲೀಕರಣಕ್ಕೆ ಪಕ್ಷ ಹೆಚ್ಚು ಒತ್ತು ನೀಡಿದೆ. ಆದರೆ, ಕೇಂದ್ರ ಸರ್ಕಾರ ಇದಕ್ಕೆ ತದ್ವಿರುದ್ಧವಾಗಿದ್ದು, ಮೋದಿ ಸರ್ಕಾರದ ನೀತಿಯು ಅದಾನಿ-ಅಂಬಾನಿಯಂತಹ ಉದ್ಯಮಿಗಳ ಪರವಾಗಿದೆ. ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡುವತ್ತ ಮೋದಿ ವಾಲುತ್ತಿದ್ದಾರೆ. ಇದನ್ನು ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.