6 ವರ್ಷದಲ್ಲಿ 6 ಸಾವಿರ ಕಿ.ಮೀ. ಪರಿಸರ ಜಾಗೃತಿ ಅಭಿಯಾನ

| Published : Jun 06 2025, 12:15 AM IST

ಸಾರಾಂಶ

ಇಲ್ಲಿಗೆ ಸಮೀಪದ ಕರಕೀಕಟ್ಟಿ ಗ್ರಾಮದ ಮುತ್ತಣ್ಣ ತೀರ್ಲಾಪುರ ಹಸಿರೇ ಉಸಿರು ಘೋಷ ವಾಕ್ಯದೊಂದಿಗೆ ಗಾಂಧಿ ವೇಷ ಧರಿಸಿ 6 ವರ್ಷದಲ್ಲಿ 6 ಸಾವಿರ ಕಿ.ಮೀ. ಸೈಕಲ್ ಮೇಲೆ ಕ್ರಮಿಸಿ ಪರಿಸರ ಜಾಗೃತಿ ಅಭಿಯಾನ ಮಾಡಿದ್ದಾರೆ.

ಹೊಳೆಆಲೂರ: ಇಲ್ಲಿಗೆ ಸಮೀಪದ ಕರಕೀಕಟ್ಟಿ ಗ್ರಾಮದ ಮುತ್ತಣ್ಣ ತೀರ್ಲಾಪುರ ಹಸಿರೇ ಉಸಿರು ಘೋಷ ವಾಕ್ಯದೊಂದಿಗೆ ಗಾಂಧಿ ವೇಷ ಧರಿಸಿ 6 ವರ್ಷದಲ್ಲಿ 6 ಸಾವಿರ ಕಿ.ಮೀ. ಸೈಕಲ್ ಮೇಲೆ ಕ್ರಮಿಸಿ ಪರಿಸರ ಜಾಗೃತಿ ಅಭಿಯಾನ ಮಾಡಿದ್ದಾರೆ.ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಆರೋಗ್ಯ ಕೇಂದ್ರ, ಬಸ್ ನಿಲ್ದಾಣ ಹೀಗೆ ಸಾರ್ವಜನಿಕ ಸ್ಥಳಗಳು ಸೇರಿದಂತೆ ಮನೆಮನೆಗಳಿಗೆ ತೆರಳಿ ಪರಿಸರ ಜಾಗೃತಿ ಮೂಡಿಸುವುದರ ಜೊತೆಗೆ ಅಲ್ಲಲ್ಲಿ ಸಸಿ ನೆಡುವ ಕಾರ್ಯ ಮಾಡಿದ್ದಾರೆ.

ಗದಗ ಜಿಲ್ಲೆಯ ವಿವಿಧ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಗಿಡಮರ ಬೆಳೆಸುವ ಬಗ್ಗೆ ಅರಿವು ಮೂಡಿಸಿದ್ದಾರೆ.

ರಾಜ್ಯದ ಯಾದಗಿರಿ, ಬೆಳಗಾವಿ, ಕೊಪ್ಪಳ, ಹಾವೇರಿ, ಬೆಂಗಳೂರು, ನವಲಗುಂದ, ನರಗುಂದ, ರೋಣ, ಗಜೇಂದ್ರಗಡ, ಬಾಗಲಕೋಟೆ, ವಿಜಯಪುರ ಸೇರಿದಂತೆ ಅನೇಕ ಪಟ್ಟಣಗಳಲ್ಲಿ ಪರಿಸರ ಉಳಿಸುವ ಮತ್ತು ಬೆಳೆಸುವ ಕಾರ್ಯ ಮಾಡಿದ್ದಾರೆ. ಅನೇಕರು ಇವರ ಪರಿಸರ ಕಾಳಜಿ ಅನುಸರಿಸುತ್ತಿದ್ದಾರೆ.

ಅಯೋಧ್ಯೆ ವರೆಗೆ ಪಾದಯಾತ್ರೆ, ರೈತರು ಮತ್ತು ಯೋಧರ ಬಗ್ಗೆ ಜಾಗೃತಿ, ವಿಜ್ಞಾನಿಗಳು, ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳ ನುಡಿ ಮುಟ್ಟಿಸುವ ಕಾರ್ಯ ಮಾಡಿದ್ದಾರೆ. ಗಾಂಧಿ ವೇಷ ಧರಿಸಿ ಸ್ವಾತಂತ್ರ್ಯೋತ್ಸವ, ರಾಜ್ಯೋತ್ಸವ, ಗಣರಾಜ್ಯೋತ್ಸವ ಹೀಗೆ ಸಾರ್ವಜನಿಕವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಇದು ಅಪಾರ ಜನ ಮೆಚ್ಚುಗೆ ಗಳಿಸಿದೆ.

ನಾನು ಪರಿಸರ ಜಾಗೃತಿ ಮಾಡುತ್ತಾ ಬರುತ್ತಿದ್ದು, ಅನೇಕರ ಪ್ರೋತ್ಸಾಹ ಸಿಕ್ಕಿದೆ. ಈ ನನ್ನ ಅಭಿಯಾನದಲ್ಲಿ ಭಾಗವಹಿಸಿ, ಪ್ರೋತ್ಸಾಹಿಸಿದವರಿಗೆ ಕೃತಜ್ಞತೆಗಳು ಎಂದು ಗಾಂಧಿ ವೇಷಧಾರಿ ಮುತ್ತಣ್ಣ ತೀರ್ಲಾಪುರ, ಹೇಳಿದರು.