ಸಾರಾಂಶ
ಸರ್ಕಾರದ ಆದೇಶದನ್ವಯ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಕೆಯಾಗದಿದ್ದರೆ ಅಧಿಕಾರಿಗಳ ವಿರುದ್ದ ತಾಲ್ಲೂಕು ಕಚೇರಿ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ಯುವ ವೇದಿಕೆ ರಾಜ್ಯಾಧ್ಯಕ್ಷ ರೂಪೇಶ್ ರಾಜಣ್ಣ ತಿಳಿಸಿದರು.
ಹೊಸಕೋಟೆ: ಸರ್ಕಾರದ ಆದೇಶದನ್ವಯ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಕೆಯಾಗದಿದ್ದರೆ ಅಧಿಕಾರಿಗಳ ವಿರುದ್ದ ತಾಲ್ಲೂಕು ಕಚೇರಿ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ಯುವ ವೇದಿಕೆ ರಾಜ್ಯಾಧ್ಯಕ್ಷ ರೂಪೇಶ್ ರಾಜಣ್ಣ ತಿಳಿಸಿದರು.
ನಗರದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ನಾಮಫಲಕದಲ್ಲಿ ಶೇ.60 ಕನ್ನಡ ಭಾಷೆ ಬಳಕೆ ಅಭಿಯಾನದಲ್ಲಿ ತಾಲೂಕು ದಂಢಾದಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿ, ಕನ್ನಡ ನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಇಲ್ಲಿನ ಭಾಷೆ ಸಂಸ್ಕೃತಿ ಬಗ್ಗೆ ಗೌರವ ಅಭಿಮಾನ ಇರಬೇಕು.
ಸರ್ಕಾರ ಕೂಡ ನಾಮಫಲಕಗಳಲ್ಲಿ ಶೇ 60 ಕನ್ನಡ ಭಾಷೆ ಬಳಕೆಗೆ ಜನವರಿ ೨೮ರವರೆಗೆ ಗಡುವು ನೀಡಿದೆ. ನಗರದಲ್ಲಿ ಹಾಕಿರುವ ನಾಮಫಲಕಗಳನ್ನು ಶೇ 60ಕ್ಕೆ ಬದಲಾವಣೆ ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ವಜಾಗೊಳಿಸುವವರೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದರು.
ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ಶಶಿವರ್ಧನ್ ಮಾತನಾಡಿ. ಆಯಾ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸರ್ಕಾರ ಶೇ 60 ರಷ್ಟು ಬಳಕೆ ಕಡ್ಡಾಯ ಮಾಡಿರುವುದು ಸ್ವಾಗತಾರ್ಹ.
ನಾಮಫಲಕಗಳನ್ನು ಹಾಕಿರುವ ಎಲ್ಲಾ ಅಂಗಡಿ ಮಾಲೀಕರು ಎಚ್ಚೆತ್ತು ಜನವರಿ 28ರ ಒಳಗೆ ಕನ್ನಡ ನಾಮಫಲಕ ಹಾಕದಿದ್ದರೆ ನಾಮಫಲಕಗಳನ್ನು ಕಿತ್ತೊಗೆಯಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಾಮಾಜಿಕ ಹೋರಾಟಗಾರ ಕರುಣೆಯ ಗೋಡೆ ಚೇತನ್, ಜಯಕರ್ನಾಟಕ ಸಂಘಟನೆ ಅರುಣ್, ಪೆತ್ತನಹಲ್ಳಿ ನವೀನ್, ಕಾಲೋನಿ ಆನಂದ್. ಚೇತನ್, ಬಾಗ್ಯ ಸರವಣ, ರಾಧಿಕಾ ಸುರೇಶ್, ತೇಜಸ್ವಿನಿ ಗೌಡ, ಜನಸೇನೆ ಮಂಜುನಾಥ್, ಸೇರಿದಂತೆ ಸಾವಿರಾರು ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.