ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ರಂಗಭೂಮಿ ಸಂಸ್ಥೆ ಆರಂಭವಾಗಿ 6 ದಶಕಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ 60ರ ಸಂಭ್ರಮದ ಉದ್ಘಾಟನಾ ಕಾರ್ಯಕ್ರಮ ನ.3ರಂದು ಸಂಜೆ 4.30ಕ್ಕೆ ನಗರದ ಕುಂಜಿಬೆಟ್ಟಿನಲ್ಲಿರುವ ಶಾರದಾ ರೆಸಿಡೆನ್ಸಿಯಲ್ ಶಾಲೆಯ ಗೀತಾಂಜಲಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.ಈ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದ ರಂಗಭೂಮಿಯ ಪ್ರ.ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ, ರಂಗಭೂಮಿ ಗೌರವಾಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್ ಉದ್ಘಾಟನೆ ನೆರವೇರಿಸಲಿದ್ದು, ಅಧ್ಯಕ್ಷ ಡಾ.ತಲ್ಲೂರು ಶಿವರಾಮ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ರಂಗಶಿಕ್ಷಣದ ಸಂಚಾಲಕ ವಿದ್ಯಾವಂತ ಆಚಾರ್ಯ, ರಂಗಭಾಷೆಯ ಎಚ್.ಜಯಪ್ರಕಾಶ್ ಕೆದ್ಲಾಯ ಉಪಸ್ಥಿತರಿರಲಿದ್ದಾರೆ ಎಂದರು.60ರ ಸಂಭ್ರಮದ ಅಂಗವಾಗಿ ಯುವಜನತೆ ಹಾಗೂ ಮಕ್ಕಳಲ್ಲಿ ರಂಗಭೂಮಿಯ ಕುರಿತು ಅರಿವು ಮೂಡಿಸಿ, ಆಸಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಉಡುಪಿಯ ಆಯ್ದ ಪ್ರೌಢಶಾಲೆಗಳಲ್ಲಿ ರಂಗ ತರಬೇತಿ ಮತ್ತು ನಾಟಕ ನಿರ್ಮಾಣವನ್ನು ಕೈಗೆತ್ತಿಗೊಳ್ಳಲಿದ್ದೇವೆ. ನವೆಂಬರ್ - ಡಿಸೆಂಬರ್ನಲ್ಲಿ ಕಾರ್ಯಗತಗೊಳಿಸಿ, ಈ ನಾಟಕಗಳನ್ನು ತಮ್ಮ ಶಾಲೆಯ ವಾರ್ಷಿಕೋತ್ಸವದಲ್ಲಿ ಹಾಗೂ ರಂಗಭೂಮಿಯ ವತಿಯಿಂದ ಡಿಸೆಂಬರ್ನಲ್ಲಿ ನಡೆಯುವ ಮಕ್ಕಳ ನಾಟಕೋತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ. ಈ ಯೋಜನೆಗೆ ರಂಗಭೂಮಿಯು ನುರಿತ ರಂಗ ನಿರ್ದೇಶಕರನ್ನು ನಿಯೋಜಿಸಲಿದ್ದು, ಉಡುಪಿಯ ಹಿರಿ - ಕಿರಿಯ ನಿರ್ದೇಶಕರು ಪಾಲ್ಗೊಳ್ಳುತ್ತಾರೆ ಎಂದವರು ತಿಳಿಸಿದರು. ಅದೇ ರೀತಿ, ಉಡುಪಿ ಪರಿಸರದ ಕಾಲೇಜು ವಿದ್ಯಾರ್ಥಿಗಳಿಗೆ ರಂಗಭೂಮಿಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ‘ರಂಗಭೂಮಿ ರಸಗ್ರಹಣ’ ಶಿಬಿರವನ್ನು ಆಯೋಜಿಸಲು ಉದ್ದೇಶಿಸಿದ್ದೇವೆ. ಕರ್ನಾಟಕ ಸರ್ಕಾರದ ಸಂಸ್ಥೆಯಾದ ‘ಯಕ್ಷ ರಂಗಾಯಣ ಕಾರ್ಕಳ’ ಕೈ ಜೋಡಿಸಲಿದೆ. ಇದರ ನೇತೃತ್ವವನ್ನು ನೀನಾಸಂ ಹೆಗ್ಗೋಡಿನ ಮಾಜಿ ಪ್ರಾಂಶುಪಾಲ ಹಾಗೂ ಯಕ್ಷ ರಂಗಾಯಣ ಕಾರ್ಕಳದ ನಿರ್ದೇಶಕ ವೆಂಕಟರಮಣ ಐತಾಳರು ವಹಿಸಲಿದ್ದು, ಹೆಸರಾಂತ ರಂಗಕರ್ಮಿಗಳಾದ ಪ್ರಸನ್ನ, ಅಕ್ಷರ, ನಾಗಾಭರಣ, ಮಂಡ್ಯ ರಮೇಶ್, ಸಿಹಿ ಕಹಿ ಚಂದ್ರು, ಕೆ.ಜಿ. ಕೃಷ್ಣಮೂರ್ತಿ, ಶ್ವೇತಾ ಎಚ್. ಕೆ. ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ನ.16 ರಿಂದ 18ರ ವರೆಗೆ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ನಡೆಯಲಿರುವ ಮೂರು ದಿನಗಳ ವಸತಿ ಸಹಿತ ಶಿಬಿರದಲ್ಲಿ ಆಸಕ್ತ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ರಂಗಭೂಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ್ ಶೆಟ್ಟಿ, ಉಪಾಧ್ಯಕ್ಷ ಭಾಸ್ಕರ್ ರಾವ್ ಕಿದಿಯೂರು, ಕಾರ್ಯಕಾರಿ ಸಮಿತಿ ಡಾ.ವಿಷ್ಟುಮೂರ್ತಿ ಪ್ರಭು, ಸಹ ಸಂಚಾಲಕ ರವಿರಾಜ್ ನಾಯಕ್, ರಂಗಭಾಷೆಯ ಸಂಚಾಲಕ ಜಯಪ್ರಕಾಶ್ ಕೆದ್ಲಾಯ, ರಂಗ ಶಿಕ್ಷಣದ ಸಂಚಾಲಕ ವಿದ್ಯಾವಂತ ಆಚಾರ್ಯ ಉಪಸ್ಥಿತರಿದ್ದರು.