ಜಗಳೂರು ತಾಲೂಕಿನಾದ್ಯಂತ ಭಾನುವಾರ ಸಂಜೆ ಸುರಿದ ಅಕಾಲಿಕ ರೋಹಿಣಿ ಮಳೆಯ ಅಬ್ಬರ ಹಾಗೂ ಭೀಕರ ಗುಡುಗು-ಸಿಡಿಲಿನ ಆರ್ಭಟಕ್ಕೆ 6 ಮೇಕೆಗಳು ಸ್ಥಳದಲ್ಲೇ ಮೃತಪಟ್ಟು, ವ್ಯಕ್ತಿಯೊಬ್ಬ ತೀವ್ರ ಗಾಯಗೊಂಡ ಘಟನೆ ಸಂಭವಿಸಿದೆ. ಸಿಡಿಲಿನ ಆರ್ಭಟಕ್ಕೆ ಮರೇನಹಳ್ಳಿ ಮತ್ತು ವೆಂಕಟೇಶಪುರ ಗ್ರಾಮಗಳು ನಲುಗಿಹೋಗಿವೆ.
- ಮರೇನಹಳ್ಳಿಯಲ್ಲಿ ಸಿಡಿಲು ಅಪ್ಪಳಿಸಿ ಕೃಷ್ಣಪ್ಪ ಎಂಬವರ ಆರು ಮೇಕೆಗಳ ಸಾವು
- - - - ವೆಂಕಟೇಶಪುರದಲ್ಲಿ ರೈತ ಧನಜ ನಾಯ್ಕಗೆ ಸಿಡಿಲು ಬಡಿದು ತಲೆ, ಕೈಗೆ ಗಂಭೀರ ಗಾಯ- ಜಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ದಾಖಲಾಗಿರುವ ಧನಜ ನಾಯ್ಕ
- ದುರಂತದಲ್ಲಿ ಧನಜ ನಾಯ್ಕಗೆ ಸೇರಿದ ಒಂದು ಮೇಕೆಯೂ ಸಾವು- - -
ಕನ್ನಡಪ್ರಭ ವಾರ್ತೆ ಜಗಳೂರುತಾಲೂಕಿನಾದ್ಯಂತ ಭಾನುವಾರ ಸಂಜೆ ಸುರಿದ ಅಕಾಲಿಕ ರೋಹಿಣಿ ಮಳೆಯ ಅಬ್ಬರ ಹಾಗೂ ಭೀಕರ ಗುಡುಗು-ಸಿಡಿಲಿನ ಆರ್ಭಟಕ್ಕೆ 6 ಮೇಕೆಗಳು ಸ್ಥಳದಲ್ಲೇ ಮೃತಪಟ್ಟು, ವ್ಯಕ್ತಿಯೊಬ್ಬ ತೀವ್ರ ಗಾಯಗೊಂಡ ಘಟನೆ ಸಂಭವಿಸಿದೆ. ಸಿಡಿಲಿನ ಆರ್ಭಟಕ್ಕೆ ಮರೇನಹಳ್ಳಿ ಮತ್ತು ವೆಂಕಟೇಶಪುರ ಗ್ರಾಮಗಳು ನಲುಗಿಹೋಗಿವೆ.
ಭಾನುವಾರ ಸಂಜೆ 5.30ರ ಸುಮಾರಿಗೆ ಮರೇನಹಳ್ಳಿಯಲ್ಲಿ ಏಕಾಏಕಿ ಬಿರುಗಾಳಿ ಸಹಿತ ಭಾರಿ ಮಳೆ ಆರಂಭವಾಯಿತು. ಈ ವೇಳೆ ಸಿಡಿಲು ಅಪ್ಪಳಿಸಿ ಗ್ರಾಮದ ಬಡರೈತ ಕೃಷ್ಣಪ್ಪ ಬಿನ್ ಪಾಪಯ್ಯ ಎಂಬವರ ಆರು ಮೇಕೆಗಳ ಸ್ಥಳದಲ್ಲೇ ಸಾವನ್ನಪ್ಪಿವೆ. ಜೀವನಕ್ಕೆ ಆಧಾರವಾಗಿದ್ದ ಮೇಕೆಗಳನ್ನು ಕಳೆದುಕೊಂಡ ರೈತ ಕೃಷ್ಣಪ್ಪ ಆರ್ಥಿಕ ಸಂಕಷ್ಟ ಎದುರಾಗಿದ್ದರಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.ವೆಂಕಟೇಶಪುರದಲ್ಲಿ ರೈತನಿಗೆ ಗಾಯ:
ವೆಂಕಟೇಶಪುರದಲ್ಲೂ ಸಿಡಿಲಿನ ಆಘಾತಕ್ಕೆ ಮತ್ತೊಬ್ಬ ರೈತ ಸಿಲುಕಿದ್ದಾರೆ. ಮಳೆಯಿಂದ ಪಾರಾಗಲು ನಿಂತಿದ್ದ ಧನಜ ನಾಯ್ಕ್ ಬಿನ್ ನರಸಿಂಗ ನಾಯ್ಕ್ (56) ಎಂಬವರಿಗೂ ಸಿಡಿಲು ಬಡಿದಿದ್ದು ತಲೆ ಹಾಗೂ ಕೈ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿವೆ. ತಕ್ಷಣವೇ ಅವರನ್ನು ಜಗಳೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಇದೇ ದುರಂತದಲ್ಲಿ ಅವರಿಗೆ ಸೇರಿದ ಒಂದು ಮೇಕೆಯೂ ಮೃತಪಟ್ಟಿದೆ.ತಕ್ಷಣ ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ:
ಒಂದೇ ದಿನ ಜಗಳೂರು ತಾಲೂಕಿನ 2 ಗ್ರಾಮಗಳಲ್ಲಿ ಸಿಡಿಲು ಸೃಷ್ಟಿಸಿರುವ ಭೀಕರ ಅವಾಂತರಕ್ಕೆ ಜನತೆ ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಕಂದಾಯ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಘಟನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಗ್ರಾಮಸ್ಥರ ಒತ್ತಾಯ:
ಜೀವನಕ್ಕೆ ಆಧಾರ ಮಾಡಿಕೊಂಡಿದ್ದ 6 ಮೇಕೆಗಳನ್ನು ಕಳೆದುಕೊಂಡು ಆರ್ಥಿಕವಾಗಿ ಬೀದಿಗೆ ಬಿದ್ದಿರುವ ಬಡರೈತ ಕೃಷ್ಣಪ್ಪ ಹಾಗೂ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಗಾಯಾಳು ಧನಜ ನಾಯ್ಕ್ ಅವರಿಗೆ ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣವೇ ಸೂಕ್ತ ಆರ್ಥಿಕ ಪರಿಹಾರ ಘೋಷಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.- - -
-೩೧ಜೆಎಲ್ಆರ್ ಚಿತ್ರ3:ಜಗಳೂರು ತಾಲೂಕಿನ ಮರೇನಹಳ್ಳಿಯಲ್ಲಿ ಸಿಡಿಲಿಗೆ ಬಲಿಯಾದ ಮೇಕೆಗಳು.