ಕನ್ನಡಪ್ರಭ ವಾರ್ತೆ ಬೆಳಗಾವಿ

ಹಾರೂಗೇರಿ ಪಟ್ಟಣದ ವಿದ್ಯಾನಗರದಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಭೇದಿಸಿ ಅಂತಾರಾಜ್ಯ ಕಳ್ಳರ ಗ್ಯಾಂಗ್‌ನ 7 ಮಂದಿಯನ್ನು ಬಂಧಿಸಿದ್ದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ರಾಮರಾಜನ್‌ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿಷೇಕ ಸುರೇಶ್ ಪಾಂಡೆ ಎಂಬುವರು ನೀಡಿದ ದೂರಿನ ಮೇರೆಗೆ ಹಾರೂಗೇರಿ ಪಟ್ಟಣದ ವಿದ್ಯಾನಗರದ ಅವರ ಮನೆಯ ಕೀಲಿ ಮುರಿದು ಸುಮಾರು 28 ತೊಲೆ ಚಿನ್ನದ ಆಭರಣಗಳು (ಸುಮಾರು ₹22 ಲಕ್ಷ ಮೌಲ್ಯ) ಹಾಗೂ 1.5 ಕೆಜಿ ಬೆಳ್ಳಿ ಪೂಜಾ ಸಾಮಗ್ರಿಗಳು (ಸುಮಾರು ₹1.30 ಲಕ್ಷ ಮೌಲ್ಯ) ಕಳವು ಮಾಡಿದ್ದರು. ಜೊತೆಗೆ ಮತ್ತೊಂದು ಮನೆಯಲ್ಲಿಯೂ ಸುಮಾರು 2.5 ತೊಲೆ ಚಿನ್ನದ ಆಭರಣಗಳು ಹಾಗೂ ನಗದು ಕಳವು ಮಾಡಿದ್ದರು. ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಪ್ರಕರಣ ಬೇಧಿಸಲು ವಿಶೇಷ ತಂಡ ರಚಿಸಿ ತನಿಖೆ ನಡೆಸಲಾಗುತ್ತಿತ್ತು. ಈ ವೇಳೆ ಆರೋಪಿಗಳಾದ ರವಿ ಅಣ್ಣಾ ಶಿಂಧೆ(32), ಸುನಿಲ್ ನಾಥಾ ಪವಾರ್ (27), ಶಂಕರ್ ಅಲಿಯಾಸ್ ಬಿಹಾರಿ ಜಾಧವ್ (25), ದಿಲೀಪ್ ತುಕಾರಾಮ್ ಶಿಂಧೆ (25), ಕಿಶೋರ್ ರಾಜಬಹು ಮೋರೆ (27), ವಿನೋದ್ ಗಂಗಾರಾಮ್ ಶಿಂಧೆ(23) ಹಾಗೂ ಮಿಥುನ್ ಚಿಮ್ಮಾಜಿ ಜಾಧವ್ (24) ಎಂಬುರನ್ನು ಬಂಧಿಸಲಾಗಿದೆ. ಬಂಧಿತರು ಮಹಾರಾಷ್ಟ್ರ ರಾಜ್ಯದ ವಿವಿಧ ಜಿಲ್ಲೆಗಳ ನಿವಾಸಿಗಳಾಗಿದ್ದಾರೆ. ಅಲ್ಲದೇ, ಬಂಧಿತರಿಂದ ₹ 26 ತೊಲೆ 7 ಗ್ರಾಂ ಚಿನ್ನದ ಆಭರಣಗಳು (₹29 ಲಕ್ಷ ಮೌಲ್ಯ), 1.80 ಕೆಜಿ ಬೆಳ್ಳಿ ಆಭರಣಗಳು (₹3.02 ಲಕ್ಷ ಮೌಲ್ಯ), ಒಂದು ಕಾರು, 6 ಮೊಬೈಲ್ ಫೋನ್‌ಗಳು ಹಾಗೂ ₹9,830 ನಗದು ಸೇರಿದಂತೆ ಒಟ್ಟು ₹36.11 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.ಬಂಧಿತರು ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಾದ ಉಗರ, ರಬಕವಿ, ಚಿಕ್ಕಮಗಳೂರು, ಗುಲ್ಬರ್ಗಾ, ವಿಜಯಪುರ, ಕೋಲಾರ, ಹರಪನಹಳ್ಳಿ, ಚಿತ್ರದುರ್ಗ, ರಾಮನಗರ, ತುಮಕೂರು, ಬಾಗಲಕೋಟೆ, ದಾವಣಗೆರೆ, ಗದಗ, ಹಾಸನ ಸೇರಿದಂತೆ ಹಲವೆಡೆ ಮನೆಗಳ ಕಳ್ಳತನ ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಈ ಕಾರ್ಯಾಚರಣೆಯನ್ನು ಸಿಪಿಐ ರತನ್ ಕುಮಾರ್ ಜೀರಗ್ಯಾಳ ಹಾಗೂ ಪಿಎಸ್‌ಐ ಮಾಳಪ್ಪ ಪೂಜಾರಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿ ನಡೆಸಿದ್ದಾರೆ ಎಂದು ಹೇಳಿದರು.