ಸಾರಾಂಶ
ಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆದ ಮೂವತ್ನಾಲ್ಕನೇ ವರ್ಷದ ಮೂರನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ 8 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಚಿತ್ರದುರ್ಗ: ಎಲ್ಲರ ಮನೆಯಲ್ಲು ಮಾನವರು ಹುಟ್ಟುತ್ತಾರೆ. ಆದರೆ ಮನುಷ್ಯತ್ವ ಹುಟ್ಟುವುದಿಲ್ಲ. ಪ್ರತಿ ಮನೆಯಲ್ಲಿ ಮಾನವೀಯತೆ ಕಾರ್ಯಗಳು ನಡೆದಾಗ ಆ ಮನೆಯ ವ್ಯಕ್ತಿ ನಿಜವಾದ ಮಾನವನಾಗತ್ತಾನೆ ಎಂದು ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮಿಗಳು ನುಡಿದರು.
ಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆದ ಮೂವತ್ನಾಲ್ಕನೇ ವರ್ಷದ ಮೂರನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ಮದುವೆ ಆದ ನಂತರ ಅತ್ತೆ-ಮಾವ, ತಂದೆ-ತಾಯಿಯನ್ನು ದೂರವಿಡುತ್ತಾರೆ. ಮನೆಯಲ್ಲಿ ಪ್ರಾಣಿ ಪಕ್ಷಿಗಳನ್ನು ಸಾಕುತ್ತಾರೆ. ಅವುಗಳ ಮೇಲೆ ತೋರಿಸುವ ಪ್ರೀತಿ-ಕರುಣೆಯನ್ನು ಹಿರಿಯ ಜೀವಗಳ ಮೇಲೆ ತೋರಿಸಬೇಕು. ಅವರೊಟ್ಟಿಗೆ ಕೂಡಿಬಾಳುವುದರಿಂದ ಕುಟುಂಬದಲ್ಲಿ ನೆಮ್ಮದಿ ಸಾಧ್ಯವಾಗುತ್ತದೆ ಎಂದರು.ನಾವು ಮಾನವರಾಗಿ ಹುಟ್ಟುತ್ತೇವೆ. ಮಾನವರ ಜತೆ ಪ್ರೀತಿಯಿಂದ ನಡೆದುಕೊಳ್ಳಬೇಕು. ಆಗ ಜೀವನ ಸಾರ್ಥಕವಾಗುತ್ತದೆ. ಮಾನವತೆಯಿಲ್ಲದಾಗ ಅವನು ದಾನವನಾಗುತ್ತಾನೆ. ಜಗತ್ತಿನಲ್ಲಿ ಮಾನವೀಯತೆ ದೊಡ್ಡದು. ವಧು ವರರು ಮಾನವೀಯ ಗುಣಗಳಿಂದ ಹಿರಿಯರನ್ನು ಕಾಣಬೇಕೆಂದರು.
ಪ್ರಭುಲಿಂಗ ಸ್ವಾಮಿಗಳು ಮಾತನಾಡಿ, ಚಿತ್ರದುರ್ಗ ಮುರುಘಾಮಠದಲ್ಲಿ ಬಡವರ ಕಲ್ಯಾಣ ನಡೆಸಿಕೊಡುವುದರ ಮುಖೇನ ಆರ್ಥಿಕವಾಗಿ ದುರ್ಬಲವಾಗಿರುವ ಬಡವರ ಬದುಕನ್ನು ಕಟ್ಟಿಕೊಳ್ಳಲು ನೆರವಾಗಿರುವುದು ಸ್ಮರಣೀಯ ಎಂದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜಪೀರ್ ಮಾತನಾಡಿದರು. ಕಾರ್ಯಕ್ರಮದಲ್ಲಿ 8 ಜೋಡಿಗಳ ವಿವಾಹ ನೆರವೇರಿಸಲಾಯಿತು.ಜಮುರಾ ಕಲಾಲೋಕದ ಕಲಾವಿದರು ಪ್ರಾರ್ಥಿಸಿದರು. ವೀರಭದ್ರಪ್ಪ ಸ್ವಾಗತಿಸಿದರು. ಟಿ.ಪಿ.ಜ್ಞಾನಮೂರ್ತಿ ನಿರೂಪಿಸಿದರು.