ಸಾರಾಂಶ
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದ್ದು ಮುನ್ನಚ್ಚರಿಕಾ ಕ್ರಮವಾಗಿ ಟಿಬಿ ಡ್ಯಾಂ ಅಧಿಕಾರಿಗಳು ಜಲಾಯಶದ 33 ಗೇಟ್ಗಳ ಪೈಕಿ 26 ಗೇಟ್ಗಳನ್ನು 2.5 ಅಡಿ ಎತ್ತರಿಸಿ 85000 ಕ್ಯುಸೆಕ್ ನೀರನ್ನು ನದಿಗೆ ಹರಿಸಿದ್ದಾರೆ.
ಮುನಿರಾಬಾದ್:
ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ ನದಿಗೆ 26 ಗೇಟ್ಗಳ ಮೂಲಕ 85000 ಕ್ಯುಸೆಕ್ ನೀರು ಹರಿಸಲಾಗಿದೆ. ಹೀಗಾಗಿ ನದಿ ಪಾತ್ರದಲ್ಲಿರುವ ಗ್ರಾಮದ ಜನರು ಸುರಕ್ಷಿತೆಯಿಂದ ಇರಬೇಕೆಂದು ಅಧಿಕಾರಿಗಳು ಹೇಳಿದ್ದಾರೆ.ಮಲೆನಾಡಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ತುಂಗಾ ಜಲಾಶಯದಿಂದ 70000 ಹಾಗೂ ಭದ್ರ ಜಲಾಶಯದಿಂದ 20000 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಇದರಿಂದ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದೆ. ಮುನ್ನಚ್ಚರಿಕಾ ಕ್ರಮವಾಗಿ ಟಿಬಿ ಡ್ಯಾಂ ಅಧಿಕಾರಿಗಳು ಜಲಾಯಶದ 33 ಗೇಟ್ಗಳ ಪೈಕಿ 26 ಗೇಟ್ಗಳನ್ನು 2.5 ಅಡಿ ಎತ್ತರಿಸಿ 85000 ಕ್ಯುಸೆಕ್ ನೀರನ್ನು ನದಿಗೆ ಹರಿಸಿದ್ದಾರೆ.
ಹಂಪಿ ಸ್ಮಾರಕ ಜಲಾವೃತ:ನದಿಗೆ ಅಪಾರ ಪ್ರಮಾಣದ ನೀರು ಹರಿಬಿಟ್ಟ ಪರಿಣಾಮ ಹಂಪಿಯ ಕೆಲ ಸ್ಮಾರಕಗಳು ಜಲಾವೃತಗೊಂಡಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅದೇ ರೀತಿ ನದಿ ಪಾತ್ರದ ಜನರು ಯಾವುದೇ ಕಾರಣಕ್ಕೂ ನದಿಗೆ ಇಳಿಯದಂತೆ ಮನವಿ ಮಾಡಿದ್ದರೂ ಸುರಕ್ಷತೆಯಿಂದ ಇರುವಂತೆ ಸೂಚಿಸಿದ್ದಾರೆ.