ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘವು ಕಳೆದ 85 ವರ್ಷಗಳಿಂದ ಸಮುದಾಯದ ಪ್ರಗತಿಗೆ ತನ್ನದೇ ಕೊಡುಗೆ ನೀಡಿದೆ. ಆರೋಗ್ಯ ತಪಾಸಣೆ ಸೇರಿದಂತೆ ನಿರಂತರವಾಗಿ ವಿವಿಧ ಸೇವಾ ಕಾರ್ಯಗಳನ್ನು ನಡೆಸುತ್ತಾ ಬಂದಿದೆ. ಪ್ರಸ್ತುತ ಸಂಘಕ್ಕೆ ನೂತನ ಕಟ್ಟಡ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ. ಕಸ್ತೂರಿ ಮೋಹನ್ ಪೈ ಹೇಳಿದ್ದಾರೆ.ನಗರದ ಸಿ.ವಿ. ನಾಯಕ್ ಸಭಾಂಗಣದಲ್ಲಿ ಭಾನುವಾರ ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ‘ಮೆಡಿಕಲ್ ಮಿಷನ್’ನ 85ನೇ ವರ್ಷಾಚರಣೆ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಿಎಸ್ಬಿ ಸಮಾಜವು ಸಮಾಜದ ಏಳಿಗೆಗೆ ಪೂರಕವಾದ ಉತ್ತಮ ಕೊಡುಗೆ ನೀಡುತ್ತಾ ಬಂದಿದೆ. ಈ ಸೇವೆ ನಿರಂತರವಾಗಿ ಮುಂದುವರಿಯಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಅವರು ತಿಳಿಸಿದರು.ನೇತ್ರ ತಜ್ಞ ಡಾ. ಸುಜೀರ್ ಮಾತನಾಡಿ, ಬ್ಯಾಂಕಿಂಗ್, ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಎ.ಎಸ್. ಪೈ ಅವರ ಕೊಡುಗೆ ಅನನ್ಯ. ಅವರಿಂದಾಗಿ ಸಮುದಾಯದಲ್ಲಿ ಉದ್ಯಮಿಗಳು, ವೈದ್ಯರು ಬೆಳೆಯಲು ಸಾಧ್ಯವಾಗಿದೆ ಎಂದರು.
ಡಾ. ವಾಮನ ಶೆಣೈ ಮಾತನಾಡಿ, ಜನರ ನಂಬಿಕೆಗೆ ತಕ್ಕಂತೆ ಜಿಎಸ್ಬಿ ಸಮಾಜದ ವೈದ್ಯರು ಉತ್ತಮ ಸೇವೆ ನೀಡುತ್ತಿದ್ದು, ಜನರ ನಂಬಿಕೆ ಉಳಿಸಿಕೊಂಡಿದ್ದಾರೆ. ಇದರಿಂದಾಗಿ ಉನ್ನತ ಸ್ಥಾನಕ್ಕೆ ತಲುಪಲು ಸಾಧ್ಯವಾಗಿದೆ ಎಂದು ಹೇಳಿದರು.ಕೆಎಂಸಿ ಮೆಡಿಕಲ್ ಕಾಲೇಜಿನ ನಿವೃತ್ತ ಡೀನ್ ಎಂ. ವೆಂಕಟರಾಯ ಪ್ರಭು ಮಾತನಾಡಿದರು.
ವೈದ್ಯರಿಗೆ ಸನ್ಮಾನ:ಸಮಾರಂಭದಲ್ಲಿ ಸಮುದಾಯದ ಸಾಧಕ ವೈದ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಬಳಿಕ ಕೆಎಂಸಿ ಆಸ್ಪತ್ರೆಯ ವೈದ್ಯರ ತಂಡದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. 200ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ಸಂಘದ ಖಜಾಂಚಿ ಕುಂಬ್ಳೆ ನರಸಿಂಹ ಪ್ರಭು ಸ್ವಾಗತಿಸಿದರು. ಕಾರ್ಯದರ್ಶಿ ಡಾ.ಎ. ರಮೇಶ್ ಪೈ ವಂದಿಸಿದರು. ಸುಚಿತ್ರಾ ಎಸ್. ಶೆಣೈ ನಿರೂಪಿಸಿದರು. ಆರೋಗ್ಯ ಶಿಬಿರದ ಸಂಯೋಜಕ ಎಂ.ಆರ್. ಕಾಮತ್, ಪ್ರಮುಖರಾದ ಡಾ. ನರಸಿಂಹ ಪೈ, ಬಿ.ಆರ್. ಶೆಣೈ, ಎಚ್.ವಿ. ಕಾಮತ್, ಜಿ.ಎಂ. ಪ್ರಭು, ಶಾಂಭವಿ ಪ್ರಭು, ಗೋವಿಂದ್ರಾಯ ಪ್ರಭು, ದಿನಕರ್ ಕಾಮತ್, ದಿನೇಶ್ ಬಾಳಿಗ, ಎಂ.ಎಸ್. ಪ್ರಭು, ನರಸಿಂಹ ಭಟ್, ವೆಂಕಟೇಶ್ ಎನ್. ಬಾಳಿಗಾ, ಪ್ರಕಾಶ್ ಭಕ್ತ, ಬಾಲಕೃಷ್ಣ ಸುವರ್ಣ ಇದ್ದರು.