ಕನ್ನಡಪ್ರಭ ವಾರ್ತೆ ಬೆಂಗಳೂರು

ಪಾಲಿಕೆ ಅಧಿಕಾರಿಗಳ ಮೇಲೆ ಹಲ್ಲೆ, ಜನರ ಗೋಳಾಟ, ಬಹುಪಾಲು ಸಾರ್ವಜನಿಕರ ಬೆಂಬಲದ ನಡುವೆ ಮೊದಲ ಹಂತದಲ್ಲಿ ಒಟ್ಟು ಐದು ಪಾಲಿಕೆಗಳಿಂದ ಒಂದು ತಿಂಗಳ ಅವಧಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸುಮಾರು 879 ಕಿಲೋಮೀಟರ್ ಪಾದಚಾರಿ ರಸ್ತೆ ಒತ್ತುವರಿ ತೆರವು ನಡೆದಿದೆ.

ಸಚಿವ ಕೃಷ್ಣ ಬೈರೇಗೌಡ ಅವರ ಮೊದಲ ಪ್ರಯತ್ನ ಫಲವಾಗಿ ಜು.1ರಂದು ಉದ್ಘಾಟನೆಗೊಂಡು ಜು.31ರವರೆಗೆ ಐದು ಪಾಲಿಕೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಪಾದಚಾರಿ ರಸ್ತೆ ಒತ್ತುವರಿ ತೆರವು ಮಾಡಿದ್ದಾರೆ.

ದಕ್ಷಿಣ ಪಾಲಿಕೆಯಿಂದ 112.86 ಕಿಲೋಮೀಟರ್, ಪಶ್ಚಿಮ ಪಾಲಿಕೆಯಿಂದ 167 ಕಿಲೋಮೀಟರ್, ಕೇಂದ್ರ ಪಾಲಿಕೆಯಿಂದ 175ಕಿಲೋ ಮೀಟರ್, ಉತ್ತರ ಪಾಲಿಕೆಯಿಂದ 175 ಕಿಲೋ ಮೀಟರ್ , ಪೂರ್ವ ಪಾಲಿಕೆಯಿಂದ 150 ಕಿಲೋ ಮೀಟರ್ ಪಾದಚಾರಿ ರಸ್ತೆಯಲ್ಲಿದ್ದ ಅಡೆತಡೆ ಇಲ್ಲದೆ ಮುಕ್ತವಾಗಿದೆ.

ಶುಕ್ರವಾರ ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 3.35 ಕಿ.ಮೀ ಒತ್ತುವರಿ ತೆರವು ಮಾಡಲಾಗಿದ್ದು, ಪದ್ಮನಾಭನಗರ ವಿಭಾಗದ ಕನಕಪುರ ಮುಖ್ಯ ರಸ್ತೆ (ಪಶ್ಚಿಮ ಭಾಗ) ಬನಶಂಕರಿ ದೇವಸ್ಥಾನದ ಬಳಿ, ಬಿಟಿಎಂ ಲೇಔಟ್ ವಿಭಾಗದ ತಾವರೆಕೆರೆ ಮುಖ್ಯ ರಸ್ತೆ, ಹೊರ ವರ್ತುಲ ರಸ್ತೆ ಸರ್ವಿಸ್ ರಸ್ತೆ ಮತ್ತು 1ನೇ ಕ್ರಾಸ್ ರಸ್ತೆ, ಎಚ್‌ಎಸ್‌ಆರ್ ಲೇಔಟ್ ವಿಭಾಗದ 22ನೇ ಕ್ರಾಸ್‌ನಲ್ಲಿ ಒತ್ತುವರಿ ತೆರವು ಮಾಡಲಾಗಿದೆ.


ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 167.97 ಕಿ.ಮೀ. ಪಾದಚಾರಿ ರಸ್ತೆ ಒತ್ತುವರಿ ತೆರವು ಮಾಡಲಾಗಿದೆ. ಶುಕ್ರವಾರ 4.6 ಕಿ.ಮೀ.ಒತ್ತುವರಿ ತೆರವು ಮಾಡಲಾಗಿದೆ. ಹೆಗ್ಗನಹಳ್ಳಿ ವಿಭಾಗದ ಪೀಣ್ಯ ಕೈಗಾರಿಕಾ ಪ್ರದೇಶ ಉಪ ವಿಭಾಗದ ರಾಜಗೋಪಾಲನಗರ ಮುಖ್ಯ ರಸ್ತೆ, ಬಸವನಗುಡಿ ವಿಭಾಗದ ದೊಡ್ಡಗಣಪತಿ ಉಪ ವಿಭಾಗದ ಶಾಪ್‌ ಸ್ಟ್ರೀಟ್‌ ಮತ್ತು 9ನೇ ಅಡ್ಡರಸ್ತೆ, ಸುಬ್ಬಾರಾಮ ಚೆಟ್ಟಿ ರಸ್ತೆ 1ನೇ ಮುಖ್ಯ ರಸ್ತೆ, ವಿದ್ಯಾಪೀಠ ಉಪ ವಿಭಾಗದ ಗಿರಿನಗರ ಮುಖ್ಯ ರಸ್ತೆಯಲ್ಲಿ ಶ್ರೀರಾಮಮಂದಿರದಿಂದ ಶ್ರೀ ರಾಘವೇಂದ್ರ ದೇವಸ್ಥಾನ, ಕೆಂಗೇರಿ ವಿಭಾಗದಲ್ಲಿ ದ್ವಾರಕವಾಸ ಮುಖ್ಯ ರಸ್ತೆಯಲ್ಲಿ ಡಿ ಗ್ರೂಪ್‌ ಆರ್ಚ್‌ ರಸ್ತೆಯಲ್ಲಿ ಅಂದ್ರಳ್ಳಿ ಮುಖ್ಯ ರಸ್ತೆಯಿಂದ ಕುವೆಂಪು ವೃತ್ತದವರೆಗೆ, ಮಹಾಲಕ್ಷ್ಮೀಪುರ ವಿಭಾಗದಲ್ಲಿ ಉಲ್ಲಾಸ್‌ ಥಿಯೇಟರ್‌ ರಸ್ತೆಯಲ್ಲಿ ಸಿಎನ್‌ಜಿ ಗ್ಯಾಸ್‌ ಬಂಕ್‌ ಶನಿಮಹಾತ್ಮ ದೇವಸ್ಥಾನ ರಸ್ತೆವರೆಗೆ ಒತ್ತುವರಿ ತೆರವು ಮಾಡಲಾಗಿದೆ.

ಕೇಂದ್ರ ಪಾಲಿಕೆಯಲ್ಲಿ175 ಕಿ.ಮೀ ತೆರವು

ಕೇಂದ್ರವಿಭಾಗದಿಂದ 175 ಕಿಲೋ ಮೀಟರ್ ಪಾದಚಾರಿ ರಸ್ತೆಯ ಒತ್ತುವರಿ ತೆರವು ಮಾಡಲಾಗಿದೆ. ಉತ್ತರ ಜುಲೈ 1ರಿಂದ 31ರವರೆಗೆ ಕೈಗೊಂಡ ಕಾರ್ಯಾಚರಣೆಯಲ್ಲಿ ಒಟ್ಟು 175.05 ಕಿಲೋಮೀಟರ್ ಉದ್ದ ಪಾದಚಾರಿ ರಸ್ತೆ ಒತ್ತುವರಿ ತೆರವು ಮಾಡಲಾಗಿದೆ. ಪೂರ್ವ ವಿಭಾಗದಲ್ಲಿ 150 ಕಿಲೋ ಮೀಟರ್ ರಸ್ತೆ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಪಾಲಿಕೆ ತಿಳಿಸಿದೆ.