ಬಿಡಿಕಾಸಿಗೆ ಗುಜರಿ ಸೇರಿದ 2024-25ನೇ ಸಾಲಿನ ಪುಸ್ತಕ

| Published : Jan 30 2025, 12:31 AM IST

ಸಾರಾಂಶ

ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಾರ್ಗದರ್ಶಿಯ 2024-25ನೇ ಸಾಲಿಗೆ ಸಂಬಂಧಿಸಿದ ಪುಸ್ತಕಗಳು ತಾಲೂಕಿನ ಸಿದ್ದಾಪುರ ಗುಜರಿ ಅಂಗಡಿಗೆ ಮಾರಾಟ ಮಾಡಲಾಗಿದ್ದು, ಈ ಘಟನೆ ಮಂಗಳವಾರ ಸಂಜೆ ಬೆಳಕಿಗೆ ಬಂದಿದೆ.

ಸಮಾಜ ಕಲ್ಯಾಣ, ಅಲಸಂಖ್ಯಾತ ಇಲಾಖೆಯ ಪರೀಕ್ಷಾ ಮಾರ್ಗದರ್ಶಿ ಪುಸ್ತಕಗಳ ಮಾರಾಟಕನ್ನಡಪ್ರಭ ವಾರ್ತೆ ಕಾರಟಗಿ

ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಾರ್ಗದರ್ಶಿಯ 2024-25ನೇ ಸಾಲಿಗೆ ಸಂಬಂಧಿಸಿದ ಪುಸ್ತಕಗಳು ತಾಲೂಕಿನ ಸಿದ್ದಾಪುರ ಗುಜರಿ ಅಂಗಡಿಗೆ ಮಾರಾಟ ಮಾಡಲಾಗಿದ್ದು, ಈ ಘಟನೆ ಮಂಗಳವಾರ ಸಂಜೆ ಬೆಳಕಿಗೆ ಬಂದಿದೆ.

ಕೊಪ್ಪಳ ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಯ ಶಾಲೆಗಳಲ್ಲಿ ಕಲಿಕೆಯಲ್ಲಿ ಬರೋಬ್ಬರಿ 7 ಸಾವಿರ ವಿದ್ಯಾರ್ಥಿಗಳು ಹಿಂದುಳಿದಿದ್ದಾರೆಂಬ ಸಂಗತಿ ಇತ್ತೀಚೆಗೆ ಬಹಿರಂಗವಾಗಿತ್ತು. ಅಂಕಿ-ಅಂಶ ತಗ್ಗಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲೆಯಲ್ಲಿ ನಾನಾ ಕಾರ್ಯಕ್ರಮ ಆಯೋಜಿಸಿದೆ. ವಾಸ್ತವ ಸ್ಥಿತಿ ಹೀಗಿದ್ದರೂ, ನೂರಾರು ಪುಸ್ತಕಗಳು ಗುಜರಿ ಸೇರಿದ್ದು ಹೇಗೆ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶ್ನೆ ವ್ಯಕ್ತವಾಗಿದೆ.

ಸಿದ್ದಾಪುರದ ಗುಜರಿ ಅಂಗಡಿಯಲ್ಲಿ 2024-25ನೇ ಸಾಲಿನ‌ ವಿವಿಧ ಇಲಾಖೆಗಳ ಪುಸ್ತಕಗಳು ಬಿಡಿಕಾಸಿಗೆ ಮಾರಾಟ ಮಾಡಿದ್ದು ಯಾರು ಎನ್ನುವುದು ಈಗ ಚರ್ಚೆಯ ವಿಷಯವಾಗಿದೆ.

ಕಾರಟಗಿ ತಾಲೂಕು ವ್ಯಾಪ್ತಿಯ ಜಮಾಪುರದಲ್ಲಿ ಮೊರಾರ್ಜಿ ವಸತಿ ಶಾಲೆಯಲ್ಲಿ 10 ಹಾಗೂ 12ನೇ ತರಗತಿ ಮಕ್ಕಳಿಗೆ ವಸತಿ ವ್ಯವಸ್ಥೆಯಿದೆ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಹಾಗೂ 10ನೇ ತರಗತಿ ಮಕ್ಕಳಿಗೆ ನೀಡಿದ್ದ ಪರೀಕ್ಷಾ ಮಾರ್ಗದರ್ಶಿಯ ಇತಿಹಾಸ, ಇಂಗ್ಲಿಷ್, ಉರ್ದು ಭಾಷೆಯ ನೂರಾರು ಪುಸ್ತಕಗಳು ಅಂಗಡಿಯಲ್ಲಿ ಮಾರಾಟ ಮಾಡಲಾಗಿದೆ. ಸಿದ್ದಾಪುರದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಉರ್ದು ವಸತಿ ಶಾಲೆಯಿದೆ. ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಘದಿಂದ 12ನೇ ತರಗತಿ ಮಕ್ಕಳಿಗೆ ಪರೀಕ್ಷಾ ಸುಧಾರಣೆಗೆ ಸರ್ಕಾರದಿಂದ ವಿತರಿಸಿರುವ ಗಣಿತ ಹಾಗೂ ಭೌತಶಾಸ್ತ್ರ ಪುಸ್ತಕಗಳನ್ನು ಮಾರಾಟ ಮಾಡಲಾಗಿದೆ. ಮಕ್ಕಳ ಕಲಿಕೆಗೆ ಸರ್ಕಾರ ಕೋಟಿಗಟ್ಟಲೆ ಖರ್ಚು ಮಾಡಿ ಪಠ್ಯ, ಪುಸ್ತಕ ವಿತರಿಸುತ್ತಿದೆ. ಸದ್ಯ ಗುಜರಿಯಲ್ಲಿ ದೊರೆತಿರುವ ಪುಸ್ತಕಗಳ ಮೇಲೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಚಿವ ಮಹಾದೇವಪ್ಪ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹಮ್ಮದ್ ಖಾನ್ ಫೋಟೋಗಳಿವೆ. ಮುಂದಿನ ಮಾರ್ಚ್‌ ತಿಂಗಳಲ್ಲೇ ಪರೀಕ್ಷೆ ನಡೆಯಲಿದೆ. ಹೀಗಿದ್ದಾಗ ಅಷ್ಟೊಂದು ಪ್ರಮಾಣದಲ್ಲಿ ಹೇಗೆ ಗುಜರಿಗೆ 2024-25ನೇ ಸಾಲಿನ ಪುಸ್ತಕಗಳು ಮಾರಾಟವಾದವು ಎನ್ನುವುದು ಯಕ್ಷ ಪ್ರಶ್ನೆ ಹಾಗೂ ಜನರ ಅಚ್ಚರಿಗೆ ಕಾರಣವಾಗಿದೆ. ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ವಹಿಸಬೇಕು ಎನ್ನುವುದು ಜನರ ಆಗ್ರಹವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸಿದ್ದಾಪುರದ ವಸತಿ ಶಾಲೆ ಮುಖ್ಯಶಿಕ್ಷಕಿಗೆ ಮಾಹಿತಿ ಕೇಳಲಾಗಿದೆ. ಅವರ ಶಾಲೆ ಪುಸಕ್ತಗಳಲ್ಲ ಎಂದು ಮೌಖಿಕವಾಗಿ ಉತ್ತರಿಸಿದ್ದಾರೆ. ಸದ್ಯ ಬೆಂಗಳೂರಿಗೆ ಮೀಟಿಂಗ್‌ಗೆ ಬಂದಿದ್ದು, ಕೊಪ್ಪಳಕ್ಕೆ ಹೋದ ಬಳಿಕ ವರದಿ ಪಡೆದು ಅಗತ್ಯ ಕ್ರಮಕೈಗೊಳ್ಳುಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಡಿಡಿ ಅಜ್ಜಪ್ಪ ತಿಳಿಸಿದ್ದಾರೆ.